Karnataka HC and MLA R Roshan Baig
Karnataka HC and MLA R Roshan Baig 
ಸುದ್ದಿಗಳು

ಐಎಂಎ ಹಗರಣ: ಶಾಸಕ ರೋಶನ್‌ ಬೇಗ್‌ ಮನೆ ಮೇಲೆ ದಾಳಿ-ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ಇಡಿಗೆ ಹೈಕೋರ್ಟ್‌ ನಿರ್ದೇಶನ

Siddesh M S

ಐಎಂಎ ಕಂಪೆನಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಾಜಿನಗರದ ಶಾಸಕ ಆರ್‌ ರೋಶನ್‌ ಬೇಗ್‌ ಅವರ ವಿರುದ್ದ ಕಾನೂನುಬಾಹಿರ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಕೈಗೊಂಡಿರುವ ಕ್ರಮದ ಕುರಿತು ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಗುರುವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ. ಜಾರಿ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸುವ ವಿಚಾರವನ್ನು ನ್ಯಾಯಿಕ ರಿಜಿಸ್ಟ್ರಾರ್‌ ಅವರು ತಿಳಿಸಬೇಕು ಎಂದು ಪೀಠ ಹೇಳಿದೆ.

ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠವು ನಡೆಸಿತು. ಪಿಎಂಎಲ್ಎ ಕಾಯಿದೆ ಅಡಿ ಜಾರಿ ನಿರ್ದೇಶನಾಲಯ ಕೈಗೊಂಡ ಕ್ರಮವು ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ರಕ್ಷಣಾ ಕಾಯಿದೆ (ಕೆಪಿಐಡಿಎ) ಅಡಿ ನೇಮಿಸಲಾಗಿರುವ ಸಕ್ಷಮ ಪ್ರಾಧಿಕಾರ ಕೈಗೊಂಡ ಕ್ರಮದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

ಅರ್ಜಿದಾರರ ಪರ ವಕೀಲ ಜಿ ಆರ್‌ ಮೋಹನ್‌ ಅವರು “ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಐಡಿ ಕಾಯಿದೆ ಅಡಿ ಬೇಗ್‌ ಅವರ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಮಧ್ಯೆ, ರೋಶನ್‌ ಬೇಗ್‌ ನಿವಾಸದ ಮೇಲೆ ಈಚೆಗೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಈ ಕುರಿತು ವರದಿ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಆದೇಶಿಸಬೇಕು” ಎಂದರು.

ಆಗ ಪೀಠವು “ಪಿಎಂಎಲ್‌ಎ ಅಡಿ ಜಾರಿ ನಿರ್ದೇಶನಾಲಯದ ಕ್ರಮದಲ್ಲಿ ಮಧ್ಯಪ್ರವೇಶಿಸಲಾಗದು. ಜಾರಿ ನಿರ್ದೇಶನಾಲಯ, ಸಕ್ಷಮ ಪ್ರಾಧಿಕಾರ ಸೇರಿದಂತೆ ಭಿನ್ನ ತನಿಖಾ ಸಂಸ್ಥೆಗಳು ತನಿಖೆಗೆ ಸಂಬಂಧಿಸಿದಂತೆ ಸಮನ್ವಯ ಸಾಧಿಸಬೇಕು ಎಂದು 2019ರಲ್ಲಿ ನಿರ್ದೇಶಿಸಿದ್ದು, ಪ್ರಕರಣದಲ್ಲಿ ಇಲ್ಲಿಯವರೆಗೆ ನಡೆಸಿರುವ ದಾಳಿಯ ಕುರಿತು ಜಾರಿ ನಿರ್ದೇಶನಾಲಯ ವರದಿ ಸಲ್ಲಿಸಬೇಕು” ಎಂದಿತು.

