ಅನುಕಂಪ ಆಧಾರದಲ್ಲಿ ನೇಮಕಗೊಂಡವರು ಉನ್ನತ ಹುದ್ದೆಗೆ ಬೇಡಿಕೆ ಇಡುವಂತಿಲ್ಲ: ಸುಪ್ರೀಂ ಕೋರ್ಟ್

ಅನುಕಂಪದ ಆಧಾರದಲ್ಲಿ ನೇಮಕವಾದ ಅರ್ಜಿದಾರರು ಉನ್ನತ ಹುದ್ದೆಗೆ ಅರ್ಹರಾಗಿದ್ದರೂ ಅದು ಆ ಹುದ್ದೆಯಲ್ಲಿ ನೇಮಕಗೊಳ್ಳುವ ಹಕ್ಕು ಅವರಿಗೆ ಇದೆ ಎಂದರ್ಥವಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ.
Supreme Court of India
Supreme Court of India
Published on

ಮೃತ ನೌಕರನ ಅವಲಂಬಿತರು ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ನೇಮಕವಾದ ಬಳಿಕ  ಅವರ ಬೇಡಿಕೆ ಈಡೇರಿದಂತೆ. ನಂತರ ಅದನ್ನೇ ಪುನಃ ಚಲಾಯಿಸಿ ಉನ್ನತ ಹುದ್ದೆಗೆ ಬೇಡಿಕೆ ಇಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ [ಪಟ್ಟಣ ಪಂಚಾಯತ್ ನಿರ್ದೇಶಕರು ಮತ್ತು ಎಂ ಜಯಬಾಲ್‌ ಇನ್ನಿತರರ ನಡುವಣ ಪ್ರಕರಣ].

 ಅನುಕಂಪದ ಆಧಾರದ ಮೇಲೆ ಸ್ವೀಪರ್‌ ಕೆಲಸಕ್ಕೆ ನೇಮಕಗೊಂಡಿದ್ದ ತಮಿಳುನಾಡಿನ ಎಂ. ಜಯಬಾಲ ಮತ್ತು ಎಸ್. ವೀರಮಣಿ ಅವರು ತಮ್ಮನ್ನು ಕಿರಿಯ ಸಹಾಯಕ ಹುದ್ದೆಗೆ ನೇಮಕ ಮಾಡಬೇಕು ಎಂಬ ಬೇಡಿಕೆಯನ್ನು ಆ ಮೂಲಕ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್‌ ಅವರಿದ್ದ ಪೀಠ ಬದಿಗೆ ಸರಿಸಿತು.

Also Read
ನ್ಯಾಯಾಲಯದ ಅನುಕಂಪ ದುರ್ಬಳಕೆ; 5 ವಾರ ಕಳೆದರೂ ಶಸ್ತ್ರಚಿಕಿತ್ಸೆಗೊಳಗಾಗದ ದರ್ಶನ್: ಮಧ್ಯಂತರ ಜಾಮೀನಿಗೆ ಸರ್ಕಾರ ವಿರೋಧ

ಒಂದು ವೇಳೆ ಅರ್ಜಿಗೆ ತಡೆ ನೀಡದೆ ಹೋದರೆ ಅಂತ್ಯವಿಲ್ಲದ ಅನುಕಂಪ ಆಧಾರಿತ ನೇಮಕಾತಿಗೆ ಅನುಮತಿ ನೀಡಿದಂತಾಗುತ್ತದೆ ಎಂದು ಅದು ಹೇಳಿತು.

"ಮೃತ ಉದ್ಯೋಗಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಿದ ನಂತರ, ಅವರ ಹಕ್ಕು ಚಲಾವಣೆಗೆ ಬಂದಂತೆ. ನಂತರ, ಉನ್ನತ ಹುದ್ದೆಗೆ ನೇಮಕಾತಿ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಲ್ಲದಿದ್ದರೆ, ಅದು 'ಅಂತ್ಯವಿಲ್ಲದ ಅನುಕಂಪದ ಆಧಾರದ ನೇಮಕಾತಿ ಪ್ರಕರಣವಾಗುತ್ತದೆ " ಎಂದು ನ್ಯಾಯಾಲಯ ಹೇಳಿದೆ.

