ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ನಡೆದಿದ್ದ 'ಭಾರತ್ ಜೋಡೋ' ರ್ಯಾಲಿ ವೇಳೆ ಹಿಂದೂ ಮಹಾಸಭಾ ಮುಖಂಡ ವಿ ಡಿ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಉತ್ತರ ಪ್ರದೇಶದ ಲಖನೌ ನ್ಯಾಯಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ.
ಸಾವರ್ಕರ್ ಅವರು ಬ್ರಿಟಿಷರ ಪಿಂಚಣಿ ಪಡೆಯುತ್ತಿದ್ದ ಅವರ ಸೇವಕ ಎಂದು ಆರೋಪಿಸಿ ರಾಹುಲ್ ಅವರು ಮಾಡಿದ ಭಾಷಣ ಮತ್ತು ಕರಪತ್ರಗಳು ಸಮಾಜದಲ್ಲಿ ದ್ವೇಷ ಹರಡುತ್ತವೆ ಎಂದು ಹೆಚ್ಚುವರಿ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಲೋಕ್ ವರ್ಮಾ ಅವಲೋಕಿಸಿದರು.
ರಾಹುಲ್ ಅವರ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ರಾಹುಲ್ ಅವರಿಗೆ ಸಮನ್ಸ್ ನೀಡಿದ ಅದು ಜನವರಿ 10, 2025ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿತು.
ಐಪಿಸಿ ಸೆಕ್ಷನ್ 153 ಎ (ಹಗೆತನಕ್ಕೆ ಕುಮ್ಮಕ್ಕು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ರಾಹುಲ್ ವಿರುದ್ಧ ಆರೋಪ ಮಾಡಲಾಗಿತ್ತು. ವಕೀಲ ನೃಪೇಂದ್ರ ಪಾಂಡೆ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಪಾಂಡೆ ಅವರು ಈ ಮೊದಲು ಎಸಿಜೆಎಂ ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧ ಎಫ್ಐಆರ್ ದಾಖಲಿಸಲು ಕೋರಿದ್ದರು. ಆದರೆ, ನ್ಯಾಯಾಲಯ ಅದನ್ನು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಪಾಂಡೆ ಸತ್ರ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಮಹಾತ್ಮ ಗಾಂಧೀಜಿಯವರೇ ಸಾವರ್ಕರ್ ಅವರನ್ನು ದೇಶಭಕ್ತ ಎಂದು ಗುರುತಿಸಿದ್ದರು ಎಂದು ತಮ್ಮ ಅರ್ಜಿಯಲ್ಲಿ ಪಾಂಡೆ ಪ್ರತಿಪಾದಿಸಿದ್ದರು. ಆದರೆ ರಾಹುಲ್ ಹೇಳಿಕೆಗಳು ಅಭಿಪ್ರಾಯ ಭೇದ ಮತ್ತು ದ್ವೇಷವನ್ನು ಉಂಟು ಮಾಡಿದ್ದು ಇದರಿಂದ ತಮಗೆ ಗಣನೀಯವಾಗಿ ಮಾನಸಿಕ ಮತ್ತು ದೈಹಿಕ ವೇದನೆ ಉಂಟಾಗಿದೆ ಎಂದು ಪಾಂಡೆ ವಾದಿಸಿದ್ದರು.
ಜೂನ್ 2023 ರಲ್ಲಿ, ಎಸಿಜೆಎಂ ಅಂಬರೀಶ್ ಕುಮಾರ್ ಶ್ರೀವಾಸ್ತವ ಅವರು ಪಾಂಡೆ ಅವರ ದೂರನ್ನು ವಜಾಗೊಳಿಸಿದ್ದರು, ಹೀಗಾಗಿ ಪಾಂಡೆ ಸತ್ರ ನ್ಯಾಯಾಲಯದ ಮೊರೆ ಹೋಗಿದ್ದರು. ಮನವಿ ಪುರಸ್ಕರಿಸಿದ್ದ ಸತ್ರ ನ್ಯಾಯಾಲಯ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮರಳಿಸಿತ್ತು. ಇದೀಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರಾಹುಲ್ ಅವರಿಗೆ ಸಮನ್ಸ್ ನೀಡಿದೆ.