ವಶಕ್ಕೆ ಪಡೆಯಲಾದ ಆಸ್ತಿಗಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶಕ್ಕಾಗಿ ಸಕ್ಷಮ ಪ್ರಾಧಿಕಾರವು ಅರ್ಜಿ ಸಲ್ಲಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಆಗ ಪೀಠವು “ಕೆಪಿಐಡಿ ಕಾಯಿದೆ ಪ್ರಕಾರ ಅರ್ಜಿ ವಿಲೇವಾರಿ ಮಾಡಲು ಆದ್ಯತೆ ನೀಡುವಂತೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಆದೇಶಿಸಿದ್ದು, ಆಸ್ತಿಗಳ ಸಂಬಂಧ ನಿರ್ಧಾರ ಕೈಗೊಂಡರೆ ಅವುಗಳನ್ನು ಮಾರಾಟ ಮಾಡಿ ಐಎಂಎದಲ್ಲಿ ಹೂಡಿಕೆ ಮಾಡಿರುವವರಿಗೆ ಹಣ ಮರಳಿಸಬಹುದು. ಇದಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಬಹುಮುಖ್ಯವಾಗುತ್ತದೆ. ಈ ಸಂಬಂಧ ರಿಜಿಸ್ಟ್ರಾರ್‌ ಜನರಲ್‌ ಒಂದು ತಿಂಗಳ ಒಳಗೆ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಸಕ್ಷಮ ಪ್ರಾಧಿಕಾರವು ಕೆಪಿಐಡಿ ಕಾಯಿದೆ ಅಡಿ ವಕೀಲರನ್ನು ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇದಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರದ ಸೂಚನೆಯ ಅನುಸಾರ ಸಕ್ಷಮ ಪ್ರಾಧಿಕಾರ ನಡೆದುಕೊಂಡರೆ ಕಾನೂನಿನ ಆಶಯವೇ ವಿಫಲವಾಗುತ್ತದೆ ಎಂದು ಪೀಠ ಹೇಳಿತು.

ಇದರ ಜೊತೆಗೆ ರಾಜಕಾರಣಿಯ ಆಸ್ತಿಗಳನ್ನು ವಶಕ್ಕೆ ಪಡೆದು ಅದನ್ನು ಮಾರಾಟ ಮಾಡುವ ಮೂಲಕ ಸಾಮಾನ್ಯ ಜನರ ಹಣ ವಾಪಸ್‌ ಮಾಡುವ ವಿಚಾರದಲ್ಲಿ ಸಕ್ಷಮ ಪ್ರಾಧಿಕಾರದ ನಿಲುವಿಗೆ ವಿರುದ್ಧವಾದ ನಿಲುವು ಕೈಗೊಳ್ಳುವ ಮೂಲಕ ದ್ವಂದ್ವ ನಿಲುವನ್ನು ರಾಜ್ಯ ಸರ್ಕಾರ ತಳೆದಿದೆ ಎಂದು ಪೀಠ ಹೇಳಿದೆ.

ಇನ್ನು ಸಕ್ಷಮ ಪ್ರಾಧಿಕಾರದಲ್ಲಿ ಖಾಲಿ ಇರುವ ಎರಡು ಹುದ್ದೆಗಳಿಗೆ ಇಬ್ಬರು ಕೆಎಎಸ್‌ ಅಧಿಕಾರಿಗಳನ್ನು ಒಂದು ತಿಂಗಳಲ್ಲಿ ನೇಮಿಸಬೇಕು ಎಂದು ಪೀಠ ಹೇಳಿತು. ಆಗ, ಸರ್ಕಾರವು ಒಬ್ಬರು ಅಧಿಕಾರಿಯನ್ನು ಅಲ್ಲಿಗೆ ವರ್ಗಾಯಿಸಲಾಗಿದೆ. ಆದರೆ, ಅವರು ಅಲ್ಲಿಗೆ ವರದಿ ಮಾಡಿಕೊಳ್ಳುತ್ತಿಲ್ಲ ಎಂದಿತು. ಆಗ ಪೀಠವು “ಅಧಿಕಾರಿಯು ರಾಜ್ಯ ಸರ್ಕಾರ ಸೂಚಿಸಿದ ಸ್ಥಳಕ್ಕೆ ವರದಿ ಮಾಡಿಕೊಳ್ಳದಿದ್ದರೆ ಕ್ರಮಕೈಗೊಳ್ಳುವ ಅಧಿಕಾರವನ್ನು ಸರ್ಕಾರ ಹೊಂದಿದೆ. ಅಸಹಾಯಕತೆ ವ್ಯಕ್ತಪಡಿಸುವ ಅಗತ್ಯವಿಲ್ಲ” ಎಂದು ಹೇಳಿದ ಪೀಠವು ಸೆಪ್ಟೆಂಬರ್‌ ೧೬ಕ್ಕೆ ವಿಚಾರಣೆ ಮುಂದೂಡಿದೆ.