Kerala High Court with Justice Hema Committee Report 
ಸುದ್ದಿಗಳು

ಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಸ್ಥಿತಿಗತಿ: ಕೇರಳ ಹೈಕೋರ್ಟ್ ಅರ್ಜಿ ವಜಾಗೊಳಿಸಿದ ಬೆನ್ನಿಗೇ ವರದಿ ಬಿಡುಗಡೆ

ತಮ್ಮ ಖಾಸಗಿತನಕ್ಕೆ ಧಕ್ಕೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದ ನಟಿ ರಂಜಿನಿ ಅವರ ಮನವಿಯನ್ನು ನ್ಯಾಯಾಲಯ ಇಂದು ವಜಾಗೊಳಿಸಿತು.

Bar & Bench

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಸ್ಥಿತಿಗತಿ ಕುರಿತು ನ್ಯಾಯಮೂರ್ತಿ ಹೇಮಾ ನೇತೃತ್ವದ ಸಮಿತಿ ನೀಡಿದ್ದ ವರದಿ ಬಿಡುಗಡೆಗೆ ತಡೆ ಕೋರಿ ನಟಿ ರಂಜನಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾಗೊಳಿಸಿದ ಬೆನ್ನಿಗೇ ಕೆಲ ಹೊತ್ತಿನಲ್ಲಿಯೇ ಅದರ ಪ್ರತಿಗಳನ್ನು ವಿವಿಧ ಪತ್ರಕರ್ತರಿಗೆ ಬಿಡುಗಡೆ ಮಾಡಲಾಗಿದೆ.   

ಸಿನಿಮಾ ಕ್ಷೇತ್ರದಲ್ಲಿ ಲೈಂಗಿಕ ಬೇಡಿಕೆ ಈಡೇರಿಸುವುದಕ್ಕಾಗಿ ಮಹಿಳೆಯರಿಗೆ ʼರಾಜಿʼ ಮತ್ತು ʼಹೊಂದಾಣಿಕೆʼ ಮಾಡಲು ಹೇಳಲಾಗುತ್ತದೆ ಎಂದು ವರದಿ ತಿಳಿಸಿದೆ.

ನಟಿ ಮೇಲ್ಮನವಿ ಬದಲಿಗೆ ರಿಟ್ ಅರ್ಜಿ ಸಲ್ಲಿಸಬೇಕು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್  ಮತ್ತು ನ್ಯಾ. ಎಸ್ ಮನು ಅವರಿದ್ದ ಪೀಠ ಮೇಲ್ಮನವಿ ವಜಾ ವೇಳೆ ಹೇಳಿತು.

ಏಕಸದಸ್ಯ ಪೀಠ ಆದೇಶ ಜಾರಿಗೊಳಿಸಿದ ಪ್ರಕರಣದಲ್ಲಿ ನಟಿ ಕಕ್ಷಿದಾರರಲ್ಲವಾದ್ದರಿಂದ ಆ ಆದೇಶದ ವಿರುದ್ಧ ನಟಿ ಸಲ್ಲಿಸಿರುವ ಮೇಲ್ಮನವಿ ನಿಲ್ಲುವುದಿಲ್ಲ. ಏಕಸದಸ್ಯ ಪೀಠದ ಆದೇಶ ವ್ಯಕ್ತಿಗತವಾಗಿದ್ದು ಎಲ್ಲರಿಗೂ ಅನ್ವಯವಾಗುವುದಿಲ್ಲ ಎಂದಿತು.

ಅದರಂತೆ ಮಧ್ಯಾಹ್ನದ ಹೊತ್ತಿಗೆ  ರಂಜಿನಿ ಪರ ವಕೀಲರು ರಿಟ್‌ ಅರ್ಜಿ ಸಲ್ಲಿಸಿದರಾದರೂ ರಿಟ್‌ ಅರ್ಜಿಯನ್ನು ಇನ್ನೂ ಪರಿಗಣಿಸದೆ ಇರುವುದರಿಂದ ಪ್ರಕರಣ ಆಲಿಸಲಾಗದು ಎಂದು ಏಕಸದಸ್ಯ ಪೀಠ ನುಡಿಯಿತು. ಸ್ವಲ್ಪ ಸಮಯದ ಬಳಿಕ ರಿಟ್‌ ಅರ್ಜಿ ವಿಚಾರಣೆಗೆ ಪಟ್ಟಿಯಾಗಿ ಏಕಸದಸ್ಯ ಪೀಠ ಆಲಿಸಲು ಮುಂದಾಯಿತು. ಆದರೆ ವರದಿ ಬಿಡುಗಡೆಯಾಗಿದೆ ಎಂದು ಅರಿತ ನ್ಯಾಯಾಲಯ ನಂತರ ಪ್ರಕರಣವನ್ನು ಆಗಸ್ಟ್ 27ಕ್ಕೆ ಮುಂದೂಡಿತು.

ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಲು 'ವಿಮೆನ್ ಇನ್ ಸಿನಿಮಾ ಕಲೆಕ್ಟಿವ್' ಸಂಸ್ಥೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ 2017ರಲ್ಲಿ ಕೇರಳ ಸರ್ಕಾರ ನ್ಯಾಯಮೂರ್ತಿ ಕೆ ಹೇಮಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ಅಧ್ಯಯನದ ಭಾಗವಾಗಿ ಸಮಿತಿಗೆ ಹೇಳಿಕೆ ನೀಡಿದವರಲ್ಲಿ ನಟಿ ರಂಜಿನಿಯೂ ಒಬ್ಬರು. ಸಮಿತಿಯು ತನ್ನ ವರದಿಯನ್ನು 2019ರಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ವೈಯಕ್ತಿಕ ಮಾಹಿತಿಯನ್ನು ತಿದ್ದುಪಡಿ ಮಾಡಿದ ನಂತರ ವರದಿಯ ಕೆಲ ಭಾಗಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ರಾಜ್ಯ ಮಾಹಿತಿ ಆಯೋಗ ಅವಕಾಶ ಮಾಡಿಕೊಟ್ಟಿತ್ತು.

ಈ ಕ್ರಮವನ್ನು ಚಲನಚಿತ್ರ ನಿರ್ಮಾಪಕ ಸಜಿಮೋನ್ ಪರಾಯಿಲ್ ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ, ಆಗಸ್ಟ್ 13ರಂದು ನ್ಯಾಯಮೂರ್ತಿ ವಿ ಜಿ ಅರುಣ್ (ಹೈಕೋರ್ಟ್‌ ಏಕಸದಸ್ಯ ಪೀಠದ ನ್ಯಾಯಮೂರ್ತಿ) ಅರ್ಜಿಯನ್ನು ವಜಾಗೊಳಿಸಿದ್ದರು.

ಏಕಸದಸ್ಯ ಪೀಠ ಆದೇಶವನ್ನು ರಂಜಿನಿ ಪ್ರಶ್ನಿಸಿದ್ದರು. ವರದಿಯ ಸೂಕ್ಷ್ಮ ಭಾಗಗಳನ್ನು ಸರಿಪಡಿಸುವ ಕಾರ್ಯವನ್ನು ಕೇವಲ ಮಾಹಿತಿ ಅಧಿಕಾರಿಯ ವಿವೇಚನೆಗೆ ಬಿಟ್ಟ ಕಾರಣ ವರದಿ ಬಿಡುಗಡೆಯಾದರೆ ಅದು ತನ್ನ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಬಹುದು ಎಂದು ಆಕೆ ಕಳವಳ ವ್ಯಕ್ತಪಡಿಸಿದ್ದರು.

ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುವುದು ಎಂಬ ಭರವಸೆ ನೀಡಿದ್ದರಿಂದ ತಾನು ಹೇಳಿಕೆ ನೀಡಿದ್ದೆ. ವರದಿ ಬಿಡುಗಡೆಗೂ ಮುನ್ನ ತನಗೆ ಸೂಚನೆ ನೀಡಲಾಗುವುದು ಮತ್ತು ತನ್ನ ವಾದ ಆಲಿಸಲಾಗುವುದು ಎಂಬ ಕಾನೂನು ಬದ್ಧ ನಿರೀಕ್ಷೆ ತನಗಿತ್ತು ಎಂದು ಅವರು ಹೇಳಿದ್ದರು.

ಆದರೆ, ಮೇಲ್ಮನವಿಯ ರೂಪದಲ್ಲಿದ್ದ ಕಾರಣ ಸವಾಲನ್ನು ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ವರದಿ ಬಿಡುಗಡೆಯಾಯಿತು.