ಟ್ವಿಟರ್
ಟ್ವಿಟರ್ 
ಸುದ್ದಿಗಳು

ಪ್ರತ್ಯೇಕ ಖಲಿಸ್ತಾನ ಚಳವಳಿಗೆ ಉತ್ತೇಜನ: ಟ್ವಿಟರ್ ವಿರುದ್ಧ ಕ್ರಿಮಿನಲ್ ಕ್ರಮಕ್ಕಾಗಿ ದೆಹಲಿ ಹೈಕೋರ್ಟಿಗೆ ಅರ್ಜಿ

Bar & Bench

ಖಲಿಸ್ತಾನ ಚಳವಳಿಯನ್ನು ಪ್ರೋತ್ಸಾಹಿಸುವ ಪಿತೂರಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಟ್ವಿಟರ್ ಇಂಡಿಯಾ ಮತ್ತದರ ಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಈ ಸಂಬಂಧ ಸಂಗೀತಾ ಶರ್ಮ ಎಂಬುವವರು ಅರ್ಜಿ ಸಲ್ಲಿಸಿದ್ದು ಟ್ವಿಟರ್ ಇಂಡಿಯಾ ಕಮ್ಯುನಿಕೇಷನ್ಸ್ ಮತ್ತದರ ಅಧಿಕಾರಿಗಳಾದ ರಹೀಲ್ ಖುರ್ಷಿದ್ ಮತ್ತು ಮಹಿಮಾ ಕೌಲ್ ಅವರ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

‘ಖಲಿಸ್ತಾನಿ ಚಳುವಳಿ ಮತ್ತು ರಾಷ್ಟ್ರ ವಿರೋಧಿ ಕಾರ್ಯಸೂಚಿಯನ್ನು ಸಾರ್ವಜನಿಕವಾಗಿ ಹರಡಿದ ಅಪರಾಧಿ ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ’.
ಸಂಗೀತಾ ಶರ್ಮ ಸಲ್ಲಿಸಿರುವ ಅರ್ಜಿ

ಅರ್ಜಿಯಲ್ಲಿ ಮಾಡಲಾದ ಆರೋಪಗಳು

ಸಾಮಾಜಿಕ ಮಾಧ್ಯಮದಲ್ಲಿ ವಿಷಯ/ ಸುದ್ದಿಗಳನ್ನು ನಿಯಂತ್ರಿಸುವ ಯಾಂತ್ರಿಕ ವ್ಯವಸ್ಥೆ ಇಲ್ಲದಿರುವಾಗ ಟ್ವಿಟರ್ ವೇದಿಕೆ ಬಳಸಿಕೊಂಡು ಪ್ರತ್ಯೇಕತಾವಾದಿಗಳಿಗೆ ಕರೆ ನೀಡಲಾಗುತ್ತಿದೆ. ಇದು ‘ಸಮಾಜದ ಕೆಲವು ಭಾಗಗಳಲ್ಲಿ ಭೀತಿ ಸೃಷ್ಟಿಸುತ್ತಿದ್ದು ಒಕ್ಕೂಟ ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಬೆದರಿಕೆ ಒಡ್ಡುತ್ತಿದೆ.

ಟ್ವಿಟರ್ ಸರ್ವರ್ ಅನ್ನು #Khalistan ಪ್ರಚಾರಕ್ಕಾಗಿ ಬಳಸಲಾಗುತ್ತಿತ್ತು, ಅನೇಕ ಬಳಕೆದಾರರು ರಾಷ್ಟ್ರ ವಿರೋಧಿ ಚಟುವಟಿಕೆ ಉತ್ತೇಜಿಸಲು ತಮ್ಮ ಬಳಕೆದಾರರ ಹೆಸರುಗಳನ್ನು ಖಲಿಸ್ತಾನ ಅಥವಾ ಖಲಿಸ್ತಾನಕ್ಕೆ ಹೋಲುವಂತೆ ಇಟ್ಟುಕೊಂಡಿದ್ದಾರೆ.

ಹಣಕಾಸಿನ ಲಾಭ ಮತ್ತು ಪಾವತಿಸಿದ ಜಾಹೀರಾತುಗಳನ್ನು ಸ್ವೀಕರಿಸುವ ಮೂಲಕ ಟ್ವಿಟರ್ ಪ್ರತ್ಯೇಕತಾವಾದಿಗಳ ಕೃತ್ಯವನ್ನು ‘ಬೆಂಬಲಿಸಿದೆ’.

ಟ್ವಿಟರ್ ಜಾಲತಾಣದ ‘ರಾಷ್ಟ್ರ ವಿರೋಧಿ ಕೃತ್ಯಗಳ ವಿರುದ್ಧ ಸಂಸದ ಅನಂತ ಕುಮಾರ್ ಹೆಗ್ಡೆ ಧ್ವನಿ ಎತ್ತಿದ್ದರೂ, ಟ್ವಿಟರ್ ಯಾವುದೇ ‘ಗಂಭೀರ ಕ್ರಮ’ ಕೈಗೊಂಡಿಲ್ಲ.

ಟ್ವಿಟರ್ ಇಂಡಿಯಾದ ನಿರ್ವಹಣೆ ತಟಸ್ಥವಾಗಿಲ್ಲ ಮತ್ತು ಅದು ಲಜ್ಜೆರಹಿತವಾಗಿ ಹಾಗೂ ಸ್ಪಷ್ಟವಾಗಿ ಪ್ರಸ್ತುತ ಸರ್ಕಾರದ ವಿರುದ್ಧ ಇದೆ.

ಇದನ್ನು ಗಮನಿಸಿ ಖಲಿಸ್ತಾನ ಪರ ಸಂದೇಶಗಳನ್ನು ಟ್ವಿಟರ್‌ನಲ್ಲಿ ಪ್ರಚಾರ ಮಾಡುತ್ತಿರುವವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಬೇಕು.

ಸಾಮಾಜಿಕ ಮಾಧ್ಯಮದ ವಿಷಯ ಮತ್ತು ಜಾಹೀರಾತನ್ನು ಪರಿಶೀಲಿಸಲು ಮತ್ತು ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.

‘ಟ್ವಿಟ್ಟರ್ ವೇದಿಕೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಮೇಲೆ ನಡೆಸಲಾದ ಲಜ್ಜೆಗೆಟ್ಟ ದಾಳಿಯಿಂದಾಗಿ ಒಟ್ಟಾರೆ ಪ್ರಜೆಗಳಿಗೆ ಹಾನಿಯಾಗಲಿದೆ’.

‘ಟ್ವಿಟ್ಟರ್ ವೇದಿಕೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಮೇಲೆ ನಡೆಸಲಾದ ಲಜ್ಜೆಗೆಟ್ಟ ದಾಳಿಯಿಂದಾಗಿ ಒಟ್ಟಾರೆ ಪ್ರಜೆಗಳಿಗೆ ಹಾನಿಯಾಗಲಿದೆ’.
ಸಂಗೀತಾ ಶರ್ಮ ಸಲ್ಲಿಸಿರುವ ಅರ್ಜಿ

1967ರ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯ ಸೆಕ್ಷನ್ 39, ಭಾರತೀಯ ದಂಡ ಸಂಹಿತೆಯ 107, 121 ಎ, 124 ಎ, 153 ಎ, 153 ಬಿ ಸೆಕ್ಷನ್ ಗಳು ಹಾಗೂ 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎಫ್ ಸೆಕ್ಷನ್ ಅಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾ. ಪ್ರತೀಕ್ ಜಲನ್ ಅವರಿದ್ದ ವಿಭಾಗೀಯ ಪೀಠ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಆದರೆ ಹಿಮಾ ಕೋಹ್ಲಿ ನೇತೃತ್ವದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಬೇಕೆಂದು ಮುಖ್ಯ ನ್ಯಾಯಮೂರ್ತಿ ಸೂಚಿಸಿದ್ದಾರೆ. ಸೆ. 30ರಂದು ವಿಚಾರಣೆ ನಡೆಯಲಿದೆ.