ಟಾಟಾ ಸನ್ಸ್‌ ಅಧ್ಯಕ್ಷರನ್ನಾಗಿ ಮಿಸ್ತ್ರಿ ಮರು ನೇಮಿಸಿದ್ದ ಎನ್‌ಸಿಎಲ್‌ಎಟಿ ಆದೇಶ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಟಾಟಾ ಸನ್ಸ್ ಪರವಾಗಿ ಪ್ರಕರಣದಲ್ಲಿ ಉದ್ಭವಿಸಿದ ಎಲ್ಲಾ ಕಾನೂನು ಪ್ರಶ್ನೆಗಳಿಗೆ ಸರ್ವೋಚ್ಚ ನ್ಯಾಯಾಲಯ ಉತ್ತರಿಸಿದೆ.
Ratan Tata and Cyrus Mistry
Ratan Tata and Cyrus Mistry

ಟಾಟಾ ಸನ್ಸ್‌ ಲಿಮಿಟೆಡ್‌ನ ಅಧ್ಯಕ್ಷರನ್ನಾಗಿ ಸೈರಸ್‌ ಮಿಸ್ತ್ರಿ ಅವರನ್ನು ಮರು ನೇಮಿಸಿ ಡಿಸೆಂಬರ್‌ 2019ರಲ್ಲಿ ಆದೇಶಿಸಿದ್ದ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ (ಎನ್‌ಸಿಎಎಲ್‌ಟಿ) ನಿರ್ಣಯವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಬದಿಗೆ ಸರಿಸಿದೆ.

ಟಾಟಾ ಸನ್ಸ್ ಪರವಾಗಿ ವಿವಾದದಲ್ಲಿ ಭಾಗಿಯಾಗಿರುವ ಎಲ್ಲಾ ಕಾನೂನು ಪ್ರಶ್ನೆಗಳಿಗೆ ಸರ್ವೋಚ್ಚ ನ್ಯಾಯಾಲಯವು ಉತ್ತರಿಸಿದ್ದು, ಟಾಟಾ ಸನ್ಸ್ ಅಧ್ಯಕ್ಷರಾಗಿ ಮಿಸ್ತ್ರಿ ಅವರನ್ನು ತೆಗೆದುಹಾಕುವ ಮೂಲಕ 2016 ರಲ್ಲಿ ಪ್ರಾರಂಭವಾದ ಅರ್ಧ ದಶಕದ ಹಳೆಯ ಕಾನೂನು ಹೋರಾಟಕ್ಕೆ ವಿರಾಮ ಇಡಲಾಗಿದೆ.

ಎನ್‌ಸಿಎಲ್‌ಎಟಿ ತೀರ್ಪಿನ ವಿರುದ್ಧ ಟಾಟಾ ಸನ್ಸ್ ಸಲ್ಲಿಸಿದ್ದ ಮೇಲ್ಮನವಿಗೆ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರ ನೇತೃತ್ವದ ತ್ರಿಸದಸ್ಯ ಪೀಠವು ಅನುಮತಿಸಿದ್ದು, ಮಿಸ್ತ್ರಿ ಮತ್ತು ಶಾಪೂರ್‌ಜಿ ಪಲ್ಲೊಂಜಿ ಸಮೂಹ (ಎಸ್‌ಪಿ ಸಮೂಹ) ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

“ಮೇಲ್ಮನವಿದಾರರ ಪರವಾಗಿ ಉದ್ಭವಿಸಿರುವ ಕಾನೂನಿನ ಎಲ್ಲಾ ಪ್ರಶ್ನೆಗಳು ಉತ್ತರಿಸಲು ಯೋಗ್ಯವಾಗಿವೆ. ಟಾಟಾ ಸಮೂಹ ಮತ್ತು ಟಾಟಾ ಸಮೂಹ ಸಲ್ಲಿಸಿರುವ ಮೇಲ್ಮನವಿಗಳು ವಿಚಾರಣೆಗೆ ಅರ್ಹವಾಗಿವೆ ಮತ್ತು ಶಾಪೂರ್‌ಜಿ ಪಲ್ಲೊಂಜಿ ಸಮೂಹ ಸಲ್ಲಿಸಿರುವ ಮನವಿಯು ವಜಾಕ್ಕೆ ಅರ್ಹವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

