ಪಿಎಸ್‌ಐ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಮನವಿಯನ್ನೇಕೆ ಪರಿಗಣಿಸಬೇಕು ಎಂದ ಪೀಠ; ಪಿಐಎಲ್‌ ವಜಾ

ಸೇವೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿರುವ ಪೀಠ.
ಪಿಎಸ್‌ಐ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಮನವಿಯನ್ನೇಕೆ ಪರಿಗಣಿಸಬೇಕು ಎಂದ ಪೀಠ; ಪಿಐಎಲ್‌ ವಜಾ

“ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ದಿವ್ಯಾ ಹಾಗರಗಿ ಪ್ರಮುಖ ಆರೋಪಿಯಾಗಿದ್ದಾರೆ. ಅವರ ಮನವಿಯನ್ನು ನಾವೇಕೆ ಪರಿಗಣಿಸಬೇಕು” ಎಂದು ಹಾಗರಗಿ ಪರ ವಕೀಲರನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್‌ ಆಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತು.

ಕರ್ನಾಟಕ ನರ್ಸಿಂಗ್‌ ಮತ್ತು ಪ್ಯಾರಾಮೆಡಿಕಲ್‌ ವಿಜ್ಞಾನ ಶಿಕ್ಷಣ (ನಿಯಂತ್ರಣ) ಪ್ರಾಧಿಕಾರಕ್ಕೆ ವಿಶೇಷ ಅಧಿಕಾರಿ ನೇಮಕಾತಿ ಪ್ರಶ್ನಿಸಿ ದಿವ್ಯಾ ಹಾಗರಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಅರ್ಜಿದಾರೆ ತಾನು ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌ನ ನಾಮನಿರ್ದೇಶಿತ ಸದಸ್ಯೆಯಾಗಿದ್ದು, ನರ್ಸ್‌ಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ನಡುವೆ ಅರ್ಜಿದಾರೆಯು ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿದ್ದಾರೆ. ಸೇವೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಹಾಗರಗಿ ಪ್ರತಿನಿಧಿಸಿದ್ದ ವಕೀಲ ಅರ್ನವ್‌ ಬಾಗಲವಾಡಿ ಅವರು “ಅರ್ಜಿದಾರೆಯನ್ನು ಏತಕ್ಕಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಅಫಿಡವಿಟ್‌ ಸಿದ್ಧವಾಗಿದ್ದು, ಅದನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಇದಕ್ಕೆ ಅಸಮಾಧಾನಗೊಂಡ ಪೀಠವು “ದಿವ್ಯಾ ಹಾಗರಗಿ ಅವರು ಪಿಎಸ್‌ಐ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿತರಾಗಿದ್ದಾರೆ. ನ್ಯಾಯಾಲಯದ ಅಧಿಕಾರಿಯಾಗಿ ನಿಮ್ಮ ಅರ್ಜಿದಾರರ ಬಗ್ಗೆ ನೀವು ಏನು ಹೇಳಬಯಸುತ್ತೀರಿ” ಎಂದು ವಕೀಲರ ಅರ್ನವ್‌ ಅವರನ್ನು ಪ್ರಶ್ನಿಸಿತು.

“ಆಕೆ (ದಿವ್ಯಾ ಹಾಗರಗಿ) ಹಗರಣದಲ್ಲಿ ಸಿಲುಕಿದ್ದಾರೆ. ಅವರ ಮನವಿಯನ್ನು ನಾವೇಕೆ ಪರಿಗಣಿಸಬೇಕು? ಮನವಿಯ ಬಗ್ಗೆ ನಾವು ಗಮನಹರಿಸುತ್ತೇವೆ. ಅದನ್ನು ನಾವು ಅರ್ಜಿದಾರೆಯ ಕೋರಿಕೆಯಿಂದ ಪರಿಗಣಿಸುವುದಿಲ್ಲ. ಸೇವೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ” ಎಂದಿತು.

Also Read
[ಪಿಎಸ್‌ಐ ಹಗರಣ] ಬೇಲಿಯೇ ಎದ್ದು ಹೊಲ ಮೇಯಲೇಕೆ ಬಿಟ್ಟಿರಿ? ಕಳಂಕಿತರ ಪತ್ತೆ ಹಚ್ಚಲಿಲ್ಲವೇಕೆ? ಹೈಕೋರ್ಟ್‌ ಪ್ರಶ್ನೆ

ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಕಲಬುರ್ಗಿಯ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯನ್ನು ಪಿಎಸ್‌ಐ ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿತ್ತು. ಇಲ್ಲಿ ಹಣ ಪಡೆದು ಅಭ್ಯರ್ಥಿಗಳ ಓಎಂಆರ್‌ ಶೀಟುಗಳನ್ನು ದಿವ್ಯಾ ಅವರು ತಮ್ಮ ಶಾಲೆಯ ಶಿಕ್ಷಕಿಯರ ಮೂಲಕ ತಿರುಚಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಚೌಕ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದರು. ಇದರ ಬೆನ್ನಿಗೇ ಅಭ್ಯರ್ಥಿಯಾದ ವೀರೇಶ್‌ ನಿಡಗುಂದಾ ಅವರನ್ನು ಸಿಐಡಿ ಬಂಧಿಸುವುದರೊಂದಿಗೆ ಹಗರಣ ಬಟಾಬಯಲಾಗಿತ್ತು.15 ದಿನಗಳ ಕಾಲ ದಿವ್ಯಾ ತಲೆಮರೆಸಿಕೊಂಡಿದ್ದರು. ವಿಚಾರಣಾಧೀನ ನ್ಯಾಯಾಲಯವು ತಲೆಮರೆಸಿಕೊಂಡಿರುವ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿ, ಬಂಧನ ವಾರೆಂಟ್‌ ಹೊರಡಿಸಿದ್ದರಿಂದ ಮಹಾರಾಷ್ಟ್ರ ಪುಣೆಯಲ್ಲಿ ಏಪ್ರಿಲ್‌ 29ರಂದು ಪೊಲೀಸರಿಗೆ ದಿವ್ಯಾ ಹಾಗರಗಿ ಸೆರೆ ಸಿಕ್ಕಿದ್ದರು. ಪ್ರಕರಣದಲ್ಲಿ ದಿವ್ಯಾ ಹಾಗರಗಿ 18ನೇ ಆರೋಪಿಯಾಗಿದ್ದು, ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಪ್ರಕರಣದ ಸಂಬಂಧ ಸಿಐಡಿಯು ವಿಚಾರಣಾಧೀನ ನ್ಯಾಯಾಲಯಕ್ಕೆ 2 ಸಾವಿರಕ್ಕೂ ಹೆಚ್ಚು ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ.

Related Stories

No stories found.
Kannada Bar & Bench
kannada.barandbench.com