ಸಂತ್ರಸ್ತೆ ಗುಪ್ತಾಂಗಕ್ಕೆ ಬೆರಳು ಹಾಕಿ ಪರೀಕ್ಷಿಸುವ ಅವೈಜ್ಞಾನಿಕ ಕ್ರಮಕ್ಕೆ ಅಂತ್ಯ ಹಾಡಿ: ಬಾಂಬೆ ಹೈಕೋರ್ಟ್
ಅತ್ಯಾಚಾರ ಸಂತ್ರಸ್ತೆಯ ಕನ್ಯಾಪೊರೆಗೆ ಹಾನಿಯಾಗಿರುವುದನ್ನು ಪತ್ತೆ ಹಚ್ಚಲು ನಡೆಸಲಾಗುವ ವ್ಯಾಪಕ ಟೀಕೆಗೆ ಗುರಿಯಾಗಿರುವ ಗುಪ್ತಾಂಗಕ್ಕೆ ಬೆರಳಿಟ್ಟು ಪರೀಕ್ಷಿಸುವ ಅವೈಜ್ಞಾನಿಕವಾದ 'ಎರಡು ಬೆರಳು ಪರೀಕ್ಷೆ' ವಿಧಾನಕ್ಕೆ ಅಂತ್ಯ ಹಾಡಲು ಮಹಾರಾಷ್ಟ್ರ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂಬ ಆಶಾಭಾವವನ್ನು ಬಾಂಬೆ ಹೈಕೋರ್ಟ್ ಗುರುವಾರ ವ್ಯಕ್ತಪಡಿಸಿದೆ (ಮೊಹಮದ್ ಅಶ್ಫಾಕ್ ದಾವೂದ್ ಶೇಖ್ ವರ್ಸಸ್ ಮಹಾರಾಷ್ಟ್ರ ಸರ್ಕಾರ).
ಮುಂಬೈನ ಶಕ್ತಿಮಿಲ್ ಆವರಣದಲ್ಲಿ 2013ರಲ್ಲಿ 19 ವಯೋಮಾನದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತನಾಗಿರುವ ಮೊಹಮ್ಮದ್ ಅಶ್ಫಾಕ್ ದಾವೂದ್ ಶೇಖ್ ಸಲ್ಲಿಸಿದ್ದ ಮೇಲ್ಮನವಿ ವಜಾ ಆದೇಶದಲ್ಲಿ ನ್ಯಾಯಾಲಯವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಜೆ ಜೆ ಆಸ್ಪತ್ರೆಯ ವೈದ್ಯರು ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದ ಕೆಲವು ಆಘಾತಕಾರಿ ವಿಚಾರಗಳ ಕುರಿತು ಸೆಷನ್ಸ್ ನ್ಯಾಯಾಧೀಶರು ಮಾಡಿರುವ ಅವಲೋಕನಗಳನ್ನು ನ್ಯಾಯಮೂರ್ತಿಗಳಾದ ಎಸ್ ಎಸ್ ಜಾಧವ್ ಮತ್ತು ಪಿ ಕೆ ಚವ್ಹಾಣ್ ನೇತೃತ್ವದ ವಿಭಾಗೀಯ ಪೀಠ ಪರಿಗಣಿಸಿದೆ.
“ಸುಪ್ರೀಂ ಕೋರ್ಟ್ ವಿರೋಧದ ನಡುವೆಯೂ ವೈದ್ಯರು ಫಿರ್ಯಾದುದಾರೆಗೆ ಅವಮಾನಕರವಾದ ಮತ್ತು ಅವೈಜ್ಞಾನಿಕವಾದ ಗುಪ್ತಾಂಗಕ್ಕೆ ಕೈ ಹಾಕಿ ಕನ್ಯಾಪೊರೆ ಪರೀಕ್ಷಿಸುವ ಗತಕಾಲದ ಎರಡು ಬೆರಳುಗಳ ಪರೀಕ್ಷಾ ವಿಧಾನವನ್ನು ಅನುಸರಿಸಿದ್ದಾರೆ” ಎಂದು ಸೆಷನ್ಸ್ ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.
ಸಂಭೋಗದ ಸಂದರ್ಭದಲ್ಲಿ ಕನ್ಯಾಪೊರೆಗೆ ಹಾನಿಯಾಗಿದೆಯೇ ಎಂಬುದನ್ನು ಪರೀಕ್ಷಿಸುವ ವ್ಯಾಪಕ ಟೀಕೆಗೆ ಒಳಗಾಗಿರುವ ಅವೈಜ್ಞಾನಿಕವಾದ ಎರಡು ಬೆರಳು ಪರೀಕ್ಷಾ ವಿಧಾನವನ್ನು ಅತ್ಯಾಚಾರ ಸಂತ್ರಸ್ತೆಯರ ಮೇಲೆ ನಡೆಸುವುದಕ್ಕೆ ಮಹಾರಾಷ್ಟ್ರ ಸರ್ಕಾರವು ಅಂತ್ಯ ಹಾಡುವ ಭರವಸೆಯನ್ನು ಪೀಠವು ಇದೇ ವೇಳೆ ವ್ಯಕ್ತಪಡಿಸಿತು.
2013ರಲ್ಲಿ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿ ಮತ್ತು ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ಭರವಸೆಯನ್ನೂ ಪೀಠ ವ್ಯಕ್ತಪಡಿಸಿದೆ. ಗುಪ್ತಾಂಗಕ್ಕೆ ಎರಡು ಬೆರಳು ಹಾಕಿ ಪರೀಕ್ಷಿಸುವ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ನಿಪುನ್ ಸೆಕ್ಸೇನಾ ವರ್ಸಸ್ ಭಾರತ ಸರ್ಕಾರ ಪ್ರಕರಣವು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇದೆ.
ಲಿಲ್ಲು ಅಲಿಯಾಸ್ ರಾಜೇಶ್ ಮತ್ತು ಇತರರು ವರ್ಸಸ್ ಹರಿಯಾಣ ಪ್ರಕರಣದಲ್ಲಿ ಎರಡು ಬೆರಳು ಹಾಕಿ ಪರೀಕ್ಷಿಸುವುದು ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ. ಅಲ್ಲದೇ ಇದು ಮಹಿಳೆಯ ಘನತೆ ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ 2019ರ ಆದೇಶದಲ್ಲಿ ಹೇಳಿತ್ತು.