ಮರಣ ಹೊಂದುವಂತಹ ಸಂದರ್ಭಗಳನ್ನು ಹೊರತುಪಡಿಸಿ ಅಂತರಲಿಂಗಿ ಶಿಶುಗಳು ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಲಿಂಗ ಆಯ್ಕೆಯ ಶಸ್ತ್ರಚಿಕಿತ್ಸೆ ನಿಷೇಧಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಾಡಿದ್ದ (ಡಿಸಿಪಿಸಿಆರ್) ಶಿಫಾರಸ್ಸುಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ದೆಹಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಎಂಟು ವಾರಗಳ ಗಡುವು ನೀಡಿದೆ. [ಸೃಷ್ಟಿ ಮದುರೈ ಶೈಕ್ಷಣಿಕ ಸಂಶೋಧನಾ ಪ್ರತಿಷ್ಠಾನ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಹೆಣ್ಣು ಮತ್ತ ಗಂಡಿನ ಲೈಂಗಿಕ ಅವಯವಗಳ ಅಂಗಾಂಶ ಸಂಯೋಜನೆಯೊಂದಿಗೆ ಜನಿಸಿದ ಮಕ್ಕಳನ್ನು ಅಂತರಲಿಂಗಿ ಶಿಶು ಎಂಬ ಪದ ಸೂಚಿಸುತ್ತದೆ. ಸೃಷ್ಟಿ ಮದುರೈ ಶೈಕ್ಷಣಿಕ ಸಂಶೋಧನಾ ಪ್ರತಿಷ್ಠಾನ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ಪೀಠ ಈ ನಿರ್ದೇಶನಗಳನ್ನು ನೀಡಿದೆ.
ಅಂತರಲಿಂಗಿ ಶಿಶುಗಳು ಮತ್ತು ಮಕ್ಕಳಿಗೆ ವೈದ್ಯಕೀಯ ಶಸ್ತ್ರಚಿಕಿತ್ಸೆ ಯಾವಾಗ ಮಾಡಬಹುದು ಎಂಬುದನ್ನು ಸೂಚಿಸುವ ಮಾರ್ಗಸೂಚಿಗಳನ್ನು ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು. ಈ ಬಗ್ಗೆ ಡಿಸಿಪಿಸಿಆರ್ ದೆಹಲಿ ಸರ್ಕಾರಕ್ಕೆ ವಿವರವಾದ ವರದಿ ಸಲ್ಲಿಸಿದ್ದರೂ ಸರ್ಕಾರ ಇನ್ನೂ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ವಾದಿಸಲಾಗಿತ್ತು.
ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶ ಬೇಕೆಂದು ದೆಹಲಿ ಸರ್ಕಾರದ ಪರ ವಕೀಲರು ಕೋರಿದರು. ಅಂತೆಯೇ ಸರ್ಕಾರಕ್ಕೆ ಎಂಟು ವಾರಗಳ ಕಾಲಾವಕಾಶ ನೀಡಿದ ನ್ಯಾಯಾಲಯ ಮನವಿಯನ್ನು ವಿಲೇವಾರಿ ಮಾಡಿತು. ಅರ್ಜಿದಾರರ ಪರವಾಗಿ ವಕೀಲ ರಾಬಿನ್ ರಾಜು . ಪ್ರತಿವಾದಿಗಳ ಪರ ವಕೀಲರಾದ ಸತ್ಯಕಾಂ, ಅಲೋಕ್ ರಾಜ್ ಮತ್ತು ನೇಹಾ ಜೈನ್ ವಾದ ಮಂಡಿಸಿದರು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: