Rahul Gandhi and Subramanian Swamy  
ಸುದ್ದಿಗಳು

ರಾಹುಲ್ ಗಾಂಧಿ ಪೌರತ್ವ: ಸುಬ್ರಮಣಿಯನ್ ಸ್ವಾಮಿ ಅರ್ಜಿ ಪಿಐಎಲ್ ಆಗಿ ಪರಿಗಣಿಸಿದ ದೆಹಲಿ ಹೈಕೋರ್ಟ್

ರಾಹುಲ್ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಲು ಕೋರಿರುವ ತಮ್ಮ ಮನವಿಯನ್ನು ನಿರ್ಧರಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಸ್ವಾಮಿ ಕೋರಿದ್ದರು.

Bar & Bench

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವ ಹಿಂಪಡೆಯುವಂತೆ ಕೋರಿದ್ದ ತಮ್ಮ ಮನವಿ ಬಗ್ಗೆ ನಿರ್ಧರಿಸಲು ಗೃಹ ಸಚಿವಾಲಯಕ್ಕೆ (ಎಂಎಚ್‌ಎ) ನಿರ್ದೇಶನ ನೀಡುವಂತೆ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ನ್ಯಾಯವಾದಿ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಮನವಿಯನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ (ಪಿಐಎಲ್)  ಪರಿಗಣಿಸಲಾಗುವುದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.

ನ್ಯಾಯಾಲಯ ಗೃಹ ಸಚಿವಾಲಯಕ್ಕೆ ರಿಟ್‌ ನಿರ್ದೇಶನ ನೀಡಲು ಯಾವುದೇ "ಜಾರಿಗೊಳಿಸಬಹುದಾದ ಸಾಂವಿಧಾನಿಕ ಹಕ್ಕುಗಳನ್ನು ತೋರಲು ಸ್ವಾಮಿ ವಿಫಲರಾಗಿದ್ದಾರೆ ಎಂದ ನ್ಯಾಯಮೂರ್ತಿ ಸಂಜೀವ್ ನರುಲಾ  ಪಿಐಎಲ್‌ಗಳನ್ನು ವಿಚಾರಣೆ ನಡೆಸುವ ರೋಸ್ಟರ್ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಿದರು.

ಆದರೆ ಇದು ಸಾರ್ವಜನಿಕ ಹಿತಾಸಕ್ತಿ ಇರುವ ಪ್ರಕರಣ ಎಂಬುದನ್ನು ಗಮನಿಸಿದ ನ್ಯಾಯಾಲಯ ಪಿಐಎಲ್‌ಗಳನ್ನು ವಿಚಾರಣೆ ನಡೆಸುವ ರೋಸ್ಟರ್ ಪೀಠದೆದುರು ಪ್ರಕರಣವನ್ನು ಪಿಐಎಲ್‌ ರೀತಿ ಪಟ್ಟಿ ಮಾಡಲಾಗುವುದು ಎಂದಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ವಿಭಾಗೀಯ ರೋಸ್ಟರ್‌ ಪೀಠ ಪಿಐಎಲ್ ವಿಚಾರಣೆ ನಡೆಸಲಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವ ರದ್ದುಗೊಳಿಸಲು ಕೋರಿರುವ ತಮ್ಮ ಮನವಿ ನಿರ್ಧರಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು.

ರಾಹುಲ್‌ ಗಾಂಧಿ ಅವರು ಬ್ರಿಟನ್‌ನಲ್ಲಿ 2003ರಲ್ಲಿ ನೊಂದಾಯಿಸಿರುವ ಬ್ಯಾಕ್‌ಆಪ್ಸ್‌ ಲಿಮಿಟೆಡ್ ಹೆಸರಿನ ಕಂಪನಿಯ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಸ್ವಾಮಿ 2019 ರಲ್ಲಿ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಅಕ್ಟೋಬರ್ 10, 2005 ಮತ್ತು ಅಕ್ಟೋಬರ್ 31, 2006 ರಂದು ಸಲ್ಲಿಸಿದ ಕಂಪನಿಯ ವಾರ್ಷಿಕ ರಿಟರ್ನ್ಸ್‌ನಲ್ಲಿ ಗಾಂಧಿಯವರು ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷ್ ಎಂದು ಘೋಷಿಸಿದ್ದರು ಎಂದು ಸ್ವಾಮಿ ತಮ್ಮ ಅರ್ಜಿಯಲ್ಲಿ ಹೇಳಿದ್ದರು.