ಎನ್‌ಸಿಬಿ, ನಟಿ ರಿಯಾ ಚಕ್ರವರ್ತಿ
ಎನ್‌ಸಿಬಿ, ನಟಿ ರಿಯಾ ಚಕ್ರವರ್ತಿ 
ಸುದ್ದಿಗಳು

ರಿಯಾ ಚಕ್ರವರ್ತಿ ಪ್ರಕರಣ: ತೀರ್ಪು ವ್ಯಾಪಕ ಪರಿಣಾಮ ಬೀರಲಿದೆ ಎನ್ನುತ್ತ ಆದೇಶ ಕಾಯ್ದಿರಿಸಿದ ಬಾಂಬೆ ಹೈಕೋರ್ಟ್

Bar & Bench

ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೌವಿಕ್ ಚಕ್ರವರ್ತಿ ಹಾಗೂ ಇತರ ಆರೋಪಿಗಳಾದ ಅಬ್ದೆಲ್ ಬಸಿತ್ ಪರಿಹಾರ್, ಸ್ಯಾಮ್ಯುಯಲ್ ಮಿರಾಂಡಾ, ದೀಪೇಶ್ ಸಾವಂತ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟಿನ ನ್ಯಾಯಮೂರ್ತಿ ಎಸ್‌ ವಿ ಕೊತ್ವಾಲ್ ಮಂಗಳವಾರ ತೀರ್ಪು ಕಾಯ್ದಿರಿಸಿದರು.

ಕಳೆದ ಜೂನ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿ ಅನೇಕರನ್ನು ಬಂಧಿಸಲಾಗಿತ್ತು. ಸುಶಾಂತ್ ಬಳಕೆಗಾಗಿ ಮಾದಕವಸ್ತುಗಳನ್ನು ಸಂಗ್ರಹಿಸಲಾಗುತ್ತಿತ್ತು ಎಂದು ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಆರೋಪಿಸಿದೆ.

ಮುಂಬೈನ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಜಾಮೀನು ನಿರಾಕರಿಸಿದ ನಂತರ ರಿಯಾ ಮತ್ತಿತರರು ಜಾಮೀನಿಗಾಗಿ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಕೋರ್ಟ್ ಹೇಳಿದ್ದೇನು?

  • ಪಂಜಾಬ್ ಸರ್ಕಾರ ಮತ್ತು ಬಲದೇವ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 1999ರಂದು ನೀಡಿದ ತೀರ್ಪು ಈ ಪ್ರಕರಣವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

  • ಬಂಧಿತರ ವಿರುದ್ಧ ಮಾಡಲಾದ ಆರೋಪಗಳು ಜಾಮೀನು ನೀಡಲು ಅರ್ಹವೇ ಎಂಬ ಬಗ್ಗೆ ವಕೀಲರುಗಳು ಪರಿಶೀಲನೆ ನಡೆಸಬೇಕು.

"ಈ ತೀರ್ಪು ವ್ಯಾಪಕ ಪರಿಣಾಮ ಬೀರಲಿದೆ. ಪ್ರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ನಾನು ನೀಡುವೆ”
ನ್ಯಾ. ಕೊತ್ವಾಲ್

ರಿಯಾ ಮತ್ತು ಅವರ ಸಹೋದರನ ಪರವಾಗಿ ವಕೀಲ ಸತೀಶ್ ಮನೇಶಿಂದೆ ವಾದ ಮಂಡಿಸಿದರು. ಇತರ ಮೂರು ಆರೋಪಿಗಳ ಪರವಾಗಿ ವಕೀಲರಾದ ತಾರಿಕ್ ಸಯ್ಯದ್, ಸುಬೋಧ್ ದೇಸಾಯಿ ಮತ್ತು ರಾಜೇಂದ್ರ ರಾಥೋಡ್ ಹಾಜರಿದ್ದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಎನ್‌ಸಿಬಿ ಪರ ವಾದಿಸಿದರು.

ಸುಧೀರ್ಘ ಕಲಾಪದಲ್ಲಿ ಭಾಗವಹಿಸಿದ್ದಕ್ಕಾಗಿ ನ್ಯಾ. ಕೊತ್ವಾಲ್ ಎಲ್ಲಾ ವಕೀಲರುಗಳನ್ನು ಅಭಿನಂದಿಸಿದರು. ವಿಚಾರಣೆಯ ಬೃಹತ್ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ತೀರ್ಪು ನೀಡಲು ಸ್ವಲ್ಪ ಸಮಯ ಬೇಕಾಗಬಹುದು ಎಂದು ಕೋರ್ಟ್ ತಿಳಿಸಿದೆ.