CM Bommai with the Office bearers Of Mangalore Bar Association
CM Bommai with the Office bearers Of Mangalore Bar Association 
ಸುದ್ದಿಗಳು

ಪೊಲೀಸರ ದೌರ್ಜನ್ಯ ಪ್ರಕರಣ: ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಮಂಗಳೂರು ವಕೀಲರ ಸಂಘ

Bar & Bench

ಮಂಗಳೂರಿನ ವಕೀಲ ಕುಲದೀಪ್‌ ಶೆಟ್ಟಿ ಅವರ ಮೇಲೆ ಬಂಟ್ವಾಳದ ಪುಂಜಾಲಕಟ್ಟೆ ಠಾಣೆ ಪೊಲೀಸರು ನಡೆಸಿದ ದೌರ್ಜನ್ಯ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ವಕೀಲರ ಸಂಘ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶನಿವಾರ ಭೇಟಿ ಮಾಡಿದ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ ಪೃಥ್ವಿರಾಜ್‌ ರೈ ಮತ್ತಿತರ ಪದಾಧಿಕಾರಿಗಳು “ಪೊಲೀಸ್‌ ಅಧಿಕಾರಿ ಸುತೇಶ್‌ ಅವರನ್ನು ವರ್ಗ ಮಾಡಿರುವುದನ್ನು ಹೊರತುಪಡಿಸಿದರೆ ಪೊಲೀಸ್‌ ಅಧಿಕಾರಿಗಳ ಗೃಹ ಇಲಾಖೆ ವಿರುದ್ಧ ಕ್ರಮ ಕೈಗೊಂಡಿಲ್ಲ” ಎಂದು ತಿಳಿಸಿದ್ದಾರೆ.

ಕೃತ್ಯದಲ್ಲಿ ಭಾಗಿಯಾದ ಪುಂಜಾಲಕಟ್ಟೆ ಠಾಣೆಯ ಪೊಲೀಸರನ್ನು ಅಮಾನತು ಮಾಡಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಸೂಚಿಸಿರುವಂತೆ ಕ್ರಮ ಕೈಗೊಳ್ಳಬೇಕು. ನ್ಯಾಯಿಕ ಹಿತಾಸಕ್ತಿಯ ಕಾರಣಕ್ಕೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಸಿವಿಲ್‌ ವ್ಯಾಜ್ಯವೊಂದರಲ್ಲಿ ಪ್ರತಿವಾದಿ ವಿರುದ್ಧ ಪ್ರತಿಬಂಧಕಾಜ್ಞೆ ಇದ್ದರೂ ಯುವ ವಕೀಲ ಕುಲದೀಪ್‌ ಶೆಟ್ಟಿ ಅವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದಿರುವ ವಕೀಲರ ಸಂಘ ರಾತ್ರಿ ಹೊತ್ತಿನಲ್ಲಿ ವಕೀಲರ ಮನೆಗೆ ನುಗ್ಗಿ ಅವರನ್ನು ಎಳೆದುಕೊಂಡು ಹೋಗುವ ಮೂಲಕ ಪೊಲೀಸರು ದೌರ್ಜನ್ಯ ನಡೆಸಿರುವುದನ್ನು ಖಂಡಿಸಿದೆ.

ಘಟನೆ ವಿರೋಧಿಸಿ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದು ದೌರ್ಜನ್ಯದ ಹಿನ್ನೆಲೆಯಲ್ಲಿ ಪ್ರಸಕ್ತ ಅಧಿವೇಶನದಲ್ಲಿಯೇ ವಕೀಲರ ಸುರಕ್ಷತಾ ಕಾಯಿದೆ ಜಾರಿಗೆ ತರಬೇಕೆಂಬ ಕೂಗು ಕೇಳಿಬಂದಿದೆ.