'ಹಿಂದೂ' ಪದ ಕುರಿತಾದ ಹೇಳಿಕೆ: ಸಚಿವ ಸತೀಶ್‌ ಜಾರಕಿಹೊಳಿ ವಿರುದ್ಧದ ಮಾನನಷ್ಟ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ವಕೀಲ ದಿಲೀಪ್‌ ಕುಮಾರ್‌ ದಾಖಲಿಸಿದ್ದ ಖಾಸಗಿ ಅರ್ಜಿಯನ್ನು ವಜಾ ಮಾಡಿದ್ದ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಕ್ರಿಮಿನಲ್‌ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ವಿಶೇಷ ಸತ್ರ ನ್ಯಾಯಾಲಯ ಪುರಸ್ಕರಿಸಿತ್ತು.
'ಹಿಂದೂ' ಪದ ಕುರಿತಾದ ಹೇಳಿಕೆ: ಸಚಿವ ಸತೀಶ್‌ ಜಾರಕಿಹೊಳಿ ವಿರುದ್ಧದ ಮಾನನಷ್ಟ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌
Published on

“ಹಿಂದೂ ಎನ್ನುವುದು ಭಾರತೀಯ ಪದವಲ್ಲ. ಅದು ಪರ್ಷಿಯನ್‌ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದವಾಗಿದೆ” ಎಂದು ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ವಿರುದ್ಧ ದಾಖಲಾಗಿದ್ದ ಮಾನನಷ್ಟ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ವಜಾ ಮಾಡಿದೆ.

ವಿಶೇಷ ಸತ್ರ ನ್ಯಾಯಾಲಯದ ಆದೇಶದಂತೆ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣದ ರದ್ದತಿ ಕೋರಿ ಸಚಿವ ಸತೀಶ್‌ ಜಾರಕಿಹೊಳಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಬೆಂಗಳೂರಿನ ವಕೀಲ ದಿಲೀಪ್‌ ಕುಮಾರ್‌ ಅವರು ದಾಖಲಿಸಿದ್ದ ಖಾಸಗಿ ಅರ್ಜಿಯನ್ನು ವಜಾ ಮಾಡಿದ್ದ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಕ್ರಿಮಿನಲ್‌ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯ ಪುರಸ್ಕರಿಸಿತ್ತು.

“ಸಚಿವ ಸತೀಶ್‌ ಜಾರಕಿಹೊಳಿ ಅವರ ವಿರುದ್ಧ ಸಂಜ್ಞೇ ಪರಿಗಣಿಸಲು ನಿರಾಕರಿಸಿ 2023ರ ಮಾರ್ಚ್‌ 27ರಂದು ಆದೇಶಿಸಿದ್ದ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಲಾಗಿದೆ. ಐಪಿಸಿ ಸೆಕ್ಷನ್‌ಗಳಾದ 153 (ಗಲಭೆಗೆ ಪ್ರಚೋದನೆ) ಮತ್ತು 500ರ (ಬೇರೊಬ್ಬರಿಗೆ ಅವಮಾನ ಮಾಡುವುದು) ಅಡಿ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸಂಜ್ಞೇಯ ತೆಗೆದುಕೊಂಡು ಕಾನೂನಿನ ಅನ್ವಯ ಮುನ್ನಡೆಯಬೇಕು. ಈ ಆದೇಶದಲ್ಲಿ ನ್ಯಾಯಾಲಯವು ವ್ಯಕ್ತಪಡಿಸಿರುವ ಅಭಿಪ್ರಾಯದ ಪ್ರಭಾವಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ” ಎಂದು ವಿಶೇಷ ಸತ್ರ ನ್ಯಾಯಾಲಯವು 2024ರ ಫೆಬ್ರವರಿಯಲ್ಲಿ ಆದೇಶಿಸಿತ್ತು.

“ಹಾಲಿ ಪ್ರಕರಣದಲ್ಲಿ ಅರ್ಜಿದಾರರು ಸುದ್ದಿಯ ತುಣುಕು ಸಲ್ಲಿಸಿದ್ದು, ಅದರಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ ಎಂದು ವಿವರಿಸಲಾಗಿದೆ. ಇದು ಪ್ರತಿವಾದಿಯ ವಿರುದ್ಧ ಈ ಹಂತದಲ್ಲಿ ಐಪಿಸಿ ಸೆಕ್ಷನ್‌ 153ರ ಅಡಿ ಸಂಜ್ಞೇ ಪರಿಗಣಿಸಲು ಸಾಕಾಗಲಿದೆ. ಪ್ರತಿವಾದಿಯ ಹೇಳಿಕೆಯು ಅವಹೇಳನ ಮಾಡುವಂಥದ್ದೇ ಎಂಬುದು ವಿಚಾರಣೆಯಲ್ಲಿ ನಿರ್ಧಾರವಾಗಲಿದೆ. ಪ್ರಕರಣವು ಪ್ರಾಥಮಿಕ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವಂಥದ್ದಲ್ಲ. ಇದಲ್ಲದೇ, ವಿಚಾರಣಾಧೀನ ನ್ಯಾಯಾಲಯವು ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಗಳು ನಿರ್ದಿಷ್ಟವಾಗಿ ಗುರುತಿಸಬಹುದಾದ ವ್ಯಕ್ತಿಗಳಲ್ಲ ಎಂಬ ತೀರ್ಮಾನಕ್ಕೆ ಬರುವಾಗ ಪ್ರಮಾದ ಎಸಗಿದೆ. ವಿಚಾರಣಾಧೀನ ನ್ಯಾಯಾಲಯವು ಹೊರಡಿಸಿರುವ ಆಕ್ಷೇಪಾರ್ಹ ಆದೇಶದಲ್ಲಿ ಹಸ್ತಕ್ಷೇಪ ಅಗತ್ಯವಿದೆ” ಎಂದು ಆದೇಶದಲ್ಲಿ ವಿವರಿಸಿತ್ತು.

