Rahul Gandhi and Bombay High Court 
ಸುದ್ದಿಗಳು

ಮೋದಿ ವಿರುದ್ಧ ಹೇಳಿಕೆ: ಮಾನಹಾನಿ ದಾವೆ ರದ್ದತಿ ಕೋರಿದ್ದ ರಾಹುಲ್‌ ಅರ್ಜಿಯ ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್‌

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಆರ್ ಬೋರ್ಕರ್ ಅವರು ತೀರ್ಪು ಕಾಯ್ದಿರಿಸಿದರು.

Bar & Bench

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಮಾನಹಾನಿ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಬಾಂಬೆ ಹೈಕೋರ್ಟ್ ಮಂಗಳವಾರ ಕಾಯ್ದಿರಿಸಿದೆ.

ನ್ಯಾಯಮೂರ್ತಿ ಎನ್ ಆರ್‌ ಬೋರ್ಕರ್ ಅವರು ಪ್ರಕರಣದ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದರು.

ಭಾರತೀಯ ಜನತಾ ಪಕ್ಷದ ಸದಸ್ಯ ಮಹೇಶ್ ಹುಕುಂಚಂದ್ ಶ್ರೀಶ್ರೀಮಲ್ ಎಂಬವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 2019ರ ಆಗಸ್ಟ್‌ 28ರಂದು ಗಿರ್ಗಾಂವ್‌ನ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಗಾಂಧಿ ಅವರ ವಿರುದ್ಧ ಕ್ರಿಮಿನಲ್‌ ಮಾನಹಾನಿ ಪ್ರಕ್ರಿಯೆ ಆರಂಭಿಸಿತ್ತು.

ರಾಜಸ್ಥಾನದಲ್ಲಿ 2018ರಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕರ ಹೇಳಿಕೆ ನೀಡಿದ್ದರು ಎಂಬುದು ದೂರುದಾರರ ಆರೋಪವಾಗಿತ್ತು.  ಈ ಮಾನಹಾನಿಕರ ಹೇಳಿಕೆಯಿಂದಾಗಿ, ಮೋದಿ ಅವರನ್ನು ವಿವಿಧ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಮಾಧ್ಯಮಗಳಲ್ಲಿ ಟ್ರೋಲ್ ಮಾಡಿದ್ದವು ಎಂದು ದೂರಲಾಗಿತ್ತು.

ಮ್ಯಾಜಿಸ್ಟ್ರೇಟ್ ಅವರು ರಾಹುಲ್‌ ಅವರಿಗೆ ಸಮನ್ಸ್ ಜಾರಿಗೊಳಿಸಿದ ಬಳಿಕ, ಅವರು 2021ರಲ್ಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ದೂರು ರಾಜಕೀಯ ಪ್ರೇರಿತ ಎಂದು ವಾದಿಸಿದರು. ಸಿಆರ್‌ಪಿಸಿಸೆಕ್ಷನ್ 199(2) ಪ್ರಕಾರ ಇಂತಹ ಪ್ರಕರಣವನ್ನು ಸೆಷನ್ಸ್ ನ್ಯಾಯಾಲಯವೇ ಪರಿಗಣಿಸಬೇಕು ಮತ್ತು ಐಪಿಸಿ ಸೆಕ್ಷನ್ 499 ಪ್ರಕಾರ ರಾಜಕೀಯ ಪಕ್ಷವು ಮಾನಹಾನಿ ದೂರು ಸಲ್ಲಿಸಲು ಅರ್ಹವಲ್ಲ ಎಂಬ ವಾದವನ್ನೂ ಮುಂದಿಟ್ಟರು.

ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದ ಶ್ರೀಶ್ರಿಮಾಲ್ ಅವರು ತಾವು ಕೂಡ ನೊಂದ ವ್ಯಕ್ತಿಯಾಗಿದ್ದು ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳೊಂದಿಗೆ ದೂರು ಸಲ್ಲಿಸಿದ್ದೇನೆ ಎಂದು ಹೇಳಿದ್ದರು.