ದಿವಂಗತ ಉದ್ಯಮಿ ಸಂಜಯ್ ಕಪೂರ್ ಅವರ ಆಸ್ತಿ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಅವಕಾಶ ನೀಡುವಂತೆ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಆದರೆ ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ , ಹಾಗೆ ಆದೇಶ ನೀಡಿದರೆ ಸಮಸ್ಯೆ ಎದುರಾಗಬಹುದು ಎಂದರು.
ಆಸ್ತಿ ಫಲಾನುಭವಿಗಳು ಎಂದು ಹೇಳಿಕೊಳ್ಳುತ್ತಿರುವವರು (ಸಂಜಯ್ ಅವರ ವಿಚ್ಛೇದಿತ ಪತ್ನಿ, ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಕ್ಕಳು) ಬಹಿರಂಗಪಡಿಸಿದ ಆಸ್ತಿ ಪ್ರಶ್ನಿಸುವ ಹಕ್ಕು ಹೊಂದಿದ್ದಾರೆ ಎಂಬ ಸರಳ ಕಾರಣಕ್ಕಾಗಿ ಇದು ಸಮಸ್ಯಾತ್ಮಕವಾಗಬಹುದು. ಹಾಗಿರುವಾಗ ನಾಳೆ ಅವರೇನಾದರೂ ಪರಿಶೀಲಿಸಿ ಏನಾಗಿದೆ ಎಂದು ಕೇಳಲು ಮುಂದಾದರೆ, ಆಗ ಅವರು ಈ ಗೌಪ್ಯತೆಗೆ ಒಳಪಟ್ಟು ಹೇಗೆ ತಾನೆ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಸಾಧ್ಯ?" ಎಂದು ನ್ಯಾಯಾಲಯ ಪ್ರಶ್ನಿಸಿತು.
ಈ ಆಸ್ತಿ ಮೊಕದ್ದಮೆ ಯಾಕಿಷ್ಟು ಮುಖ್ಯ, ಇದು ಬೇರೆ ಪ್ರಕರಣಗಳಿಗಿಂತ ಹೇಗೆ ಭಿನ್ನ ಎಂತಲೂ ನ್ಯಾ. ಸಿಂಗ್ ಪ್ರಶ್ನಿಸಿದರು.
ಪ್ರಿಯಾ ಕಪೂರ್ ಪರ ವಾದ ಮಂಡಿಸಿದ ಹಿರಿಯ ವಕೀಲೆ ಶೆಯ್ಲ್ ತ್ರೆಹಾನ್, ಆಸ್ತಿ ವಿವರಗಳಿಗೆ ಸಂಬಂಧಿಸಿದಂತೆ ಸೂಕ್ಷ್ಮ ಮಾಹಿತಿ ಇದ್ದು, ಅವುಗಳನ್ನು ಮುಚ್ಚಿದ ಲಕೋಟೆಯಲ್ಲಿಯೇ ಸಲ್ಲಿಸುವಂತೆ ಪ್ರಿಯಾ ಕೇಳುತ್ತಿದ್ದಾರೆ. ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗುವ ಆತಂಕ ಅವರಿಗೆ ಇದೆ. ಈ ಪ್ರಕರಣದಲ್ಲಿ ಹಾಜರಾಗುತ್ತಿರುವ ವಕೀಲರು ಮಾಧ್ಯಮಗಳಲ್ಲಿ ಪ್ರಕರಣದ ಕುರಿತು ಪ್ರಚಾರ ಮಾಡುತ್ತಿದ್ದಾರೆ ಎಂದು ವಾದಿಸಿದರು.
ಆದರೆ ಇಂತಹ ಕೋರಿಕೆ ಬೆಂಬಲಿಸುವ ಯಾವುದೇ ತೀರ್ಪು ಇದೆಯೇ ಎಂದು ನ್ಯಾಯಾಲಯ ಶೆಯ್ಲ್ ಅವರನ್ನು ಪ್ರಶ್ನಿಸಿತು. ಇದಕ್ಕೆ ಅವರು ನಾಳೆ (ಸೆಪ್ಟೆಂಬರ್ 26) ಹೊತ್ತಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
ತಮ್ಮ ಮಲತಾಯಿ ಹಾಗೂ ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್ ಅವರು, ಸಂಜಯ್ ಅವರ ಉಯಿಲು ಫೋರ್ಜರಿ ಮಾಡಿ ಆಸ್ತಿಗಳನ್ನುಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕರಿಷ್ಮಾ ಕಪೂರ್ ಅವರ ಪುತ್ರ ಹಾಗೂ ಪುತ್ರಿ ಆರೋಪಿಸಿದ್ದಾರೆ.