ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಬೇಕಿದ್ದ ತಮ್ಮ ಹಿರಿಯ ವಕೀಲರು ಹೈಕೋರ್ಟ್ನಲ್ಲಿ ಬೇರೊಂದು ಪ್ರಕರಣದಲ್ಲಿ ವಾದ ನಿರತರಾಗಿದ್ದಾರೆ ಎಂದು ಕಿರಿಯ ವಕೀಲರೊಬ್ಬರು ಹೇಳಿದ್ದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಅವರನ್ನು ಕೆರಳಿಸಿತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಅಹಂ ಕೆರಳಿಸಬಾರದು ಎನ್ನುವುದಾದರೆ ಅಂತಹ ಮಾಹಿತಿಯನ್ನು ಬಿಡುಬೀಸಾಗಿ ಹೇಳವುದನ್ನು ತಪ್ಪಿಸಿ ಎಂದು ನ್ಯಾ. ಸಂಜಯ್ ಕುಮಾರ್ ಅವರು ಹಿರಿಯ ವಕೀಲರ ಸಹಾಯಕರಾದ ಕಿರಿಯ ವಕೀಲರಿಗೆ ಬುದ್ಧಿವಾದ ಹೇಳಿದರು.
"ನೀವು ಅಷ್ಟೊಂದು ಪ್ರಾಮಾಣಿಕರಾಗಿರಬಾರದು. ಭವಿಷ್ಯದಲ್ಲಿ - ನಿಮ್ಮ ಹಿರಿಯ ವಕೀಲ ಹೈಕೋರ್ಟ್ನಲ್ಲಿ ಕಾರ್ಯನಿರತರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ಗೆ ಎಂದಿಗೂ ಹೇಳಲು ಹೋಗದಿರಿ... ನಮ್ಮ ಅಹಂ ತುಂಬಾ ದುರ್ಬಲವಾಗಿರುತ್ತದೆ. ನ್ಯಾಯಮೂರ್ತಿಗಳ ಅಹಂ ಅನ್ನು ಕೆಣಕಲು ನೀವು ಹೋಗಬಾದು. ಆಗ ನಿಮ್ಮ ಪ್ರಕರಣ ಒಂದೇ ಏಟಿಗೆ ಕೊನೆಗೊಳ್ಳುತ್ತದೆ. ವಾದಾರ್ಹತೆಯ ಮೇಲಲ್ಲ. ಈ ರೀತಿಯ ವಿಚಾರಗಳನ್ನು ಹೇಳಬೇಡಿ. ಸಣ್ಣಪುಟ್ಟ ಮಹತ್ವವಲ್ಲದ ಸುಳ್ಳುಗಳನ್ನು ಅನುಮತಿಸಬಹುದು” ಎಂದು ನ್ಯಾ. ಕುಮಾರ್ ಕಿರಿಯ ನ್ಯಾಯವಾದಿಗೆ ಸಲಹೆ ನೀಡಿದರು.
ಈ ಮಾತಿಗೆ ತಲೆದೂಗಿದ ಪೀಠದಲ್ಲಿದ್ದ ಮತ್ತೊಬ್ಬ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು ನಿಮ್ಮ ಹಿರಿಯ ವಕೀಲರು ನಿಮಗೆ ಇದನ್ನೆಲ್ಲಾ ಕಲಿಸಬೇಕಿತ್ತು ಎಂದರು.
ದಿನದ ಆರಂಭದಲ್ಲಿ ಸಹಾಯಕ ವಕೀಲ ಪ್ರಕರಣವನ್ನು ಮುಂದೂಡುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ದಿನದ ಅಂತ್ಯಕ್ಕೆ ಪಟ್ಟಿ ಮಾಡಲಾಗಿತ್ತು..
ಆದರೆ ಪ್ರಕರಣ ಮತ್ತೆ ವಿಚಾರಣೆಗೆ ಬಂದಾಗ, ಈ ಪ್ರಕರಣದಲ್ಲಿ ವಾದಿಸುವ ಹಿರಿಯ ವಕೀಲ ಹೈಕೋರ್ಟ್ನಲ್ಲಿ ಕಾರ್ಯಮಗ್ನರಾಗಿದ್ದಾರೆ ಎನ್ನುವ ಮಾಹಿತಿಯನ್ನು ಕಿರಿಯ ಸಹಾಯಕ ಪೀಠಕ್ಕೆ ನೀಡಿದರು. ಇದು ಪೀಠವು ತಿಳಿಹೇಳಲು ಕಾರಣವಾಯಿತು. ಅಂತಿಮವಾಗಿ ನ್ಯಾಯಾಲಯವು ಪ್ರಕರಣವನ್ನು ಜುಲೈ 14ಕ್ಕೆ ಮುಂದೂಡಿತು.