Allahabad HC (Lucknow) and Dr MedusssaInstagram 
ಸುದ್ದಿಗಳು

ಪಹಲ್ಗಾಮ್ ದಾಳಿ ಕುರಿತ ಹೇಳಿಕೆ: ಪ್ರಾಧ್ಯಾಪಕಿ ಡಾ. ಮಾದ್ರಿಗೆ ಅಲಾಹಾಬಾದ್ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯ ಮತ್ತು ವಿದ್ಯಾರ್ಥಿ ಜತಿನ್ ಶುಕ್ಲಾ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಕಾಕೋಟಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.

Bar & Bench

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದ ಲಖನೌ ವಿಶ್ವವಿದ್ಯಾಲಯದ ಭಾಷಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮಾದ್ರಿ ಕಾಕೋಟಿ (ಡಾ. ಮೆಡೂಸಾ ಎಂದೂ ಜನಪ್ರಿಯತೆ ಗಳಿಸಿರುವ ಆನ್‌ಲೈನ್‌ ವಿಡಂಬನಕಾರ್ತಿ) ಅವರಿಗೆ ಅಲಾಹಾಬಾದ್ ಹೈಕೋರ್ಟ್ ಸೋಮವಾರ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ .

ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡಿದ್ದಾರೆ ಎಂದು ಆರೋಪಿಸಿ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕಾಕೋಟಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನ್ಯಾಯಮೂರ್ತಿ ರಾಜೀವ್ ಸಿಂಗ್ ಅವರು ಕಾಕೋಟಿಗೆ ಮಧ್ಯಂತರ ಪರಿಹಾರ ನೀಡಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)  ಸದಸ್ಯ ಮತ್ತು ವಿದ್ಯಾರ್ಥಿ ಜತಿನ್ ಶುಕ್ಲಾ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಕಾಕೋಟಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.

ಕೇಸರಿ-ಭಯೋತ್ಪಾದಕ ಮುಂತಾದ ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಪದ ಒಳಗೊಂಡಿದ್ದ ಕಾಕೋಟಿಯವರ ಪೋಸ್ಟ್‌ಗಳನ್ನು ಪಾಕಿಸ್ತಾನಿ ಮಾಧ್ಯಮಗಳು ಸಹ ಪ್ರಸಾರ ಮಾಡಿವೆ ಎಂದು ಎಫ್‌ಐಆರ್‌ನಲ್ಲಿ ವಾದಿಸಲಾಗಿತ್ತು.

ಆಕೆಯ ಪೋಸ್ಟ್‌ಗಳು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತವೆ.  ದೇಶದಲ್ಲಿ ಗಲಭೆ ಪ್ರಚೋದಿಸಲು ಅವರು ಬಯಸಿದ್ದಾರೆ ಎಂದು ದೂರಲಾಗಿತ್ತು. ಕಾಕೋಟಿ ಪರ ವಕೀಲ ಸೈಯದ್ ಮೊಹಮ್ಮದ್ ಹೈದರ್ ರಿಜ್ವಿ ವಾದ ಮಂಡಿಸಿದ್ದರು.