ಆದರೆ, 2023ರ ಮಾರ್ಚ್‌ 27ರಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು “ದೂರುದಾರರು ರಾಜ್ಯದ ಕೆಲವು ಕಡೆ ದೊಂಬಿ ನಡೆದಿದೆ ಎಂದು ಆರೋಪಿಸಿದ್ದಾರೆ. ಆದರೆ, ದಾಖಲೆಯಲ್ಲಿ ಯಾವುದೇ ವಿಚಾರ ಸಲ್ಲಿಸಿಲ್ಲ. 2022ರ ನವೆಂಬರ್‌ 8ರಂದು ಸತೀಶ್‌ ಜಾರಕಿಹೊಳಿ ಅವರು ನೀಡಿರುವ ಹೇಳಿಕೆಯ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳ ಸುದ್ದಿ ತುಣುಕು ಸಲ್ಲಿಸಿದ್ದಾರೆ. ಆದರೆ, ಇದಕ್ಕೆ ಐಪಿಸಿ ಸೆಕ್ಷನ್‌ 153 ಅನ್ವಯಿಸುವುದಿಲ್ಲ. ಸಂಜ್ಞೇ ಪರಿಗಣಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸಲಾಗಿಲ್ಲ. ಹೀಗಾಗಿ, ದೂರು ಅನೂರ್ಜಿತವಾಗಿದೆ” ಎಂದು ಆದೇಶಿಸಿತ್ತು.

ಪ್ರಕರಣದ ಹಿನ್ನೆಲೆ: ಕಾಂಗ್ರೆಸ್‌ ಮುಖಂಡ ಸತೀಶ್‌ ಜಾರಕಿಹೊಳಿ ಅವರು 2022ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಸಿದ್ದ ಕಾರ್ಯಕ್ರಮದಲ್ಲಿ “ಹಿಂದೂ ಎನ್ನುವುದು ಭಾರತೀಯ ಪದವಲ್ಲ. ಅದು ಪರ್ಷಿಯನ್‌ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Also Read
ಹಿಂದೂ ಹೇಳಿಕೆ ವಿವಾದ: ಸಚಿವ ಜಾರಕಿಹೊಳಿ ವಿರುದ್ಧ ಪ್ರಕರಣ ಪರಿಗಣಿಸಲು ಮ್ಯಾಜಿಸ್ಟ್ರೇಟ್‌ಗೆ ವಿಶೇಷ ನ್ಯಾಯಾಲಯದ ಆದೇಶ

“ಶಾಸಕ ಸತೀಶ್‌ ಜಾರಕಿಹೊಳಿ ಅವರು ದೂರುದಾರರಾದ ವಕೀಲ ದಿಲೀಪ್‌ ಕುಮಾರ್‌ ಮತ್ತು ಹಿಂದೂ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಹಾನಿ, ಅವಮಾನ ಮಾಡಿದ್ದಾರೆ. ಸತೀಶ್‌ ಜಾರಕಿಹೊಳಿ ಸಾರ್ವಜನಿಕವಾಗಿ ಹಿಂದೂ ಪದದ ಕುರಿತು ಹೇಳಿಕೆ ನೀಡಿದ್ದು, ಅದನ್ನು ಆನಂತರ ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ಅವರು ಭಾರತೀಯ ದಂಡ ಸಂಹಿತೆ ಸೆಕ್ಷನ್‌ 500ರ (ಬೇರೊಬ್ಬರಿಗೆ ಅವಮಾನ ಮಾಡುವುದು) ಅಡಿ ಅಪರಾಧ ಎಸಗಿದ್ದಾರೆ. ಅವರ ಹೇಳಿಕೆಯ ನಂತರ ರಾಜ್ಯದ ವಿವಿಧೆಡೆ ಜನರು ಧರಣಿ ನಡೆಸುತ್ತಿದ್ದು, ದೊಂಬಿಗೆ ಇಳಿದಿದ್ದಾರೆ. ಆರೋಪಿ ಜಾರಕಿಹೊಳಿ ಅವರು ದೊಂಬಿ ನಡೆಸಲು ಪ್ರಚೋದನೆ ನೀಡುವ ಮೂಲಕ ಐಪಿಸಿ ಸೆಕ್ಷನ್‌ 153ರ (ದೊಂಬಿಗೆ ಪ್ರಚೋದನೆ) ಅಡಿ ಅಪರಾಧ ಎಸಗಿದ್ದಾರೆ" ಎಂದು ಖಾಸಗಿ ದೂರಿನಲ್ಲಿ ಆರೋಪಿಸಲಾಗಿತ್ತು.

Kannada Bar & Bench
kannada.barandbench.com