ಅನುದಾನ ರಹಿತ ಖಾಸಗಿ ಶಾಲೆಗಳ ಮಾನ್ಯತೆ ನವೀಕರಿಸಲು ಪ್ರತಿ ವರ್ಷವೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ: ಹೈಕೋರ್ಟ್‌

ಅರ್ಜಿದಾರರು ಸರ್ಕಾರದ ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಮನವಿ ಸಲ್ಲಿಸಿದ್ದಾರೆ. ಹೀಗಾಗಿ, ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದ ನ್ಯಾಯಾಲಯ.
Justice P Krishna Bhat and Karnataka HC
Justice P Krishna Bhat and Karnataka HC

ಅನುದಾನ ರಹಿತ ಖಾಸಗಿ ಶಾಲೆಗಳ ಮಾನ್ಯತೆ ನವೀಕರಿಸಲು ಪ್ರತಿ ವರ್ಷವೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಸ್ಪಷ್ಟಪಡಿಸಿದೆ.

ಪ್ರತಿ ವರ್ಷ ಮನವಿ ಸಲ್ಲಿಸುವಂತೆ ಸರ್ಕಾರ ಒತ್ತಾಯ ಮಾಡುತ್ತಿದೆ ಎಂದು ಆಕ್ಷೇಪಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಹಾಗೂ ರಾಜ್ಯದ ಇತರೆ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಕೃಷ್ಣ ಭಟ್ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ನೀಡಿದೆ.

ಕರ್ನಾಟಕ ಶಿಕ್ಷಣ ಕಾಯಿದೆ-1983ರ ನಿಯಮ 36ರ ಪ್ರಕಾರ ಮಾನ್ಯತೆ ಅವಧಿ ಮುಗಿದ ನಂತರವೇ ಮಾನ್ಯತೆ ನವೀಕರಣ ಕೋರಿ ಅರ್ಜಿ ಸಲ್ಲಿಸಬೇಕಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ (ನೋಂದಣಿ) ನಿಯಮಗಳು-1999 ರ ನಿಯಮ 4(3) ಅಡಿಯಲ್ಲಿ ಪಡೆದ ಮಾನ್ಯತೆಯು 10 ವರ್ಷಗ ಕಾಲ ಇರಲಿದ್ದು, ನವೀಕರಣವೂ 10 ವರ್ಷಗಳ ಅವಧಿಗೆ ಇರಲಿದೆ. ಹಾಗಿದ್ದೂ, ಸರ್ಕಾರ ಮಾನ್ಯತೆ ನವೀಕರಣಕ್ಕೆ ಪ್ರತಿವರ್ಷ ಅರ್ಜಿ ಸಲ್ಲಿಸುವಂತೆ ಒತ್ತಾಯಿಸುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಆದರೆ, ಸರ್ಕಾರ ಆರೋಪಗಳನ್ನು ಅಲ್ಲಗಳೆದಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಆಡಳಿತ ಮಂಡಳಿಗಳು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಕುರಿತಂತೆ ಮಾತ್ರವೇ ಇಂತಹ ಸುತ್ತೋಲೆ ಹೊರಡಿಸಿರುವುದಾಗಿ ತಿಳಿಸಿದೆ. ಮಾನ್ಯತೆ ಅವಧಿ ಕುರಿತಂತೆ ಯಾವುದೇ ವಿವಾದವಿಲ್ಲ ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರು ಸರ್ಕಾರದ ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಮನವಿ ಸಲ್ಲಿಸಿದ್ದಾರೆ. ಹೀಗಾಗಿ, ಆದೇಶದಲ್ಲಿ ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದೆ.

ಇದೇ ವೇಳೆ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಅಗ್ನಿ ಸುರಕ್ಷತಾ ಮಾನದಂಡಗಳು ಹಾಗೂ ಸುಸಜ್ಜಿತ ಕಟ್ಟಡ ನಿರ್ವಹಣೆ ಕುರಿತಂತೆ ಸುಪ್ರೀಂ ಕೋರ್ಟ್ ಅವಿನಾಶ್ ಮೆಹ್ರೋತ್ರಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಅಂಡ್ ಅದರ್ಸ್ ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸುವಲ್ಲಿ ಗಮನ ಹರಿಸುವಂತೆ ಸೂಚಿಸಿದೆ.

