
Bar Council of Tamil Nadu and Puducherry
ವರ್ಚುವಲ್ ವಿಚಾರಣೆ ವೇಳೆಯೇ ಮಹಿಳೆಯೊಬ್ಬರ ಜೊತೆ ಚಕ್ಕಂದದಲ್ಲಿ ತೊಡಗಿದ್ದ ವಕೀಲ ಆರ್ ಡಿ ಸಂತಾನ ಕೃಷ್ಣನ್ ಅವರನ್ನು ದೇಶದ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ಪ್ರಾಕ್ಟೀಸ್ ಮಾಡದಂತೆ ತಮಿಳುನಾಡು ಮತ್ತು ಪುದುಚೆರಿ ವಕೀಲರ ಪರಿಷತ್ ಅಮಾನತುಗೊಳಿಸಿದೆ. ಸಂತಾನ ಕೃಷ್ಣನ್ ಅವರ ವಿರುದ್ಧದ ಶಿಸ್ತುಕ್ರಮದ ವಿಚಾರಣೆ ಪೂರ್ಣಗೊಳ್ಳುವವರೆಗೆ ಈ ಅಮಾನತು ಆದೇಶ ಜಾರಿಯಲ್ಲಿರಲಿದೆ.
ಕೃಷ್ಣನ್ ವಿರುದ್ಧ ಮದ್ರಾಸ್ ಹೈಕೋರ್ಟ್ನ ಹಿರಿಯ ವಿಭಾಗೀಯ ಪೀಠ ನ್ಯಾಯಾಂಗ ನಿಂದನೆ ಮತ್ತು ಸಿಬಿ-ಸಿಐಡಿ ವಿಚಾರಣೆ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ವಕೀಲರ ಪರಿಷತ್ತು ಈ ನಿರ್ಬಂಧಕ ಆದೇಶ ಜಾರಿಗೊಳಿಸಿದೆ.
ಮಹಿಳೆಯೊಂದಿಗೆ ವಕೀಲ ಕೃಷ್ಣನ್ ಅಪ್ಪುಗೆಯ ಭಂಗಿಯಲ್ಲಿದ್ದುದು ವೀಡಿಯೊ ಕಾನ್ಫರೆನ್ಸ್ ವೇಳೆ ಬಹಿರಂಗಗೊಂಡಿತ್ತು. ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತಿತರ ಶಿಕ್ಷಾರ್ಹ ಕಾನೂನುಗಳ ಅಡಿಯಲ್ಲಿ ಸಂಜ್ಞೇಯ ಅಪರಾಧ ನಡೆದಿರುವುದನ್ನು ವೀಡಿಯೊ ಮೇಲ್ನೋಟಕ್ಕೆ ಬಹಿರಂಗಪಡಿಸಿರುವುದರಿಂದ ಹೈಕೋರ್ಟ್ ಘಟನೆಯ ಕುರಿತು ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದೆ. ಈ ಸಂಬಂಧ ನಾಳೆ ( ಡಿಸೆಂಬರ್ 23ರಂದು) ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಅದು ಸೂಚಿಸಿದ್ದು ವಿಚಾರಣೆ ಕೈಗೆತ್ತಿಕೊಳ್ಳಲಿದೆ.