[ಮಹಿಳೆ ಅಪಹರಣ ಪ್ರಕರಣ] ರೇವಣ್ಣಗೆ ಜಾಮೀನು: ಪಾಸ್‌ಪೋರ್ಟ್‌ ನ್ಯಾಯಾಲಯಕ್ಕೆ ಸಲ್ಲಿಸಬೇಕು; ರಾಜ್ಯದ ಗಡಿ ತೊರೆಯುವಂತಿಲ್ಲ

ಮುಂದಿನ ಆದೇಶದವರೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರೇವಣ್ಣ ಅವರು ಕೆ ಆರ್‌ ನಗರ ತಾಲ್ಲೂಕು ಅಥವಾ ಸಂತ್ರಸ್ತೆಯ ಕಾಯಂ ನಿವಾಸದತ್ತ ಸುಳಿಯುವಂತಿಲ್ಲ ಎಂಬ ಷರತ್ತನ್ನೂ ನ್ಯಾಯಾಲಯ ವಿಧಿಸಿದೆ.
[ಮಹಿಳೆ ಅಪಹರಣ ಪ್ರಕರಣ] ರೇವಣ್ಣಗೆ ಜಾಮೀನು: ಪಾಸ್‌ಪೋರ್ಟ್‌ ನ್ಯಾಯಾಲಯಕ್ಕೆ ಸಲ್ಲಿಸಬೇಕು; ರಾಜ್ಯದ ಗಡಿ ತೊರೆಯುವಂತಿಲ್ಲ

ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗಿರುವ ಜೆಡಿಎಸ್‌ ಮಾಜಿ ಸಚಿವ ಎಚ್‌ ಡಿ ರೇವಣ್ಣ ತಮ್ಮ ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು ಮತ್ತು ನ್ಯಾಯಾಲಯದ ಲಿಖಿತ ಅನುಮತಿ ಪಡೆಯದೇ ರಾಜ್ಯದ ಗಡಿ ದಾಟುವಂತಿಲ್ಲ ಎಂಬುದು ಸೇರಿ ಆರು ಷರತ್ತು ವಿಧಿಸಿ ಜನಪ್ರತಿನಿಧಿಗಳ ವಿಶೇಷ (ಸತ್ರ) ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ.

ಎಚ್‌ ಡಿ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯ ವಿಸ್ತೃತ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಪ್ರಕಟಿಸಿದರು.

“ರೇವಣ್ಣ ಅವರು ಐದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಭದ್ರತೆಯನ್ನು ಜನಪ್ರತಿನಿಧಿಗಳ ವಿಶೇಷ (ಮ್ಯಾಜಿಸ್ಟ್ರೇಟ್‌) ನ್ಯಾಯಾಲಯಕ್ಕೆ ಒದಗಿಸಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗೆ ಅಥವಾ ದೂರುದಾರರು ಅಥವಾ ಸಂತ್ರಸ್ತರಿಗೆ ಬೆದರಿಕೆ ಹಾಕಬಾರದು. ತನಿಖಾಧಿಕಾರಿ ಸೂಚಿಸಿದಾಗ ರೇವಣ್ಣ ಅವರು ತನಿಖೆಗೆ ಹಾಜರಾಗಬೇಕು. ರೇವಣ್ಣ ಅವರು ತಮ್ಮ ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನ್ಯಾಯಾಲಯದ ಲಿಖಿತ ಅನುಮತಿ ಪಡೆಯದೇ ರಾಜ್ಯದ ಹೊರಹೋಗುವಂತಿಲ್ಲ. ಮುಂದಿನ ಆದೇಶದವರೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರೇವಣ್ಣ ಅವರು ಕೆ ಆರ್‌ ನಗರ ತಾಲ್ಲೂಕು ಅಥವಾ ಸಂತ್ರಸ್ತೆಯ ಕಾಯಂ ನಿವಾಸದತ್ತ ಸುಳಿಯುವಂತಿಲ್ಲ. ಪ್ರತಿ ತಿಂಗಳ ಎರಡನೇ ಭಾನುವಾರದಂದು ರೇವಣ್ಣ ತನಿಖಾಧಿಕಾರಿಯ ಮುಂದೆ ಆರು ತಿಂಗಳ ಕಾಲ ಅಥವಾ ಆರೋಪ ಪಟ್ಟಿ ಸಲ್ಲಿಕೆಯಾಗುವವರೆಗೆ ಬೆಳಿಗ್ಗೆ 9ರಿಂದ 5 ಗಂಟೆಯ ಒಳಗೆ ಹಾಜರಾಗಬೇಕು. ರೇವಣ್ಣ ಇಂಥದ್ದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು" ಎಂದು ನ್ಯಾಯಾಲಯವು ಆದೇಶ ಮಾಡಿ, ಅರ್ಜಿ ಇತ್ಯರ್ಥಪಡಿಸಿದೆ.

