

ಕೋಲಾರ ಜಿಲ್ಲೆ ಕೋಲಾರ ತಾಲ್ಲೂಕು ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ವಿರಾಟ್ ಹಿಂದೂ ಸೇನಾ ಚಾರಿಟಬಲ್ ಟ್ರಸ್ಟ್ ಹಾಗೂ ಜಾಮೀಯಾ ಮಸೀದಿ ಟ್ರಸ್ಟ್ ಸರ್ಕಾರ ಜಾಗ ಒತ್ತುವರಿ ಮಾಡಿಕೊಂಡಿರುವುದು ನಿಜ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್ಗೆ ಶುಕ್ರವಾರ ತಿಳಿಸಿದೆ. "ರಾಮ-ರಹೀಮ್ ಒಟ್ಟಿಗೆ ಬಂದಿರುವುದನ್ನು ನೋಡಿದರೆ ಏನೋ ಸಂಶಯವಿದೆ" ಎಂದು ನ್ಯಾಯಾಲಯ ಹಿಂದಿನ ವಿಚಾರಣೆ ವೇಳೆ ಶಂಕೆ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಗ್ರಾಮದ ಸರ್ಕಾರಿ ಶಾಲೆ ಕಾಂಪೌಂಡ್ ಹಾಗೂ ಗ್ರಾಮದ ರಸ್ತೆಯ ಜಾಗದಲ್ಲಿ ಕಟ್ಟಲಾಗಿರುವ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವಂತೆ ಕೋಲಾರ ತಹಶೀಲ್ದಾರ್ ಜಾರಿಗೊಳಿಸಿರುವ ನೋಟಿಸ್ ರದ್ದುಪಡಿಸುವಂತೆ ಕೋರಿ ವಿರಾಟ್ ಹಿಂದೂ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಜಾಮೀಯಾ ಮಸ್ಜಿದ್ ಕಮಿಟಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲರು “ನ್ಯಾಯಾಲಯದ ನಿರ್ದೇಶನದಂತೆ ಅರ್ಜಿದಾರರ ಕುರಿತು ಪರಿಶೀಲಿಸಲಾಗಿದ್ದು, ಎರಡೂ ಸಂಸ್ಥೆಗಳು ಸರ್ಕಾರಿ ಜಾಗದ ಒತ್ತುವರಿದಾರರಾಗಿದ್ದಾರೆ. ಈ ಬಗ್ಗೆ ವರದಿ ಇದೆ. ತೆರವುಗೊಳಿಸಲು ಸತತವಾಗಿ ನೋಟಿಸ್ ಜಾರಿ ಮಾಡಲಾಗಿದೆ” ಎಂದರು.
ಅಲ್ಲದೇ, ವರದಿ ಹೇಳಿರುವಂತೆ ಗ್ರಾಮದ ಸರ್ವೆ ನಂಬರ್ 73 ಮತ್ತು 74ರಲ್ಲಿ 10 ಗುಂಟೆ ಸರ್ಕಾರಿ ಜಾಗದಲ್ಲಿ ವಿರಾಟ್ ಹಿಂದೂ ಸೇವಾ ಟ್ರಸ್ಟ್ 5.15 ಗುಂಟೆ ಜಾಗದಲ್ಲಿ 15 ಅಂಗಡಿಗಳನ್ನು ಕಟ್ಟಿ ಮಾಸಿಕ ತಲಾ 1,200 ರೂಪಾಯಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಅದೇ ರೀತಿ ಜಾಮೀಯಾ ಮಸೀದಿ ಸಮಿತಿಯವರು 4.75 ಗುಂಟೆ ಜಾಗದಲ್ಲಿ 10 ಅಂಗಡಿಗಳನ್ನು ನಿರ್ಮಿಸಿ ಮಾಸಿಕ ತಲಾ 1,200 ರೂಪಾಯಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಬಾಡಿಗೆ ಹಣ ಟ್ರಸ್ಟ್ ಮತ್ತು ಸಮಿತಿ ಖಾತೆಗಳಲ್ಲಿ ನಿರ್ವಹಿಸಲಾಗುತ್ತಿದ್ದು, ಯಾವುದೇ ಸರ್ಕಾರಿ ಖಾತೆಗೆ ಹಣ ಜಮೆ ಮಾಡಲಾಗುತ್ತಿಲ್ಲ. ಅಂಗಡಿಗಳನ್ನು ನಿರ್ಮಿಸಿಕೊಳ್ಳಲು ಯಾವುದೇ ರೀತಿ ಅನುಮತಿಯನ್ನೂ ನೀಡಲಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಅರ್ಜಿದಾರರ ಪರ ವಕೀಲರು “ಟ್ರಸ್ಟ್ ಅಥವಾ ಸಮಿತಿಗೆ ನೋಟಿಸ್ ಕೊಟ್ಟಿಲ್ಲ. ಅಂಗಡಿದಾರರಿಗೆ ನೋಟಿಸ್ ಕೊಡಲಾಗಿದೆ. ಅಷ್ಟಕ್ಕೂ ಅರ್ಜಿದಾರರು ಅನಭೋಗಿಸುತ್ತಿರುವ ಜಮೀನು ಗ್ರಾಮ ಠಾಣಾ ಜಮೀನಾಗಿದ್ದು, ಸರ್ಕಾರಿ ಕಂದಾಯ ಜಮೀನು ಅಲ್ಲ. ಗ್ರಾಮ ಠಾಣಾ ಜಮೀನಿನಲ್ಲಿ ಹಲವು ವರ್ಷಗಳಿಂದ ಇರುವುದರಿಂದ ಅರ್ಜಿದಾರರಿಗೆ ಕೆಲವು ಹಕ್ಕುಗಳಿವೆ. ಅರ್ಜಿದಾರರಿಗೆ ಜಮೀನು ಮಂಜೂರು ಮಾಡಬೇಕು ಎಂದು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಭೂ ಮಂಜೂರಾತಿ ಪ್ರಸ್ತಾವನೆ ಜಿಲ್ಲಾಧಿಕಾರಿಗಳ ಬಳಿ ಪರಿಶೀಲನೆಯಲ್ಲಿದೆ. ಜಮೀನು ಒತ್ತುವರಿ ಮಾಡಿದ್ದು ಎಂದಾದರೆ, ಸಂಘಗಳ ನೋಂದಣಿ ಕಾಯಿದೆಯಂತೆ ತನಿಖೆ ನಡೆಸಬಹುದು” ಎಂದರು.
ವಾದ-ಪ್ರತಿವಾದ ಆಲಿಸಿದ ಪೀಠವು ಒತ್ತುವರಿ ಮಾಡಿರುವ ಜಮೀನು ಸರ್ಕಾರಿ ಜಾಗ ಅಲ್ಲ, ಗ್ರಾಮ ಠಾಣಾ ಜಮೀನು ಎಂದು ಹೇಳುತ್ತಿದ್ದಾರೆ. ಹೀಗಾಗಿ, ಅರ್ಜಿದಾರರು ಶನಿವಾರ (ನ.22) ಬೆಳಿಗ್ಗೆ 11.30ಕ್ಕೆ ತಹಶೀಲ್ದಾರರ ಮುಂದೆ ಹಾಜರಾಗಿ, ನೋಟಿಸ್ಗೆ ಆಕ್ಷೇಪಣೆ ಸಲ್ಲಿಸಲಿ. ಅವುಗಳನ್ನು ಪರಿಶೀಲಿಸಿ ಐದು ದಿನಗಳಲ್ಲಿ (ಡಿಸೆಂಬರ್ 1) ತಹಶೀಲ್ದಾರ್ ನ್ಯಾಯಾಲಯಕ್ಕೆ ಲಿಖಿತ ವರದಿ ಸಲ್ಲಿಸಬೇಕು. ಜೊತೆಗೆ, ಅರ್ಜಿದಾರರಿಗೆ ಜಮೀನು ಮಂಜೂರು ಮಾಡುವ ಪ್ರಸ್ತಾವನೆ ಬಗ್ಗೆ ಜಿಲ್ಲಾಧಿಕಾರಿ ತಮ್ಮ ನಿಲುವು ತಿಳಿಸಬೇಕು ಎಂದು ನಿರ್ದೇಶನ ನೀಡಿದ ಪೀಠ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಿತು.