ಅರೆ ನ್ಯಾಯಿಕ ಪ್ರಾಧಿಕಾರಿಗಳ ಆದೇಶ ವೆಬ್‌ಹೋಸ್ಟ್‌ ಮಾಡಲು ಕಂದಾಯ ಇಲಾಖೆಗೆ ಹೈಕೋರ್ಟ್‌ ನಿರ್ದೇಶನ

ಅರೆನ್ಯಾಯಿಕ ಪ್ರಾಧಿಕಾರಗಳ ಮುಂದೆ ನಡೆಯುವ ಪ್ರಕರಣಗಳ ಆದೇಶದ ಪ್ರತಿ, ಪ್ರಕ್ರಿಯೆಗಳನ್ನು ವೆಬ್‌ ಹೋಸ್ಟ್‌ ಮಾಡುವಂತೆ ಬೇರೊಂದು ಪ್ರಕರಣದಲ್ಲಿ ಆದೇಶಿಸಲಾಗಿದೆ. ಅದನ್ನು ಮಾಡಿದ್ದರೆ ಹಾಲಿ ಪ್ರಕರಣದಂಥ ವಿಚಾರಗಳು ನಡೆಯುತ್ತಿರಲಿಲ್ಲ ಎಂದಿರುವ ಪೀಠ.
Justice Suraj Govindaraj and Karnataka HC, Kalburgi bench
Justice Suraj Govindaraj and Karnataka HC, Kalburgi bench

ಇ-ಕೋರ್ಟ್‌ ಯೋಜನೆಯ ರೀತಿಯಲ್ಲಿಯೇ ಅರೆ ನ್ಯಾಯಿಕ ಪ್ರಾಧಿಕಾರಗಳ ಮುಂದಿರುವ ಪ್ರಕರಣಗಳ ಎಲ್ಲಾ ಆದೇಶ, ಪ್ರಕ್ರಿಯೆಗಳನ್ನು ವೆಬ್‌ಹೋಸ್ಟ್‌ ಮಾಡುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಮತ್ತೊಮ್ಮೆ ಆದೇಶಿಸಿದೆ.

ರಾಯಚೂರು ಜಿಲ್ಲೆಯ ಉಪವಿಭಾಗಾಧಿಕಾರಿಯು ಭೂ ವಿವಾದ ಕುರಿತಾದ ಆರ್‌ಆರ್‌ಟಿ ಮೇಲ್ಮನವಿಗೆ ಸಂಬಂಧಿಸಿದಂತೆ ಮಾಡಿದ್ದ ಆಕ್ಷೇಪಾರ್ಹ ಆದೇಶವನ್ನು ವಜಾ ಮಾಡುವಂತೆ ಕೋರಿ ತೆಲಂಗಾಣ ರಾಜ್ಯದ ಮೆಹಬೂಬ್‌ ನಗರದ ನಿವಾಸಿಗಳಾದ ಭುರಾನ್‌ ಸೇರಿ ಎಂಟು ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಸಹಾಯಕ ಆಯುಕ್ತರು 2022ರ ನವೆಂಬರ್‌ 4ರಂದು ವಿಚಾರಣೆ ನಡೆಸಿ, ನವೆಂಬರ್‌ 18ಕ್ಕೆ ಪ್ರಕರಣ ಮುಂದೂಡಿದ್ದರು. ಈ ಮಧ್ಯೆ, ನವೆಂಬರ್‌ 9ರಂದು ಆಕ್ಷೇಪಾರ್ಹವಾದ ಆದೇಶ ಮಾಡಿರುವುದು ಆಘಾತಕಾರಿ ವಿಚಾರ. ನವೆಂಬರ್‌ 9ರಂದು ವಿಚಾರಣೆಗೆ ನಿಗದಿಪಡಿಸಿದಾಗ ಅದನ್ನು ಕೈಗೆತ್ತಿಕೊಳ್ಳಲಾಗಿದೆಯೇ ಎಂಬುದರ ಬಗ್ಗೆ ಆದೇಶದಲ್ಲಿ ಯಾವುದೇ ಉಲ್ಲೇಖವಿಲ್ಲ. ನವೆಂಬರ್‌ 18ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂಬ ಅಂಶ ಮಾತ್ರ ಆದೇಶದಲ್ಲಿ ಇದೆ. ಈ ಹಿನ್ನೆಲೆಯಲ್ಲಿ ರಾಯಚೂರಿನ ಜಿಲ್ಲಾಧಿಕಾರಿಯು ವಿಚಾರಣೆ ನಡೆಸಿ, ನವೆಂಬರ್‌ 9ರಂದು ಹೇಗೆ ಆದೇಶ ಮಾಡಲಾಗಿದೆ ಎಂದು ಪತ್ತೆ ಹಚ್ಚಬೇಕು. ಈ ಸಂಬಂಧದ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಇ-ಕೋರ್ಟ್‌ಗಳ ಯೋಜನೆಯ ರೀತಿಯಲ್ಲಿ ಅರೆನ್ಯಾಯಿಕ ಪ್ರಾಧಿಕಾರಗಳ ಮುಂದೆ ನಡೆಯುವ ಪ್ರಕರಣಗಳ ಆದೇಶದ ಪ್ರತಿ, ಪ್ರಕ್ರಿಯೆಗಳನ್ನು ವೆಬ್‌ ಹೋಸ್ಟ್‌ ಮಾಡುವಂತೆ ಬೇರೊಂದು ಪ್ರಕರಣದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಲಾಗಿದೆ. ಅದನ್ನು ಮಾಡಿದ್ದರೆ ಹಾಲಿ ಪ್ರಕರಣದಂಥ ವಿಚಾರಗಳು ನಡೆಯುತ್ತಿರಲಿಲ್ಲ. ಇದರಿಂದ ಪಕ್ಷಕಾರರಿಗೆ ಯಾವತ್ತು ಮುಂದಿನ ವಿಚಾರಣೆ ನಡೆಯಲಿದೆ. ಆದೇಶದಲ್ಲಿ ಏನು ಹೇಳಲಾಗಿದೆ ಎಂಬುದು ತಿಳಿಯುತ್ತಿತ್ತು. ಈ ನೆಲೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಪ್ರಕರಣದ ಕುರಿತು ಇ-ಆಡಳಿತ ಇಲಾಖೆಯ ಕಾರ್ಯದರ್ಶಿ ಜೊತೆ ಚರ್ಚಿಸಿ, ಅರೆ ನ್ಯಾಯಿಕ ಪ್ರಾಧಿಕಾರಗಳ ಮುಂದಿನ ಆದೇಶ ಮತ್ತು ಪ್ರಕ್ರಿಯೆಗಳನ್ನು ಇ-ಕೋರ್ಟ್‌ಗಳ ಮಾದರಿಯಲಿ ವೆಬ್‌ ಹೋಸ್ಟ್‌ ಮಾಡುವ ವ್ಯವಸ್ಥೆ ರೂಪಿಸಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಇದರೊಂದಿಗೆ ರಾಯಚೂರಿನ ಉಪವಿಭಾಗಾಧಿಕಾರಿ ನವೆಂಬರ್‌ 9ರಂದು ಮಾಡಿದ್ದ ಆಕ್ಷೇಪಾರ್ಹ ಆದೇಶವನ್ನು ಹೈಕೋರ್ಟ್‌ ವಜಾ ಮಾಡಿದ್ದು, ಎಲ್ಲಾ ಪಕ್ಷಕಾರರನ್ನು ಆಲಿಸಿದ ಬಳಿಕ ಹೊಸದಾಗಿ ಆದೇಶ ಮಾಡಲು ಪ್ರಕರಣವನ್ನು ಮತ್ತೆ ಸಹಾಯಕ ಆಯುಕ್ತರಿಗೆ ಮರಳಿಸಬೇಕು ಎಂದು ಆದೇಶದಲ್ಲಿ ಹೇಳಿದೆ.

