India completed its 4th periodic review under the ICCPR in Geneva 
ಸುದ್ದಿಗಳು

ಜಿನೀವಾದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳು, ವಿವಿಧತೆ ಕುರಿತು ಮಾತನಾಡಿದ ದೇಶದ ಇಬ್ಬರು ಅತ್ಯುನ್ನತ ಕಾನೂನು ಅಧಿಕಾರಿಗಳು

Bar & Bench

ವಿಶ್ವಸಂಸ್ಥೆ ಸ್ಥಾಪಿಸಿದ ಮಾನವ ಹಕ್ಕುಗಳ ಸಮಿತಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಕುರಿತಾದ ಅಂತರರಾಷ್ಟ್ರೀಯ ಒಡಂಬಡಿಕೆಯಡಿ (ಐಸಿಸಿಪಿಆರ್)  ಭಾರತದ ನಾಲ್ಕನೇ ಆವೃತ್ತಿಯ ಪರಾಮರ್ಶೆ ಗುರುತಿಸಲು ಜಿನಿವಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೇತೃತ್ವದ ಭಾರತೀಯ ನಿಯೋಗ ಇತ್ತೀಚೆಗೆ ಭಾಗವಹಿಸಿತು.

ಭಾರತೀಯ ನಿಯೋಗದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಕಾರ್ಯದರ್ಶಿ (ಪಶ್ಚಿಮ) ಪವನ್ ಕಪೂರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮತ್ತು ಅಲ್ಪಸಂಖ್ಯಾತ ವ್ಯವಹಾರ ಕುರಿತಾದ ಕೇಂದ್ರ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಇದ್ದರು.

ಒಟ್ಟು 18 ಸ್ವತಂತ್ರ ತಜ್ಞರನ್ನು ಒಳಗೊಂಡಿರುವ ಮಾನವ ಹಕ್ಕುಗಳ ಸಮಿತಿ ಐಸಿಸಿಪಿಆರ್ ಜಾರಿ ಕುರಿತಂತೆ ಮೌಲ್ಯಮಾಪನ ಮಾಡುತ್ತದೆ, ದೇಶ ಪಕ್ಷಕಾರರ ವರದಿಗಳನ್ನು ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ಶಿಫಾರಸುಗಳನ್ನು ಮಾಡುತ್ತದೆ.

ಹೊಸ ಕ್ರಿಮಿನಲ್ ಕಾನೂನುಗಳ ಜಾರಿ ಕುರಿತಂತೆ ಮಾತನಾಡಿದ ದೇಶದ ಅತ್ಯುನ್ನತ ಕಾನೂನು ಅಧಿಕಾರಿಯಾಗಿರುವ ಅಟಾರ್ನಿ ಜನರಲ್ (ಎಜಿ) ವೆಂಕಟರಮಣಿ ಅವರು ಇದು ದೇಶ ಕೈಗೊಂಡ ಅತಿದೊಡ್ಡ ಕ್ರಿಮಿನಲ್ ಕಾನೂನು ಸುಧಾರಣೆ ಎಂದರು.

"ಭಾರತ ಮೂರು ಪ್ರಮುಖ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ತನ್ನ ಇತಿಹಾಸದಲ್ಲಿ ಅತಿದೊಡ್ಡ ಕ್ರಿಮಿನಲ್ ಕಾನೂನು ಸುಧಾರಣೆ ಕೈಗೊಂಡಿದೆ. ಪ್ರಕರಣಗಳ ತ್ವರಿತ ವಿಲೇವಾರಿ ಸೇರಿದಂತೆ ಕ್ರಿಮಿನಲ್ ನ್ಯಾಯಿಕ ಆಡಳಿತದಲ್ಲಿನ ಪ್ರಮುಖ ಸಮಸ್ಯೆಗಳನ್ನು ಈ ಪ್ರಯತ್ನ ಇಲ್ಲವಾಗಿಸುತ್ತದೆ" ಎಂದು ಎಜಿ ಹೇಳಿದರು.

ಸಂವಿಧಾನಕ್ಕೆ 2023ರಲ್ಲಿ ತಿದ್ದುಪಡಿ ಮಾಡಿದ ಪರಿಣಾಮ ಸಂಸತ್ತಿನಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನ ಮೀಸಲಿಡುವುದು ಕಡ್ಡಾಯವಾಗಿದೆ ಎಂದು ಅಟಾರ್ನಿ ಜನರಲ್‌ ಹರ್ಷ ವ್ಯಕ್ತಪಡಿಸಿದರು.

ತಾರತಮ್ಯ, ಅಸಮಾನತೆ ಮತ್ತು ಅನ್ಯಾಯ ಇನ್ನೂ ಮುಂದುವರಿದಿದೆ ಮತ್ತು ಹೊಸ ಬೆದರಿಕೆಗಳು ಎದುರಾಗುತ್ತಲೇ ಇದ್ದರೂ ಈ ಸವಾಲುಗಳು ಭಾರತದ ಸಂಕಲ್ಪವನ್ನು ಮತ್ತು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಕುರಿತಂತೆ ಸಂವಿಧಾನ ಶಿಲ್ಪಿಗಳು ಕಂಡ ಕನಸುಗಳನ್ನು ನನಸಾಗಿಸುವ ಬದ್ಧತೆಯನ್ನು ಬಲಪಡಿಸುತ್ತಲೇ ಇವೆ ಎಂದರು.

ದೇಶದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಭಾರತದ ವೈವಿಧ್ಯತೆ, ದೇಶದ ಸಾಮಾಜಿಕ-ಆರ್ಥಿಕ ರೂಪಾಂತರ ಮತ್ತು  ಪತ್ರಿಕಾ ಮಾಧ್ಯಮ  ವಿಕಸನಗೊಂಡ ಬಗೆಯನ್ನು ವಿವರಿಸಿದರು.

ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಪರಮ ಬೆದರಿಕೆಯಾಗಿ ಉಳಿದಿದೆ. ಭಯೋತ್ಪಾದನೆ ಮಾನವ ಹಕ್ಕುಗಳ ಮೇಲಿನ ನೇರ ದಾಳಿಯಾಗಿದ್ದು, ಮುಗ್ಧ ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದರು.

ಭಾರತೀಯ ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ವಿಕಾಸವನ್ನು ಉಲ್ಲೇಖಿಸಿದ ಅವರು  ನಾಗರಿಕನೊಬ್ಬ ತನ್ನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಅಥವಾ ಉಲ್ಲಂಘನೆಯ ಭೀತಿ ಇದೆ ಎಂದು ದೇಶದ ಅತ್ಯುನ್ನತ ಸಾಂವಿಧಾನಿಕ  ನ್ಯಾಯಾಲಯದ ಕದ ತಟ್ಟಬಹುದಾದ ಏಕೈಕ ದೇಶವೆಂದರೆ ಅದು ಬಹುಶಃ ಭಾರತ ಮಾತ್ರ ಎಂದರು.