Teesta Setalvad
Teesta Setalvad  Facebook
ಸುದ್ದಿಗಳು

ಸಾಕ್ಷಿಗಳಿಗೆ ಗಿಳಿಪಾಠ: ತೀಸ್ತಾ ವಿರುದ್ಧ ಮುಂಬೈ ನ್ಯಾಯಾಲಯದ ಮೊರೆ ಹೋದ ಗುಜರಾತ್‌ ಗಲಭೆ ಪ್ರಕರಣದ ಆರೋಪಿಗಳು

Bar & Bench

ಮುಂಬೈ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಬೆಸ್ಟ್ ಬೇಕರಿ ಪ್ರಕರಣದ ಇಬ್ಬರು ಆರೋಪಿಗಳು ಕೇಸನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿದ್ದಾರೆ.

ವಿಚಾರಣಾ ನ್ಯಾಯಾಲಯದ ಬಗ್ಗೆ ತಾವು ಇರಿಸಿದ್ದ ವಿಶ್ವಾಸಕ್ಕೆ ಧಕ್ಕೆಯಾಗಿದ್ದು ಯಾಂತ್ರಿಕವಾಗಿ ಶಿಕ್ಷೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ತಮಗೆ ನ್ಯಾಯ ದೊರಕುವ ಖಾತ್ರಿ ಇಲ್ಲ ಎಂದು ನ್ಯಾಯವಾದಿ ಯೋಗೀಶ್ ದೇಶಪಾಂಡೆ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಸಾಮಾಜಿಕ ಹೋರಾಟಗಾರ್ತಿ, ಬಂಧಿತೆ ತೀಸ್ತಾ ಸೆಟಲ್ವಾಡ್‌ ಅವರು ಪ್ರಕರಣದಲ್ಲಿನ ಸಾಕ್ಷಿಗಳಿಗೆ ಗಿಳಿಪಾಠ ಮಾಡಿದ್ದು ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಕೋರಿದ್ದಾರೆ.

ಸಾಕ್ಷಿಗಳಿಗೆ ಗಿಳಿಪಾಠ ಮಾಡಲಾಗುತ್ತಿದೆ ಎಂಬ ತಮ್ಮ ಕಳವಳವನ್ನು ವಿಚಾರಣಾ ನ್ಯಾಯಾಲಯ ನಿರ್ಲಕ್ಷಿಸಿದೆ ಎಂದು ಆರೋಪಿಗಳಾದ ಹರ್ಷದ್ ಸೋಲಂಕಿ ಮತ್ತು ಮಫತ್ ಗೋಯಿಲ್ ದೂರಿದ್ದಾರೆ. ತೀಸ್ತಾ ಮತ್ತು ಆಕೆಯ ಸಹಚರರು ರೂಪಿಸಿದ ಸಂಚಿಗೆ ಆರೋಪಿಗಳಾದ ತಾವು ಬಲಿಯಾಗಿರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಆರೋಪಿಗಳು 2002ರಲ್ಲಿ ವಡೋದರದ ಬೆಸ್ಟ್ ಬೇಕರಿ ಮೇಲೆ ದಾಳಿ ನಡೆಸಿ 14 ಜನರನ್ನು ಕೊಂದ ಗುಂಪೊಂದರ ಭಾಗವಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಸಹ-ಆರೋಪಿಗಳ ವಿಚಾರಣೆಯು 2006 ರಲ್ಲಿ ಕೊನೆಗೊಂಡಿದ್ದು ಅವರ ಮೇಲ್ಮನವಿಯನ್ನು 2012 ರಲ್ಲಿ ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸಿತ್ತು.

ತೀಸ್ತಾ ಅವರ ಬಂಧನ ತಮಗೆ ಸ್ವಲ್ಪ ಸಮಾಧಾನ ತಂದಿದೆ, ಈಗ ನ್ಯಾಯ ಸಿಗುತ್ತದೆ. ಜಾಕಿಯಾ ಎಹ್ಸಾನ್‌ ಜಾಫ್ರಿ ಅವರ ಪ್ರಕರಣಕ್ಕೆ ಮಾತ್ರ ತೀಸ್ತಾ ವಿರುದ್ಧದ ಗುಜರಾತ್‌‌ ಪೊಲೀಸರ ತನಿಖೆ ಸೀಮಿತವಾಗಬಾರದು. ಆಕೆ ಮತ್ತು ಆಕೆಯ ಸಹವರ್ತಿಗಳು ಪಾಲ್ಗೊಂಡಿರುವ ಎಲ್ಲಾ ಪ್ರಕರಣಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವ ಅಗತ್ಯವಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಕಳೆದ ಒಂದು ದಶಕದಿಂದ ತಮ್ಮನ್ನು ಜೈಲಿನಲ್ಲಿರಿಸಿ ವಿಚಾರಣೆಯನ್ನು ವಿಳಂಬಗೊಳಿಸುತ್ತಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.