ಜನಪ್ರಿಯ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿಯವರ ವ್ಯಕ್ತಿತ್ವದ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ಮತ್ತು ಅವರ ನಾರಾಯಣ ಹೃದಯಾಲಯದ ವಾಣಿಜ್ಯ ಚಿಹ್ನೆ ಉಲ್ಲಂಘಿಸದಂತೆ ದೆಹಲಿ ಹೈಕೋರ್ಟ್ ಈಚೆಗೆ ನಿರ್ಬಂಧ ವಿಧಿಸಿದೆ.
ತಡೆಯಾಜ್ಞೆ ನೀಡಬಲ್ಲಂತಹ ಮೇಲ್ನೋಟದ ವಾದವನ್ನು ಫಿರ್ಯಾದಿ ಮಂಡಿಸಿದ್ದು ಒಂದು ವೇಳೆ ಏಕಪಕ್ಷೀಯ ಆದೇಶವಾಗಿ ಮಧ್ಯಂತರ ತಡೆ ನೀಡಿದೆ ಹೋದರೆ ಫಿರ್ಯಾದಿಗೆ ಸರಿಪಡಿಸಲಾಗದ ನಷ್ಟ ಉಂಟಾಗುತ್ತದೆ. ಅಲ್ಲದೆ ಸಮಂಜಸತೆಯ ಸಂತುಲನವು ಫಿರ್ಯಾದಿಗಳ ಪರವಾಗಿಯೂ ಪ್ರತಿವಾದಿಗಳ ವಿರುದ್ಧವಾಗಿಯೂ ಇದೆ ಎಂದು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ತಿಳಿಸಿದರು.
ಡಾ. ಶೆಟ್ಟಿ ಅವರ ತಿರುಚಿದ ವಿಡಿಯೋಗಳನ್ನು ಪ್ರಸಾರ ಮಾಡಿ ಪರಿಶೀಲಿಸದ ಆರೋಗ್ಯ ಸಲಹೆ ಹಾಗೂ ತಪ್ಪು ಉತ್ಪನ್ನಗಳ ಮಾಹಿತಿ ಒದಗಿಸಲು ದೇವಿ ಶೆಟ್ಟಿ ಅವರ ಹೆಸರು ಬಳಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ವಿವಿಧ ಫೇಸ್ಬುಕ್ ಪುಟಗಳನ್ನು ನಿರ್ವಹಿಸುವವರು ಸೇರಿದಂತೆ ವಿವಿಧ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇಂತಹ ವಸ್ತುವಿಷಯಗಳು ಸಾರ್ವಜನಿಕರ ದಾರಿ ತಪ್ಪಿಸಲಿದೆ.ಜೊತೆಗೆ ಡಾ. ಶೆಟ್ಟಿ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಅಪಾಯವಿದೆ ಎಂದು ನ್ಯಾಯಾಲಯ ಹೇಳಿತು.
ಶೆಟ್ಟಿ ಅವರ ಹೆಸರು, ವ್ಯಕ್ತಿತ್ವ ಮತ್ತು ವರ್ಚಸ್ಸು ಅಪಾರ ಅಭಿಮಾನ ಮತ್ತು ಸಾರ್ವಜನಿಕ ನಂಬಿಕೆಯನ್ನು ಗಳಿಸಿದೆ. ವಾಣಿಜ್ಯ ಲಾಭಕ್ಕಾಗಿ ಮೂರನೇ ವ್ಯಕ್ತಿಗಳು ಅವರ ವ್ಯಕ್ತಿತ್ವ ಮತ್ತು ನಾರಾಯಣ ಹೆಲ್ತ್ನ ನೋಂದಾಯಿತ ವಾಣಿಜ್ಯ ಚಿಹ್ನೆಗಳನ್ನು ಅನಧಿಕೃತವಾಗಿ ಬಳಸಿದ್ದಾರೆ ಎಂದು ಬೆರಳು ಮಾಡಲಾಗಿತ್ತು.
