Governor CV Ananda Bose vs West Bengal Chief Minister Mamata Banerjee x.com and facebook
ಸುದ್ದಿಗಳು

ಪ. ಬಂಗಾಳ ರಾಜ್ಯಪಾಲರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಮಮತಾ ಬ್ಯಾನರ್ಜಿಗೆ ಕಲ್ಕತ್ತಾ ಹೈಕೋರ್ಟ್ ನಿರ್ಬಂಧ

Bar & Bench

ಪ. ಬಂಗಾಳ ರಾಜ್ಯಪಾಲ ಸಿ ವಿ ಆನಂದ ಬೋಸ್ ಅವರ ವಿರುದ್ಧ ಯಾವುದೇ ಮಾನಹಾನಿಕರ ಅಥವಾ ಅಸಮಂಜಸ ಹೇಳಿಕೆ ನೀಡದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರ ಮೂವರಿಗೆ ಕಲ್ಕತ್ತಾ ಹೈಕೋರ್ಟ್‌ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.

ಮಮತಾ, ಇಬ್ಬರು ಶಾಸಕರು ಹಾಗೂ ಟಿಎಂಸಿ ನಾಯಕರೊಬ್ಬರ ವಿರುದ್ಧ ರಾಜ್ಯಪಾಲರು ಹೂಡಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣರಾವ್ ಅವರು ಈ ಆದೇಶ ಜಾರಿಗೊಳಿಸಿದರು.

ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿರುವುದರಿಂದ ಪ. ಬಂಗಾಳದ ರಾಜಭವನಕ್ಕೆ ಮಹಿಳೆಯರು ಪ್ರವೇಶಿಸುವುದು ಸುರಕ್ಷಿತವಲ್ಲ ಎಂದು ಬ್ಯಾನರ್ಜಿ ಹೇಳಿಕೆ ನೀಡಿದ್ದನ್ನು ಪ್ರಶ್ನಿಸಿ ಬೋಸ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಬೋಸ್‌ ಅವರು ಸಾಂವಿಧಾನಿಕ ಅಧಿಕಾರಿಯಾಗಿದ್ದು ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಬಳಸಿಕೊಂಡು ಬ್ಯಾನರ್ಜಿ ಹಾಗೂ ಇತರ ಟಿಎಂಸಿ ನಾಯಕರು ಅವರ ವಿರುದ್ಧ ಮಾಡುತ್ತಿರುವ ವೈಯಕ್ತಿಕ ದಾಳಿಯನ್ನು ಅವರಿಗೆ ಎದುರಿಸಲು ಸಾಧ್ಯವಾಗದು ಎಂದು ನ್ಯಾಯಾಲಯ ಹೇಳಿದೆ.

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಸೋಗಿನಲ್ಲಿ ವ್ಯಕ್ತಿಯ ಪ್ರತಿಷ್ಠೆಗೆ ಕಳಂತ ತರುವ ಹೇಳಿಕೆಗಳನ್ನು ನೀಡಲು ಅದು ಅನಿಯಂತ್ರಿತ ಹಕ್ಕಲ್ಲ ಎಂದು ನ್ಯಾಯಾಲಯ ನುಡಿಯಿತು.

ಹೀಗಾಗಿ ಬೋಸ್‌ ಅವರ ವಿರುದ್ಧ ಮಮತಾ ಹಾಗೂ ಇತರರು 14 ಆಗಸ್ಟ್ 2024ರವರೆಗೆ ಪ್ರಕಟಣೆ ಇಲ್ಲವೇ ಸಾಮಾಜಿಕ ವೇದಿಕೆಗಳ ಮೂಲಕ ಯಾವುದೇ ಮಾನಹನಿಕರ ಇಲ್ಲವೇ ಅಸಮಂಜಸ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಿದೆ.

ಬ್ಯಾನರ್ಜಿ ಹಾಗೂ ಇತರ ಟಿಎಂಸಿ ನಾಯಕರು ತಮ್ಮ ವಿರುದ್ಧ ಸುಳ್ಳು ಮತ್ತು ಕ್ಷುಲ್ಲಕ ಆರೋಪ ಮಾಡಿದ್ದು ಇದರಿಂದ ತಾವು ದ್ವೇಷ, ತಿರಸ್ಕಾರ ಮತ್ತು ಅಪಹಾಸ್ಯಕ್ಕೆ ತುತ್ತಾಗಿದ್ದಾಗಿ ಬೋಸ್ ನ್ಯಾಯಾಲಯಕ್ಕೆ ತಿಳಿಸಿದ್ದರು.

ಸಾಧಾರವಾಗಿ ಮಮತಾ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲಿದ್ದಾರೆ ಎಂದು ಮಮತಾ ಪರ ವಕೀಲರುವಾದಿಸಿದರು. " ರಾಜಭವನದ ಘಟನೆ ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿದ್ದು ಈ ಲೇಖನಗಳು ಮಾನಹಾನಿಕರವೆಂದು ಹೇಳಲಾಗುವುದಿಲ್ಲ " ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 14ರಂದು ನಡೆಯಲಿದೆ.