Punjab and Haryana High Court, Nuh violence
Punjab and Haryana High Court, Nuh violence 
ಸುದ್ದಿಗಳು

'ನೂಹ್ ಕಟ್ಟಡ ನೆಲಸಮ ಕಾರ್ಯಾಚರಣೆ ಮೂಲಕ ಜನಾಂಗೀಯ ನಿರ್ಮೂಲನೆಗೆ ಸರ್ಕಾರ ಮುಂದಾಗಿದೆಯೇ?' ಪಂಜಾಬ್ ಹೈಕೋರ್ಟ್ ಕಿಡಿ

Bar & Bench

ಹರಿಯಾಣದ ನೂಹ್‌ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನೂಹ್‌ ಮತ್ತು ಗುರುಗ್ರಾಮದಲ್ಲಿ ಸೂಕ್ತ ಆದೇಶ ಮತ್ತು ನೋಟಿಸ್‌ಗಳನ್ನು ನೀಡದೆ ಕಟ್ಟಡ ನೆಲಸಮ ಮಾಡಲಾಗುತ್ತಿದೆ ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಸೋಮವಾರ ಕಿಡಿಕಾರಿದೆ [ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ಮೂಲಕ ನ್ಯಾಯಾಲಯ ಮತ್ತು ಹರಿಯಾಣ ಸರ್ಕಾರ ನಡುವಣ ಪ್ರಕರಣ].

ನಿರ್ದಿಷ್ಟ ಸಮುದಾಯದ ಒಡೆತನದ ಕಟ್ಟಡಗಳನ್ನು ಕೆಡವಲಾಗುತ್ತಿದೆಯೇ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಜಿ ಎಸ್ ಸಂಧವಾಲಿಯಾ ಮತ್ತು ಹರ್‌ಪ್ರೀತ್ ಕೌರ್ ಜೀವನ್ ಅವರಿದ್ದ ಪೀಠ ಇದು ಸರ್ಕಾರ ಜನಾಂಗೀಯ ನಿರ್ಮೂಲನೆ ಯತ್ನವನ್ನು ಸೂಚಿಸುತ್ತದೆ ಎಂದಿತು.

“ಆದೇಶ ಮತ್ತು ನೋಟಿಸ್‌ ಇಲ್ಲದೆ, ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಪರಿಹರಿಸಲು ಕಾನೂನಿನ ಮೂಲಕ ಸ್ಥಾಪಿತವಾದ ಕಾರ್ಯವಿಧಾನ ಪಾಲಿಸದೆ ಕಟ್ಟಡ ಉರುಳಿಸುವ ತಂತ್ರ ಅನುಸರಿಸಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಇದೆ ಎಂಬ ನೆಪದಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಕಟ್ಟಡಗಳನ್ನು ಕೆಡವಲಾಗುತ್ತಿದೆಯೇ ಎಂಬ ಸಮಸ್ಯೆಯೂ ಉದ್ಭವಿಸಿದೆ. ಜನಾಂಗೀಯ ನಿರ್ಮೂಲನೆಯ ಕೆಲಸದಲ್ಲಿ ಸರ್ಕಾರ ತೊಡಗಿದಂತೆ ತೋರುತ್ತಿದೆ” ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.

ಈಚೆಗೆ ನಡೆದಿದ್ದ ಹರಿಯಾಣದ ನೂಹ್‌ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಸೋಮವಾರ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಆರೋಪಿಗಳ ಕಟ್ಟಡ ನೆಲಸಮ ಕಾರ್ಯಾಚರಣೆಗೆ ತಡೆ ನೀಡುವ ವೇಳೆ ಈ ಅಭಿಪ್ರಾಯ ತಿಳಿಸಿದೆ.

ಆಸ್ಪತ್ರೆಯ ಅಕ್ಕಪಕ್ಕದ ಕಟ್ಟಡಗಳು ವಾಣಿಜ್ಯ ಕಟ್ಟಡಗಳು, ವಸತಿ ಕಟ್ಟಡಗಳು, ರೆಸ್ಟೋರೆಂಟ್‌ಗಳ ರೂಪದಲ್ಲಿ ದೀರ್ಘಕಾಲ ಅಸ್ತಿತ್ವದಲ್ಲಿದ್ದವುಗಳನ್ನು ಬುಲ್ಡೋಜರ್‌ಗಳ ಮೂಲಕ ನೆಲಸಮ ಮಾಡಲಾಗಿದೆ ಎಂದು ಸುದ್ದಿಗಳನ್ನು ಗಮನಿಸಿದ ನ್ಯಾಯಾಲಯ “ಸರ್ಕಾರ ಕೋಮು ಹಿಂಸಾಚಾರದ ತನಿಖೆ ನಡೆಸುತ್ತಿದ್ದು ಬುಲ್ಡೋಜರ್ ಚಿಕಿತ್ಸೆ ಇದರ ಭಾಗವಾಗಿದೆ ಎಂದು ಸ್ವತಃ ಗೃಹ ಸಚಿವರು ಹೇಳಿದ್ದಾರೆ... ಲಾರ್ಡ್ ಆಕ್ಟನ್ ಅವರು "ಅಧಿಕಾರವು ಭ್ರಷ್ಟತೆಗೆ ದಾರಿ ಮಾಡುತ್ತದೆ ಮತ್ತು ನಿರಂಕುಶ ಅಧಿಕಾರವು ಸಂಪೂರ್ಣ ಭ್ರಷ್ಟಗೊಳಿಸುತ್ತದೆ" ಎಂದಿದ್ದರು ಎಂದು ನ್ಯಾಯಾಲಯ ಹೇಳಿತು.

ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿರುವ ನ್ಯಾಯಾಲಯ ನೆಲಸಮ ಕಾರ್ಯಾಚರಣೆಗೆ ಯಾವುದೇ ನೋಟಿಸ್‌ ನೀಡಲಾಗಿತ್ತೆ ಎಂಬ ಕುರಿತು ಅಫಿಡವಿಟ್‌ ಸಲ್ಲಿಸುವಂತೆ ವಿವರಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 11ರಂದು ನಡೆಯಲಿದೆ.