ಇದಕ್ಕೂ ಮುನ್ನ, ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಿದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್‌ ನಾಯ್ಕ್‌ ಮತ್ತು ಜಯ್ನಾ ಕೊಠಾರಿ ಅವರು “ಎಚ್‌ ಡಿ ರೇವಣ್ಣ ಕುಟುಂಬವು ರಾಜಕೀಯವಾಗಿ ಪ್ರಭಾವಿಯಾಗಿದೆ. ಈ ಹಿಂದೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ಹಾಸನ ಜಿಲ್ಲೆಗೆ ಬಿಡುಗಡೆಯಾದಗಿದ್ದ 576 ಕೋಟಿ ರೂಪಾಯಿ ಅನುದಾನವನ್ನು ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ರೇವಣ್ಣ ಕುಟುಂಬದ ವಿರುದ್ಧ ಹಲವು ಚುನಾವಣಾ ಅಕ್ರಮದ ದೂರಗಳನ್ನು ಸಲ್ಲಿಕೆ ಮಾಡಿದ್ದರೂ ಇವರ ಕುಟುಂಬ ಪ್ರಭಾವವಾಗಿರುವ ಕಾರಣ ಅವೆಲ್ಲದರಲ್ಲೂ ಬಿ ವರದಿ ಸಲ್ಲಿಕೆಯಾಗಿದೆ. ಇಂಥ ಪರಿಸ್ಥಿತಿ ಇರುವಾಗ ಇವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶವಾಗದೇ ಉಳಿಯುತ್ತದೆಯೇ?” ಎಂದು ಬಲವಾಗಿ ವಾದಿಸಿದರು.

ಮುಂದುವರಿದು, “ರೇವಣ್ಣ ಕುಟುಂಬ ಪಿತೂರಿ ನಡೆಸಿ ಸಂತ್ರಸ್ತೆಯನ್ನು ಅಪಹರಿಸಿದೆ. ಸಂತ್ರಸ್ತರ ಬದುಕು ಅಪಾಯದಲ್ಲಿದೆ” ಎಂದರು.

ಇದಕ್ಕೆ ಆಕ್ಷೇಪಿಸಿದ ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ “ಸಂತ್ರಸ್ತೆ ಮಹಿಳೆಯು ಕಳೆದ ಹತ್ತು ವರ್ಷಗಳಿಂದ ರೇವಣ್ಣ ಮನೆಯಲ್ಲಿ ಮನೆ ಕೆಲಸದವರಾಗಿದ್ದಾರೆ. ಸಂತ್ರಸ್ತೆಯು ರೇವಣ್ಣ ಸಂಬಂಧಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಅಪಹರಣವಾಗಿದ್ದರು ಎಂಬ ಮಹಿಳೆ ವಿಡಿಯೊ ಬಿಡುಗಡೆ ಮಾಡಿದ್ದು, ತನ್ನನ್ನು ಯಾರೂ ಅಪಹರಿಸಿಲ್ಲ ಎಂದು ಹೇಳಿದ್ದಾರೆ. ರಿಮ್ಯಾಂಡ್‌ ಅರ್ಜಿಯಲ್ಲಿನ ಎಲ್ಲಾ ಅಂಶಗಳು ತಪ್ಪಿನಿಂದ ಕೂಡಿವೆ. ಯಾವುದೇ ರೀತಿಯಲ್ಲಿಯೂ ಐಪಿಸಿ ಸೆಕ್ಷನ್‌ 364ಎ ಇಲ್ಲಿ ಅನ್ವಯವಾಗುವುದಿಲ್ಲ” ಎಂದು ಆಕ್ಷೇಪಿಸಿದರು.

Also Read
ಮಹಿಳೆ ಅಪಹರಣ ಪ್ರಕರಣ: ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಜಾಮೀನು ಆದೇಶವನ್ನು 5 ಗಂಟೆಗೆ ಪ್ರಕಟಿಸಲಿರುವ ನ್ಯಾಯಾಲಯ

ಇದಕ್ಕೂ ಮುನ್ನ, ಪ್ರಾಸಿಕ್ಯೂಷನ್‌ ಪರವಾಗಿ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಇದಕ್ಕೆ ಸಿ ವಿ ನಾಗೇಶ್‌ ಅವರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಅದರ ಒಂದು ಪ್ರತಿಯನ್ನೂ ಅವರಿಗೆ ನೀಡಲಾಯಿತು.

ಮೇ 4ರಂದು ರೇವಣ್ಣ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿತ್ತು. ಎಸ್‌ಐಟಿ ಕೋರಿಕೆಯ ಮೇರೆಗೆ ರೇವಣ್ಣ ಅವರನ್ನು ಮ್ಯಾಜಿಸ್ಟ್ರೇಟ್‌ 4 ದಿನ ಕಸ್ಟಡಿಗೆ ನೀಡಿತ್ತು. ಮೇ 8ರಿಂದ ರೇವಣ್ಣ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ನಾಳೆಗೆ ರೇವಣ್ಣ ಅವರ ನ್ಯಾಯಾಂಗ ಬಂಧನ ಮುಗಿಯಲಿತ್ತು.

Kannada Bar & Bench
kannada.barandbench.com