ನ್ಯಾಯಮೂರ್ತಿಗಳಾದ ಎಸ್‌ ಜೆ ಕಥಾವಲ್ಲಾ ಮತ್ತು ಆರ್‌ ಐ ಚಾಗ್ಲಾ
ನ್ಯಾಯಮೂರ್ತಿಗಳಾದ ಎಸ್‌ ಜೆ ಕಥಾವಲ್ಲಾ ಮತ್ತು ಆರ್‌ ಐ ಚಾಗ್ಲಾ  
ಸುದ್ದಿಗಳು

ಕಾನೂನು ಎಂದರೆ ಏನು? ಎಂದು ಕೇಳಿದ್ದ ಶಿವಸೇನೆಯ ರಾವತ್‌ಗೆ ಕಾನೂನಿನ ಬಿಸಿ ಮುಟ್ಟಿಸಿದ ಬಾಂಬೆ ಹೈಕೋರ್ಟ್

Bar & Bench

ನಟಿ ಕಂಗನಾ ರನೌತ್ ಅವರ ಬಂಗಲೆ ಕೆಡವಿದ ಪ್ರಕರಣ ಕುರಿತಂತೆ ಮಂಗಳವಾರ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಮತ್ತು ಶಿವಸೇನಾ ವಕ್ತಾರ ಸಂಜಯ್ ರಾವತ್ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿತು.

ತಾವು ಶಿವಸೇನಾ ಆಡಳಿತ ಕುರಿತಂತೆ ಸಾರ್ವಜನಿಕ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರಿಂದ ತಮ್ಮ ಬಂಗಲೆಯನ್ನು ಉರುಳಿಸಲಾಗಿದೆ ಎಂದು ವಾದ ಮಂಡಿಸಿದ ನಟಿ ರನೌತ್ ಸಂದರ್ಶನವೊಂದರಲ್ಲಿ ಸಂಜಯ್ ನೀಡಿದ ಪ್ರತಿಕ್ರಿಯೆ ಕುರಿತಂತೆ ನ್ಯಾಯಾಲಯದ ಗಮನ ಸೆಳೆದರು.

ತಮ್ಮನ್ನು ಸಂಜಯ್ ‘ಹರಾಂಖೋರ್’ ಎಂದು ಕರೆದಿದ್ದಾರೆ. ಅಲ್ಲದೆ ಟಿವಿ ನಿರೂಪಕರು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕೈಗೆತ್ತಿಕೊಳ್ಳುವಿರೆ ಎಂದು ಪ್ರಶ್ನಿಸಿದಾಗ ಸಂಜಯ್ 'ಕಾನೂನ್ ಕ್ಯಾ ಹೈ?' (ಕಾನೂನು ಅಂದರೆ ಏನು?) ಎಂದು ಪ್ರಶ್ನಿಸಿದ್ದಾರೆ ಎಂಬುದಾಗಿ ನಟಿ ಅರ್ಜಿಯಲ್ಲಿ ದೂರಿದ್ದರು.

ಆಗ ಕೋರ್ಟ್ ‘ಕಾನೂನ್ ಕ್ಯಾ ಹೈ ಎಂದರೆ ಏನು?’ ಎಂದು ಸಂಜಯ್ ಪರ ವಕೀಲರನ್ನು ಪ್ರಶ್ನಿಸಿತು.

ಕಡೆಗೆ ವಕೀಲರ ಉತ್ತರಗಳಿಗೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಎಸ್‌ ಜೆ ಕಥಾವಲ್ಲಾ ಮತ್ತು ಆರ್‌ ಐ ಚಾಗ್ಲಾ ಅವರಿದ್ದ ಪೀಠ ಟೀಕೆ ಮಾಡಿದ ರಾವತ್ ಅವರನ್ನು ತರಾಟೆಗೆ ತೆಗೆದುಕೊಂಡಿತು.

… ನಾವೆಲ್ಲರೂ ಮಹಾರಾಷ್ಟ್ರಿಗರು. ನಾವು ಮಹಾರಾಷ್ಟ್ರಿಗರಾಗಿರುವುದಕ್ಕೆ ಹೆಮ್ಮೆಪಡುತ್ತೇವೆ. ಆದರೆ ಇದು ಪ್ರತಿಕ್ರಿಯಿಸುವ ರೀತಿಯೇ? ಇದು ಉತ್ತರಿಸುವ ವಿಧಾನವೇ?
ಬಾಂಬೆ ಹೈಕೋರ್ಟ್

ಕಂಗನಾ ಅವರ ಬಂಗಲೆಯನ್ನು ಕೆಡವಲು ಬಿಎಂಸಿ ಹಠಾತ್ತನೆ ತೋರಿದ ಆಸಕ್ತಿ ಕುರಿತಂತೆಯೂ ನ್ಯಾಯಾಲಯ ಕಿಡಿಕಾರಿತು.

‘ಧ್ವಂಸ ಕಾರ್ಯಾಚರಣೆಗೆ ಧಾವಿಸುವ ಮೊದಲು ಅಧಿಕಾರಿ ಏನು ಮಾಡುತ್ತಿದ್ದರು? ಕೆಲಸ ಪೂರ್ತಿ ನಡೆಯುತ್ತಿದ್ದಾಗ ಏನು ಮಾಡುತ್ತಿದ್ದರು? ಆಗಲೇ ಆ ಕಾರ್ಯಕ್ಕೆ ಮುಂದಾಗಲು ಕಾರಣವೇನು?’ ಎಂದು ಪ್ರಶ್ನಿಸಿತು.

ಜೊತೆಗೆ ಈ ರೀತಿ ಛೀಮಾರಿ ಹಾಕಿತು:

ಕಂಗನಾ ಅವರ ಬಂಗಲೆಯ ದುರಸ್ತಿ ಕಾರ್ಯ ನಡೆಯುತ್ತಿದ್ದಾಗ ಯಾರೊಬ್ಬರೂ ನೋಡಲಿಲ್ಲವೇ? ಬೃಹತ್ ಕಟ್ಟಡವೊಂದು ತಲೆ ಎತ್ತಿದಾಗಲೂ ನಿಮ್ಮ ಅಧಿಕಾರಿಗಳೆಲ್ಲಾ ಸೆ. 5 ಮತ್ತು 7ನೇ ತಾರೀಕಿನವರೆಗೆ ಕುರುಡರಾಗಿದ್ದರೆ?
ಬಾಂಬೆ ಹೈಕೋರ್ಟ್

ಲಿಖಿತ ಹೇಳಿಕೆಗಳನ್ನು ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಅಕ್ಟೋಬರ್ 5ಕ್ಕೆ ಪ್ರಕರಣವನ್ನು ಮುಂದೂಡಲಾಗಿದೆ.