“ನ್ಯಾಯಾಲಯದ ಈ ಆದೇಶವನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಈ-ಆಡಳಿತ ಇಲಾಖೆಯ ಕಾರ್ಯದರ್ಶಿಗೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ತರಬೇಕು. ಪ್ರಕರಣ ಇತ್ಯರ್ಥವಾಗಿದ್ದರೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಇ-ಆಡಳಿತ ಇಲಾಖೆಯ ಅನುಪಾಲನೆಗಾಗಿ ಆಗಸ್ಟ್‌ 22ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಮಹಾಂತೇಶ್‌ ಪಾಟೀಲ್‌ ಅವರು “ಆರ್‌ಆರ್‌ಟಿ ಮೇಲ್ಮನವಿಗೆ ಸಂಬಂಧಿಸಿದಂತೆ 2022ರ ಸೆಪ್ಟೆಂಬರ್‌ 23ರಂದು ರಾಯಚೂರಿನ ಉಪವಿಭಾಗಾಧಿಕಾರಿಯು ಮಧ್ಯಂತರ ಆದೇಶ ಮಾಡಿ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿ, ನವೆಂಬರ್‌ 18ಕ್ಕೆ ವಿಚಾರಣೆ ಮುಂದೂಡಿದ್ದರು. ಅದಾಗ್ಯೂ, ನವೆಂಬರ್‌ 9ರಂದು ಏಕಾಏಕಿ ಮಧ್ಯಂತರ ಆದೇಶವನ್ನು ತೆರವು ಮಾಡಲಾಗಿದೆ. ನವೆಂಬರ್‌ 18ಕ್ಕೆ ವಿಚಾರಣೆ ಮುಂದೂಡಿರುವಾಗ ನವೆಂಬರ್‌ 9ರಂದು ಆಕ್ಷೇಪಾರ್ಹ ಆದೇಶ ಮಾಡಲಾಗದು. ಈ ಆದೇಶವನ್ನು ಅರ್ಜಿದಾರರಿಗೆ ತಿಳಿಸದೇ ಹಾಗೂ ಅವರ ವಾದ ಆಲಿಸದೇ ಮಾಡಲಾಗಿದೆ. ಇದು ಆದೇಶದಿಂದ ಸ್ಪಷ್ಟವಾಗುತ್ತದೆ” ಎಂದು ವಾದಿಸಿದ್ದರು.

Attachment
PDF
Bhuran and others Vs Fareeda Bee.pdf
Preview

Related Stories

No stories found.
Kannada Bar & Bench
kannada.barandbench.com