Also Read
ಅನುದಾನ ರಹಿತ ಖಾಸಗಿ ಶಾಲೆಗಳ ಮಾನ್ಯತೆ ನವೀಕರಿಸಲು ಒತ್ತಾಯ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಅರ್ಜಿದಾರರ ಮನವಿ: ಕರ್ನಾಟಕ ಶಿಕ್ಷಣ ಕಾಯಿದೆ ಪ್ರಕಾರ 10 ವರ್ಷಗಳಿಗೊಮ್ಮೆ ಶಾಲಾ ಮಾನ್ಯತೆ ನವೀಕರಿಸಬೇಕಿದೆ. ಆದರೆ, ರಾಜ್ಯ ಸರ್ಕಾರ ಪ್ರತಿ ವರ್ಷವೂ ಮಾನ್ಯತೆ ನವೀಕರಿಸಿಕೊಳ್ಳುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಬಲವಂತಪಡಿಸುತ್ತಿದೆ. ಈ ಸಂಬಂಧ 2021ರ ಡಿಸೆಂಬರ್‌ 12ರಂದು ಸುತ್ತೋಲೆ ಹೊರಡಿಸಿ, 2022ರ ಆಗಸ್ಟ್ 31ರೊಳಗೆ ಶಾಲಾ ಮಾನ್ಯತೆ ನವೀಕರಿಸುವಂತೆ ಸೂಚನೆ ನೀಡಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2022ರ ಜನವರಿ 17ರಂದು ಸುತ್ತೋಲೆ ಹೊರಡಿಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕಡ್ಡಾಯವಾಗಿ ನೋಂದಣಿ ಅರ್ಜಿ ಸಲ್ಲಿಸಲು ಸೂಚಿಸಿದೆ ಮತ್ತು ನೋಂದಣಿಗೆ ಕೊನೆಯ ದಿನಾಂಕ ನಿಗದಿಪಡಿಸಿದೆ. ಅದರಂತೆ ಶಾಲಾ ಮಾನ್ಯತೆ ನವೀಕರಿಸಿಕೊಳ್ಳದಿದ್ದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನೋಂದಣಿಗೆ ಸಲ್ಲಿಸುವ ಅರ್ಜಿಯೂ ಮುಂದೆ ಹೋಗುವುದಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.

ಅಲ್ಲದೇ, ಕರ್ನಾಟಕ ಶಿಕ್ಷಣ ಕಾಯಿದೆಯ-1983ರ ಸೆಕ್ಷನ್ 36ರ ಅಡಿ ಅಥವಾ ಕರ್ನಾಟಕ ಶೈಕ್ಷಣಿಕ ಶಿಕ್ಷಣ ಸಂಸ್ಥೆಗಳ (ನೋಂದಣಿ) ಅಧಿನಿಯಮ-1999ರ ಅಡಿಯಾಗಲೀ ಪ್ರತಿ ವರ್ಷ ಶಾಲೆ ಮಾನ್ಯತೆ ನವೀಕರಿಸುವಂತೆ ಸೂಚಿಸುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ಘೋಷಿಸಬೇಕು. ಹತ್ತು ವರ್ಷಕ್ಕೊಮ್ಮೆ ಮಾತ್ರ ಶಾಲಾ ಮಾನ್ಯತೆ ನವೀಕರಣ ಮಾಡುವುದನ್ನು ಪ್ರತಿಪಾದಿಸುವ ಶಿಕ್ಷಣ ಕಾಯಿದೆ ನಿಯಮಗಳನ್ನು ಪಾಲಿಸುವಂತೆ ಸರ್ಕಾರ ಮತ್ತು ಶಿಕ್ಷಣ ಇಲಾಖೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com