ಸುದ್ದಿಗಳು

ವಿದೇಶಿ ವಕೀಲರ ಪ್ರವೇಶ ನಿಯಮಾವಳಿ ಪರಿಶೀಲನೆ: ಬಿಸಿಐ ರಚಿಸಿದ ಸಮಿತಿಗೆ ನ್ಯಾಯವಾದಿ ಸಿರಿಲ್ ಶ್ರಾಫ್‌ ಅಧ್ಯಕ್ಷ

ನಿಯಮಗಳು ಜಾರಿಯಲ್ಲಿದ್ದು ಅವುಗಳನ್ನು ಅಮಾನತುಗೊಳಿಸಲಾಗಿಲ್ಲ ಎಂದು ಬಿಸಿಐ ಇದೇ ವೇಳೆ ಸ್ಪಷ್ಟಪಡಿಸಿದೆ.

Bar & Bench

ಭಾರತಕ್ಕೆ ವಿದೇಶದ ವಕೀಲರು ಮತ್ತು ಪರದೇಶಗಳ ಕಾನೂನು ಸಂಸ್ಥೆಗಳಿಗೆ ನಿಯಂತ್ರಿತ ಪ್ರವೇಶ ಒದಗಿಸಿ ಜಾರಿಗೆ ತಂದ ನಿಯಮಗಳ ಕುರಿತು ಭಾರತೀಯ ವಕೀಲರಿಗೆ ಇರುವ ಕಳವಳ ಪರಿಹರಿಸಲು ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಸಮಿತಿಯೊಂದನ್ನು ರಚಿಸಿದೆ.

ಸಿರಿಲ್ ಅಮರ್‌ಚಂದ್ ಮಂಗಲದಾಸ್ ಕಾನೂನು ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಸಿರಿಲ್ ಶ್ರಾಫ್ ಸಮಿತಿಯ ಅಧ್ಯಕ್ಷತೆ ವಹಿಸಲಿದ್ದು, ಅಜಯ್ ಬಹ್ಲ್ (ಎಜಡ್‌ಬಿ ಮತ್ತು ಪಾಲುದಾರರು), ಸುಹೇಲ್ ನಥಾನಿ (ಇಎಲ್‌ಪಿ), ಸಂದೀಪ್ ಭಗತ್ (ಎಸ್‌ ಅಂಡ್‌ ಆರ್‌ ಅಸೋಸಿಯೇಟ್ಸ್), ಮಹೇಶ್ ಅಗರ್‌ವಾಲ್‌ (ಅಗರ್‌ವಾಲ್‌ ಲಾ ಅಸೋಸಿಯೇಟ್ಸ್) ಮತ್ತು ಅಮಿತ್ ಕಪೂರ್ (ಜೆಎಸ್‌ಎ) ಸಮಿತಿಯ ಉಳಿದ ಸದಸ್ಯರಾಗಿದ್ದಾರೆ.

ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳ ಪ್ರವೇಶ ಕುರಿತ ನಿಯಮಗಳ ಜಾರಿ ನಿರ್ಣಯಿಸಲು ಮತ್ತು ಅವುಗಳ ಸ್ಪಷ್ಟತೆ, ಸ್ಥಿರತೆ ಅಥವಾ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಅಗತ್ಯವಾದ ಕ್ರಮ ಸೂಚಿಸಬೇಕು ಎಂಬಂತಹ ಕಾರ್ಯಗಳನ್ನು ಸಮಿತಿಗೆ ವಹಿಸಲಾಗಿದೆ.

ವಿದೇಶಿ ವಕೀಲರು ಅಥವಾ ಸಂಸ್ಥೆಗಳು ನಿರ್ಬಂಧಗಳನ್ನು ತಪ್ಪಿಸುವುದನ್ನು ಮತ್ತು ಮೈತ್ರಿಗಳು, ಉಲ್ಲೇಖಗಳು ಅಥವಾ ಪಾಲುದಾರಿಕೆಗಳಂತಹ ಸಂಸ್ಥೆಗಳ ಮೂಲಕ ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಳ್ಳುವುದನ್ನು ತಡೆಯಲು ಸುರಕ್ಷತಾ ಕ್ರಮಗಳನ್ನು ತಿಳಿಸುವಂತೆ ಅದು ಹೇಳಿದೆ.

ಪರಿವರ್ತನೆಯ ಅವಧಿಯಲ್ಲಿ ಭಾರತೀಯ ಕಾನೂನು ಸಂಸ್ಥೆಗಳ ಹಿತಾಸಕ್ತಿ ರಕ್ಷಿಸುವಂತಹ ಕ್ರಮಗಳನ್ನು, ಜಾಗತಿಕ ಸ್ಪರ್ಧಾತ್ಮಕತೆಯ ಕಡೆಗೆ ಅವುಗಳ ಕ್ರಮೇಣ ವಿಕಸನದ ಬಗೆಯನ್ನು ತಿಳಿಸಬೇಕು ಎಂಬಂತಹ ವಿವಿಧ ಗುರಿಗಳನ್ನು ಸಮಿತಿಗೆ ನೀಡಲಾಗಿದೆ.

ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳ ಪ್ರವೇಶಕ್ಕೆ ಅನುವು ಮಾಡಿಕೊಡುವ ಹೊಸ ನಿಯಮಗಳು ಜಾರಿಯಲ್ಲಿದ್ದು ಅವುಗಳನ್ನು ಅಮಾನತುಗೊಳಿಸಲಾಗಿಲ್ಲ ಎಂದು ಬಿಸಿಐ ಇದೇ ವೇಳೆ ಸ್ಪಷ್ಟಪಡಿಸಿದೆ.

 [ಬಿಸಿಐ ನಿರ್ಣಯದ ಪ್ರತಿ]

BCI_Resolution.pdf
Preview