Also Read
ಟಾಟಾ V. ಮಿಸ್ತ್ರಿ: ಟಾಟಾ ಷೇರುಗಳನ್ನು ಅಡವಿಡುವ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಲು ಎಸ್‌ಪಿ ಸಮೂಹಕ್ಕೆ ಸುಪ್ರೀಂ ಆದೇಶ

ಡಿಸೆಂಬರ್‌ 18, 2019ರ ಎನ್‌ಸಿಎಲ್‌ಎಟಿ ಆದೇಶವನ್ನು ಬದಿಗೆ ಸರಿಸಿರುವ ನ್ಯಾಯಾಲಯ “ಎಸ್‌ಪಿ ಸಮೂಹಕ್ಕೆ ಸೇರಿದ ಎರಡು ಕಂಪೆನಿಗಳು ನಂ. 82/2016ರ ಅಡಿ ಕಂಪೆನಿ ಅರ್ಜಿ ಸಲ್ಲಿಸಿವೆ. ಸೈರಸ್‌ ಇನ್ವೆಸ್ಟ್‌ಮೆಂಟ್ಸ್‌ ಲಿಮಿಟೆಡ್‌ ಮತ್ತು ಸ್ಟರ್ಲಿಂಗ್‌‌ ಇನ್ವೆಸ್ಟ್‌ಮೆಂಟ್‌ ಕಾರ್ಪೊರೇಷನ್‌ ಸಲ್ಲಿಸಿರುವ ಸಿವಿಲ್‌ ಮೇಲ್ಮನವಿ 1802 ಅನ್ನು ವಜಾಗೊಳಿಸಲಾಗಿದೆ” ಎಂದು ತೀರ್ಪಿನಲ್ಲಿ ಹೇಳಿದೆ.

ನ್ಯಾಯಯುತ ಪರಿಹಾರದ ಬದಲಾಗಿ ಎಸ್‌ಪಿ ಗ್ರೂಪ್ ಹೊಂದಿರುವ ಷೇರುಗಳನ್ನು ಪಡೆಯುವ ಮೂಲಕ ಟಾಟಾ ಸನ್ಸ್‌ನಲ್ಲಿ ಎಸ್‌ಪಿ ಸಮೂಹದ ಮಾಲೀಕತ್ವದ ಆಸಕ್ತಿಯನ್ನು ಪ್ರತ್ಯೇಕಿಸಲು ಕಾರಣವಾಗುವಂತೆ ಟಾಟಾ ಸನ್ಸ್‌ಗೆ ನಿರ್ದೇಶನ ನೀಡುವಂತೆ ಎಸ್‌ಪಿ ಸಮೂಹ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಅದೇ ರೀತಿ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಬದಲಿಗೆ ಪಕ್ಷಗಳಿಗೆ ಲಭ್ಯವಿರುವ ಕಾನೂನು ಆಯ್ಕೆಗಳನ್ನು ಅನ್ವೇಷಿಸಲು ಸೂಚಿಸಿದೆ. ಟಾಟಾ ಸನ್ಸ್‌ ಪರವಾಗಿ ಹಿರಿಯ ವಕೀಲ ಹರೀಶ್‌ ಸಾಳ್ವೆ ಮತ್ತು ಡಾ. ಅಭಿಷೇಕ್‌ ಮನು ಸಿಂಘ್ವಿ ವಾದಿಸಿದರು.

Related Stories

No stories found.
Kannada Bar & Bench
kannada.barandbench.com