ಅನುಕಂಪದ ಆಧಾರದಲ್ಲಿ ನೇಮಕವಾದ ಅರ್ಜಿದಾರರು ಉನ್ನತ ಹುದ್ದೆಗೆ ಅರ್ಹರಾಗಿದ್ದರೂ ಅದು ಆ ಹುದ್ದೆಯಲ್ಲಿ ನೇಮಕಗೊಳ್ಳುವ ಹಕ್ಕು ಅವರಿಗೆ ಇದೆ ಎಂದರ್ಥವಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ.

ಅನುಕಂಪ ಆಧಾರಿತ ನೇಮಕಾತಿ ಸರ್ಕಾರಿ ಉದ್ಯೋಗಗಳಿಗೆ ಇರುವ ಸಾಮಾನ್ಯ ನಿಯಮಕ್ಕೆ ಅಪವಾದವಾಗಿದ್ದು ಅದನ್ನು ಪರ್ಯಾಯ ನೇಮಕಾತಿ ಮಾರ್ತ ಅಥವಾ ವೃತ್ತಿ ಜೀವನದಲ್ಲಿ ಉನ್ನತ ಹುದ್ದೆಗೇರುವ ಸಾಧನ ಎಂದಾಗಲಿ ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಅವಲಂಬಿತರಿಗೆ ಅನುಕಂಪದ ಆಧಾರದಲ್ಲ ಉದ್ಯೋಗ ನೀಡಿದ ಬಳಿಕ ಉನ್ನತ ಹುದ್ದೆಗೆ ಅವರನ್ನು ನೇಮಿಸಿಕೊಳ್ಳಬೇಕು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಲ್ಲದಿದ್ದರೆ ಅದು ಅಂತ್ಯವಿಲ್ಲ ಅನುಕಂಪ ಆಧಾರದ ನೇಮಕಾತಿ ಪ್ರಕರಣವಾಗುತ್ತದೆ.
ಸುಪ್ರೀಂ ಕೋರ್ಟ್

ಒಮ್ಮೆ ಅಂತಹ ನೇಮಕಾತಿ ಅಂಗೀಕಾರವಾದರೆ, ಅನುಕಂಪ ಆಧಾರದಲ್ಲಿ ನೇಮಕಾತಿಯ ಉದ್ದೇಶ ಈಡೇರುತ್ತದೆ. ಆ ಹಕ್ಕನ್ನು ಪದೇ ಪದೇ ಚಲಾಯಿಸಲಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರತಿವಾದಿಗಳು ಉನ್ನತ ಹುದ್ದೆಗೆ ಮೊದಲೇ ಅರ್ಜಿ ಸಲ್ಲಿಸಬಹುದಿತ್ತು ಎಂಬ ಅರಿವು ಇರಲಿಲ್ಲ ಎಂಬ ತಿರಸ್ಕರಿಸಿದ ನ್ಯಾಯಾಲಯ ಕಾನೂನಿನ ಅರಿವಿಲ್ಲ ಎಂಬುದು ನೆಪವಾಗಕೂಡದು ಎಂದು ಸ್ಪಷ್ಟಪಡಿಸಿತು. ಆ ಮೂಲಕ ತಮಿಳುನಾಡು ಸರ್ಕಾರದ ಮೇಲ್ಮನವಿ ಪುರಸ್ಕರಿಸಿದ ಅದು ಮದ್ರಾಸ್ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತು.

[ತೀರ್ಪಿನ ಪ್ರತಿ]

Attachment
PDF
Director_of_Town_Panchayat_vs_M_Jayabal
Preview
Kannada Bar & Bench
kannada.barandbench.com