ಶೆಟ್ಟಿ ಅವರ ಹೆಸರು, ಚಿತ್ರ, ಹೋಲಿಕೆ ಅಥವಾ ವ್ಯಕ್ತಿತ್ವದ ಯಾವುದೇ ಅಂಶಗಳನ್ನು ವಾಣಿಜ್ಯ ಅಥವಾ ವೈಯಕ್ತಿಕ ಲಾಭಕ್ಕಾಗಿ ಅವರ ಅನುಮತಿಯಿಲ್ಲದೆ ಬಳಸಿಕೊಳ್ಳದಂತೆ ನ್ಯಾಯಾಲಯ ಪ್ರತಿವಾದಿಗಳಿಗೆ ನಿರ್ಬಂಧ ವಿಧಿಸಿದೆ. ಕೃತಕ ಬುದ್ಧಿಮತ್ತೆ ಮತ್ತು ಆಳವಾದ ನಕಲಿ ಉಪಕರಣಗಳಂತಹ ಅಸ್ತಿತ್ವದಲ್ಲಿರುವ ಅಥವಾ ಹೊಸ ತಂತ್ರಜ್ಞಾನಗಳ ಬಳಸಿ ಅವರ ಹೆಸರನ್ನು ಬಳಸಿಕೊಳ್ಳುವುದು ಸೇರಿದಂತೆ ಎಲ್ಲಾ ರೀತಿಯ ದುರುಪಯೋಗಗಳಿಗೆ ಈ ನಿರ್ಬಂಧ ವಿಧಿಸಲಾಗಿದೆ.
ಅಲ್ಲದೆ ನಾರಾಯಣ ಹೃದಯಾಲಯದ ನೋಂದಾಯಿತ ವಾಣಿಜ್ಯ ಚಿಹ್ನೆ ಉಲ್ಲಂಘಿಸದಂತೆ ಪ್ರತಿವಾದಿಗಳನ್ನು ನಿರ್ಬಂಧಿಸಲಾಗಿದೆ. ಹೃದಯಾಲಯದ ಹೆಸರು, ವಿಳಾಸ ಮತ್ತು ಸಂಪರ್ಕ ಮಾಹಿತಿ ಸೇರಿದಂತೆ ಅದರ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸುವಾಗ ಉಲ್ಲಂಘನೆಯ ವಸ್ತುವಿಷಯವನ್ನು ನಿರ್ಬಂಧಿಸಲು ಮತ್ತು ತೆಗೆದುಹಾಕಲು ಸಾಮಾಜಿಕ ಮಾಧ್ಯಮ ಮಧ್ಯಸ್ಥಗಾರರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಅದೇ ರೀತಿ, ಯೂಟ್ಯೂಬ್ನಿಂದ ಅಂತಹ ವಸ್ತುವಿಷಯವನ್ನು ತೆಗೆದುಹಾಕಲು ಗೂಗಲ್ಗೆ ಆದೇಶಿಸಲಾಗಿದೆ.
ಪ್ರಕರಣದ ಸಂದರ್ಭದಲ್ಲಿ ಪತ್ತೆಯಾದ ಯಾವುದೇ ಬೇರೆ ಉಲ್ಲಂಘನೆಯ ವಸ್ತು ವಿಷಯವನ್ನು ತೆಗೆದುಹಾಕಲು ವಿನಂತಿಸುವುದಕ್ಕಾಗಿ ಸಾಮಾಜಿಕ ಮಾಧ್ಯಮ ಮಧ್ಯಸ್ಥಗಾರರನ್ನು ಸಂಪರ್ಕಿಸಲು ಫಿರ್ಯಾದಿದಾರರಿಗೆ ನ್ಯಾಯಾಲಯ ಅನುಮತಿ ನೀಡಿದೆ. ಮೇಲಾಗಿ, ನಿಯಮ ಉಲ್ಲಂಘಿಸುವ ಜಾಲತಾಣಗಳನ್ನು ನಿರ್ಬಂಧಿಸಬೇಕು ಎಂದು ಟೆಲಿಕಾಂ ಮತ್ತು ಅಂತರ್ಜಾಲ ಸೇವಾ ಪೂರೈಕೆದಾರರು ಹಾಗೂ ಸರ್ಕಾರಕ್ಕೆ ಅದು ಸೂಚಿಸಿದೆ.
ಶೆಟ್ಟಿ ಮತ್ತು ನಾರಾಯಣ ಹೃದಯಾಲಯದ ಪರವಾಗಿ ವಕೀಲರಾದ ಸಾಯಿಕೃಷ್ಣ ರಾಜಗೋಪಾಲ್, ಶಿಲ್ಪಾ ಗುಪ್ತಾ, ದೀಪಿಕಾ ಪೋಖಾರಿಯಾ ಮತ್ತು ನಮನ್ ಟಂಡನ್ ವಾದ ಮಂಡಿಸಿದ್ದರು. ಕೆಲವು ಪ್ರತಿವಾದಿಗಳನ್ನು ವಕೀಲರಾದ ಅಭಿಷೇಕ್ ಕುಮಾರ್, ಏಕ್ತಾ ಶರ್ಮಾ, ಪ್ರಜ್ಞಾ ಜೈನ್ ಮತ್ತು ಸುರಭಿ ಕಟಾರೆ ಅವರು ಪ್ರತಿನಿಧಿಸಿದ್ದರು.