Justice S Abdul Nazeer
Justice S Abdul Nazeer 
ಸುದ್ದಿಗಳು

ಆಂಧ್ರಪ್ರದೇಶ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಕನ್ನಡಿಗ ಎಸ್ ಅಬ್ದುಲ್ ನಜೀರ್ ನೇಮಕ

Bar & Bench

ಆಂಧ್ರಪ್ರದೇಶದ ನೂತನ ರಾಜ್ಯಪಾಲರನ್ನಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕರ್ನಾಟಕದವರಾದ ಎಸ್‌ ಅಬ್ದುಲ್‌ ನಜೀರ್‌ ಅವರನ್ನು ರಾಷ್ಟ್ರಪತಿ ಅವರು ನೇಮಕ ಮಾಡಿದ್ದಾರೆ.

ನ್ಯಾ. ನಜೀರ್ ಅವರು ಜನವರಿ 4, 2023ರಂದು ನಿವೃತ್ತರಾಗಿದ್ದರು. ಐತಿಹಾಸಿಕ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪು ನೀಡಿದ ಪೀಠದ ಭಾಗವಾಗಿದ್ದರು ಅವರು.

ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯವರಾದ ನ್ಯಾ. ನಜೀರ್‌ ಜನಿಸಿದ್ದು 1958ರ ಜನವರಿ 5ರಂದು. ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಅವರು ಫೆಬ್ರವರಿ 18, 1983ರಲ್ಲಿ ವಕೀಲಿಕೆ ಆರಂಭಿಸಿದ್ದರು. ಬಳಿಕ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡಿದರು. ಮೇ 12, 2003ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅವರು ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾದದ್ದು ಸೆಪ್ಟೆಂಬರ್ 24, 2004ರಲ್ಲಿ. ಬಳಿಕ ಫೆಬ್ರವರಿ 17, 2017ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.

ನ್ಯಾ. ನಜೀರ್‌ ಅವರು ಕಳೆದ ತಿಂಗಳು ನಿವೃತ್ತರಾದಾಗ ಸಿಜೆಐ ಡಿ ವೈ ಚಂದ್ರಚೂಡ್ ಅವರು ನ್ಯಾಯಮೂರ್ತಿ ನಜೀರ್ ಅವರ ಸರಳತೆಯನ್ನು ಶ್ಲಾಘಿಸಿದ್ದರು. ಅವರ ಬಳಿ 2019ರವರೆಗೆ ಪಾಸ್‌ಪೋರ್ಟ್‌ ಕೂಡ ಇರಲಿಲ್ಲ. ಕೆಲ ವಾರಗಳ ಹಿಂದಷ್ಟೇ ಮಾಸ್ಕೋಗೆ ಪ್ರಯಣಿಸಿದ್ದರು ಎಂದು ನೆನೆದಿದ್ದರು.

“ಅವರು ಅತ್ಯಂತ ಸರಳವಾಗಿದ್ದರು. ಇತ್ತೀಚಿನವರೆಗೂ ಅವರ ಬಳಿ ಚಾಲಕರ ಪರವಾನಗಿ ಮತ್ತು ನ್ಯಾಯಮೂರ್ತಿಗಳ ಗುರುತಿನ ಚೀಟಿ ಮಾತ್ರ ಇದ್ದವು. 2019ರಲ್ಲಿ ಅವರು ಪಾಸ್‌ಪೋರ್ಟ್‌ ಮಾಡಿಸಿಕೊಂಡಿದ್ದರು. ಕೆಲ ವಾರಗಳ ಹಿಂದಷ್ಟೇ ಮಾಸ್ಕೋಗೆ ಪ್ರಯಾಣಿಸಿದಾಗ ಅವರ ಪಾಸ್‌ಪೋರ್ಟ್‌ನಲ್ಲಿ ಮೊದಲ ಸ್ಟಾಂಪ್‌ ಮೂಡಿತ್ತು” ಎಂದಿದ್ದರು.