[ಯೆಸ್ ಬ್ಯಾಂಕ್ ಹಗರಣ] ರಾಣಾ ಕಪೂರ್ ಪತ್ನಿ, ಪುತ್ರಿಯರಿಗೆ ಜಾಮೀನು ನಿರಾಕರಿಸಿದ ಸಿಬಿಐ ವಿಶೇಷ ನ್ಯಾಯಾಲಯ

[ಯೆಸ್ ಬ್ಯಾಂಕ್ ಹಗರಣ] ರಾಣಾ ಕಪೂರ್ ಪತ್ನಿ, ಪುತ್ರಿಯರಿಗೆ ಜಾಮೀನು ನಿರಾಕರಿಸಿದ ಸಿಬಿಐ ವಿಶೇಷ ನ್ಯಾಯಾಲಯ

ಅರ್ಜಿದಾರರು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಗಂಭೀರ ಅಪರಾಧದಲ್ಲಿ ಭಾಗಿಯಾಗಿದ್ದು ಮಹಿಳೆಯರು ಅಥವಾ ಸಣ್ಣ ಮಕ್ಕಳ ತಾಯಿಯಾಗಿ ಯಾವುದೇ ಸಹಾನುಭೂತಿಗೆ ಅವರು ಅರ್ಹರಲ್ಲ ಎಂದು ನ್ಯಾಯಾಲಯ ಹೇಳಿದೆ.
Published on

ದಿವಾನ್ ಹೌಸಿಂಗ್ ಫೈನಾನ್ಶಿಯಲ್ ಲಿಮಿಟೆಡ್ (DHFL) ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪತ್ನಿ ಬಿಂದು ಕಪೂರ್ ಮತ್ತು ಪುತ್ರಿಯರಾದ ರಾಧಾ ಕಪೂರ್ ಮತ್ತು ರೋಶಿನಿ ಕಪೂರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಕೇಂದ್ರ ತನಿಖಾ ದಳ (ಸಿಬಿಐ) ಪೂರಕ ಆರೋಪಪಟ್ಟಿ ಸಲ್ಲಿಸಿದ್ದು, ಬಿಂದು ಮತ್ತು ರಾಧಾ ಕಪೂರ್ ಅವರನ್ನು ಆರೋಪಿಗಳೆಂದು ಹೆಸರಿಸಿತ್ತು. ಆದರೆ, ಈ ಇಬ್ಬರನ್ನು ಇನ್ನೂ ಬಂಧಿಸಿರಲಿಲ್ಲ.

Also Read
ಅಗ್ರಿ ಗೋಲ್ಡ್‌ ವಂಚನೆ: ಪ್ರಕರಣಗಳ ವಿಚಾರಣೆಗೆ ನೋಡಲ್‌ ರಾಜ್ಯ, ನ್ಯಾಯಾಲಯ ಸ್ಥಾಪನೆಗೆ ಸುಪ್ರೀಂ ಮೆಟ್ಟಿಲೇರಿದ ಸರ್ಕಾರ

ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ಸಮನ್ಸ್‌ಗೆ ಸಂಬಂಧಿಸಿದಂತೆ, ಸೆ. 4ರಂದು ಹಾಜರಾಗಿದ್ದ ಇಬ್ಬರು ಅರ್ಜಿದಾರರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು. ಮೊದಲ ಆರೋಪಪಟ್ಟಿಯಲ್ಲಿ ಕಪೂರ್ ಜೊತೆಗೆ ರೋಶಿನಿ ಅವರನ್ನು ಆರೋಪಿಯೆಂದು ಹೆಸರಿಸಲಾಗಿತ್ತು. ಇತರ ಆರೋಪಿಗಳೊಂದಿಗೆ ಶಾಮೀಲಾಗಿರುವುದನ್ನು ಈ ಮಹಿಳೆಯರ ವಿರುದ್ಧದ ಆರೋಪಗಳು ಸಾಬೀತುಪಡಿಸಿರುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶ ಎಸ್‌ ಯು ವಡಗಾಂವ್ಕರ್ ಅವರು ಸೆಪ್ಟೆಂಬರ್ 18 ರಂದು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು.

"ಅಪರಾಧದ ಗಹನತೆ ಮತ್ತು ಸ್ವರೂಪ ಪರಿಗಣಿಸಿ ಮತ್ತು ಸಮಾಜದ ದೊಡ್ಡ ಹಿತಾಸಕ್ತಿಯನ್ನು ಪರಿಗಣಿಸಿ, ಆರೋಪಿಗಳು/ ಅರ್ಜಿದಾರರು ರೂ 4000 ಕೋಟಿಗಳಷ್ಟು ದೊಡ್ಡ ಮೊತ್ತದ ಸಾರ್ವಜನಿಕ ಹಣ ನಷ್ಟ ಉಂಟಾಗಿರುವ ಪ್ರಕರಣದಲ್ಲಿ ಪಾಲುಗೊಂಡಿರುವುದರಿಂದ ಅರ್ಜಿಗಳು ತಿರಸ್ಕರಿಸಲು ಅರ್ಹವಾಗಿವೆ" ಎಂದು ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಅರ್ಜಿದಾರರು ಮಹಿಳೆಯರು ಹಾಗೂ ಅವರಲ್ಲಿ ಒಬ್ಬರು ಚಿಕ್ಕ ಮಕ್ಕಳ ತಾಯಿ ಎಂಬ ವಾದವನ್ನು ನ್ಯಾಯಾಲಯ ಜಾಮೀನು ನೀಡುವ ವೇಳೆ ಒಪ್ಪಲಿಲ್ಲ. ಬದಲಿಗೆ ಸೆಪ್ಟೆಂಬರ್ 23ರವರೆಗೆ ಮಹಿಳೆಯರಿಗೆ ನ್ಯಾಯಾಂಗ ಬಂಧನ ವಿಧಿಸಿತು. ಯೆಸ್ ಬ್ಯಾಂಕ್ ಮತ್ತು ಡಿಎಚ್‌ಎಫ್‌ಎಲ್‌ಗೆ ಮೋಸ ಮತ್ತು ವಂಚನೆ ಮಾಡುವ ಸಾಮಾನ್ಯ ಉದ್ದೇಶದೊಂದಿಗೆ 14 ಆರೋಪಿಗಳು ಕ್ರಿಮಿನಲ್ ಪಿತೂರಿ ನಡೆಸಿದ್ದರು ಎಂಬುದು ಸಿಬಿಐ ವಾದವಾಗಿತ್ತು.

Kannada Bar & Bench
kannada.barandbench.com