ವಕೀಲರೊಬ್ಬರ ವಿರುದ್ಧ ಆಕ್ಷೇಪಾರ್ಹ ಲೇಖನ ಪ್ರಕಟಿಸಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಕನ್ನಡ ಪತ್ರಕರ್ತರೊಬ್ಬರು ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. [ಡಿ ಎಸ್ ವಿಶ್ವನಾಥ ಶೆಟ್ಟಿ ಮತ್ತು ಟಿಎನ್ ರತ್ನರಾಜ್ ನಡುವಣ ಪ್ರಕರಣ].
ಲೇಖನಗಳಲ್ಲಿ ಪತ್ರಕರ್ತ ಬಳಸಿದ ಭಾಷೆ ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಹೇಳಿದೆ.
ತಮ್ಮ ವಿರುದ್ಧ ಮಾನನಷ್ಟ ವರದಿ ಪ್ರಕಟಿಸಿದ್ದ ʼತುಂಗಾ ವಾರ್ತೆʼ ವಾರಪತ್ರಿಕೆಯ ಡಿ ಎಸ್ ವಿಶ್ವನಾಥ್ ಶೆಟ್ಟಿ ಅವರ ವಿರುದ್ಧ ನೋಟರಿ ಮತ್ತು ವಕೀಲ ಟಿ ಎನ್ ರತ್ನರಾಜ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಶೆಟ್ಟಿ ಅವರಿಗೆ 1 ವರ್ಷ ಜೈಲು ಶಿಕ್ಷೆ ಮತ್ತು ₹ 6 ಲಕ್ಷ ದಂಡ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಶೆಟ್ಟಿ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅವರು ಬಳಸಿರುವ ಭಾಷೆ ಆಕ್ಷೇಪಾರ್ಹವಾಗಿದೆ ಎಂದು ತಿಳಿಸಿದ ಉಚ್ಚ ನ್ಯಾಯಾಲಯ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಒಂದು ತಿಂಗಳ ಸೆರೆವಾಸ ಮತ್ತು ದಂಡದ ಪ್ರಮಾಣವನ್ನು ₹ 50,000 ಕ್ಕೆ ಮಿತಿಗೊಳಿಸಿತ್ತು.
ಈ ತೀರ್ಪಿನ ವಿರುದ್ಧ ಶೆಟ್ಟಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ನೀಡಿದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣಗಳಿಲ್ಲ ಎಂದು ಅಭಿಪ್ರಾಯಟ್ಟಿರುವ ಸುಪ್ರೀಂಕೋರ್ಟ್ ಶಿಕ್ಷೆ ಅವಧಿ ಪೂರೈಸಲು ಎರಡು ವಾರಗಳ ಒಳಗೆ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗುವಂತೆ ಶೆಟ್ಟಿ ಅವರಿಗೆ ನಿರ್ದೇಶನ ನೀಡಿದೆ.
ಆದೇಶದ ಪ್ರತಿಯನ್ನು ಇಲ್ಲಿ ಓದಿ: