Jaganmohan Reddy with Andhra Pradesh High Court
Jaganmohan Reddy with Andhra Pradesh High Court  
ಸುದ್ದಿಗಳು

ಅಮರಾವತಿ ಭೂಹಗರಣ: ಎಫ್ಐಆರ್ ರದ್ದುಪಡಿಸಿದ ಆಂಧ್ರಪ್ರದೇಶ ಹೈಕೋರ್ಟ್

Bar & Bench

ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಥಮ ಮಾಹಿತಿ ವರದಿಯನ್ನು ಆಂಧ್ರಪ್ರದೇಶ ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ. ಅರ್ಜಿದಾರರು ಸಾಂವಿಧಾನಿಕ ಮತ್ತು ಕಾನೂನುಬದ್ಧ ಹಕ್ಕು ಚಲಾಯಿಸಿ ಭೂಮಿ ಖರೀದಿಸಿದ್ದು ಮಾರಾಟಗಾರರು ತಮ್ಮ ಸ್ವತ್ತನ್ನು ಸ್ವಇಚ್ಛೆ ಮತ್ತು ಸ್ವಪ್ರೇರಣೆಯಿಂದ ಅರ್ಜಿದಾರರಿಗೆ ನೋಂದಾಯಿತ ಮಾರಾಟ ಒಪ್ಪಂದದಡಿಯಲ್ಲಿ ಸೂಕ್ತ ವಹಿವಾಟು ರೀತ್ಯಾ ಮಾರಾಟ ಮಾಡಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಂತಹ ಖಾಸಗಿ ಮಾರಾಟ ವಹಿವಾಟುಗಳನ್ನು ಅಪರಾಧೀಕರಿಸಲಾಗದು ಮತ್ತು ಯಾವುದೇ ಅಪರಾಧಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಲು ಅರ್ಜಿದಾರರಿಗೆ ಪ್ರಕರಣದ ಸಂಗತಿ ಮತ್ತು ಸನ್ನಿವೇಶಗಳಲ್ಲಿ ಯಾವುದೇ ಕ್ರಿಮಿನಲ್‌ ಬಾಧ್ಯತೆ ಆರೋಪಿಸಲಾಗದು ಎಂದು ಅದು ಹೇಳಿದೆ. ಷೇರು ವಹಿವಾಟಿನಲ್ಲಿ ಕಂಡುಬರುವಂತಹ ಆಂತರಿಕ ವ್ಯಾಪಾರದ ಅಪರಾಧದ ಪರಿಕಲ್ಪನೆಯು (ಇನ್‌ಸೈಡರ್‌ ಟ್ರೇಡಿಂಗ್) ಐಪಿಸಿಗೆ ಸಂಪೂರ್ಣವಾಗಿ ಅನ್ಯವಾಗಿದೆ. ಇದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ನಮ್ಮ ಅಪರಾಧ ನ್ಯಾಯಶಾಸ್ತ್ರಕ್ಕೆ ತಿಳಿದಿಲ್ಲ. ಆದ್ದರಿಂದ ಇದನ್ನು ಸಂದರ್ಭೋಚಿತವಾಗಿ ಅಥವಾ ತುಲನಾತ್ಮಕವಾಗಿ ಅರ್ಜಿದಾರರನ್ನು ವಿಚಾರಣೆಗೆ ಒಳಪಡಿಸುವ ವಾಸ್ತವಿಕ ಸಂಗತಿಗಳಿಗೆ ಅನ್ವಯಿಸಲು ಸಾಧ್ಯವಿಲ್ಲ," ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಅಮರಾವತಿಯನ್ನು ವಿಭಜಿತ ಆಂಧ್ರಪ್ರದೇಶದ ನೂತನ ರಾಜಧಾನಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂಬುದು ಅರ್ಜಿದಾರರಿಗೆ ತಿಳಿದಿತ್ತು. ಹೀಗಾಗಿ ಅಮರಾವತಿಯಲ್ಲಿ ಹೊಸ ರಾಜಧಾನಿ ನಿರ್ಮಿಸುವ ಅಧಿಕೃತ ಘೋಷಣೆ ಹೊರಡಿಸುವ ಮೊದಲು ಪ್ರಸ್ತಾವಿತ ರಾಜಧಾನಿ ಮತ್ತದರ ಸುತ್ತಮುತ್ತಲಿನ ಭೂಮಿಯನ್ನು ಅಗ್ಗದ ಬೆಲೆಗೆ ಖರೀದಿಸಿದರು ಎಂಬುದು ಅರ್ಜಿದಾರರ ವಿರುದ್ಧ ಕೇಳಿಬಂದ ಆರೋಪವಾಗಿತ್ತು.

ಆದರೆ ಜಮೀನು ಖರೀದಿಸುವ ಸಮಯದಲ್ಲಿ ಮಾರಾಟಗಾರರಿಗೆ ಭೂಮಿ ಖರೀದಿಸುವುದರಿಂದ ಒದಗಬಹುದಾದ ಸುಪ್ತ ಅನುಕೂಲಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಬೇಕೆಂಬ ಕಾನೂನು ಹೊಣೆಗಾರಿಕೆ ಅರ್ಜಿದಾರರಿಗೆ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಮಾರಾಟದ ವಹಿವಾಟಿನ ಕಾರಣದಿಂದಾಗಿ ಮಾರಾಟಗಾರರು ಯಾವುದೇ ನಷ್ಟ ಅನುಭವಿಸಿಲ್ಲ ಮತ್ತು ಮಾರಾಟದ ವಹಿವಾಟಿನಲ್ಲಿ ಅಪರಾಧದ ಯಾವುದೇ ಅಂಶಗಳು ಕಂಡುಬಂದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ಈವರೆಗೆ ಸಂಗ್ರಹಿಸಿದ ಯಾವುದೇ ಸಾಕ್ಷ್ಯಗಳ ಆಧಾರದಲ್ಲಿ ಪ್ರಕರಣವನ್ನು ರೂಪಿಸಬಾರದು. ಐಪಿಸಿಯ ಸೆಕ್ಷನ್ 420, 406, 409 ಮತ್ತು 120-ಬಿ ಅಡಿಯಲ್ಲಿ ಯಾವುದೇ ಅಪರಾಧವಾಗಿದೆ ಎನ್ನುವಂತಿಲ್ಲ. . ಅಲ್ಲದೆ ಯಾವುದೇ ಕಾನೂನು ಬಾಹಿರ ಕೃತ್ಯ ಎಸಗಲು ಪಿತೂರಿ ನಡೆಸಿದ್ದಾರೆ ಎಂಬುದನ್ನು ಪ್ರಕರಣದ ವಾಸ್ತವಾಂಶಗಳು ತಿಳಿಸುವುದಿಲ್ಲ,” ಎಂದು ಪೀಠ ಹೇಳಿದೆ. ಆದ್ದರಿಂದ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 482ರ ಅಡಿ ಎಫ್‌ಐಆರ್‌ ರದ್ದುಗೊಳಿಸಲು ನ್ಯಾಯಾಲಯ ಅಧಿಕಾರ ಚಲಾಯಿಸಿತು.