Sabarimala Temple 
ಸುದ್ದಿಗಳು

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಎಸ್ಐಟಿ ತನಿಖೆಗೆ ಆದೇಶಿಸಿದ ಕೇರಳ ಹೈಕೋರ್ಟ್

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಚ್ ವೆಂಕಟೇಶ್ ಅವರಿಗೆ ಎಸ್ಐಟಿ ತನಿಖೆಯ ನೇತೃತ್ವ ವಹಿಸಲಾಗಿದೆ.

Bar & Bench

ಶಬರಿಮಲೆ ದೇವಸ್ಥಾನದಲ್ಲಿ 'ದ್ವಾರಪಾಲಕ ಮೂರ್ತಿಗಳಿಗೆ ಹೊದಿಸಲಾದ ಚಿನ್ನ ಲೇಪಿತ ತಾಮ್ರದ ತಗಡುಗಳಿಂದ ಚಿನ್ನ ಕಾಣೆಯಾಗಿರುವ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಕೇರಳ ಹೈಕೋರ್ಟ್‌ ಸೋಮವಾರ ಆದೇಶಿಸಿದೆ [ಸ್ವಯಂಪ್ರೇರಿತ ಪ್ರಕರಣ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಚ್ ವೆಂಕಟೇಶ್ ಅವರಿಗೆ ಎಸ್ಐಟಿ ತನಿಖೆಯ ನೇತೃತ್ವ ವಹಿಸಿದ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ ವಿ ಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ಐಪಿಎಸ್‌ ಅಧಿಕಾರಿ ಶಶಿಧರನ್‌ ಎಸ್‌ ಅವರು ತನಿಖೆಯನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿತು. ಅವರಿಗೆ ವಿವಿಧ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಮತ್ತು ಸಹಾಯಕ ಸಬ್-ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಹಾಯ ಮಾಡುವಂತೆ ಆದೇಶಿಸಲಾಗಿದೆ.

ತನಿಖೆಯ ವೇಳೆ ಮಾಧ್ಯಮ ಅಥವಾ ಸಾರ್ವಜನಿಕರೊಂದಿಗೆ ಯಾವುದೇ ಸಂಪರ್ಕ ಇರಿಸಿಕೊಳ್ಳುವಂತಿಲ್ಲ ಎಂದು ಎಸ್‌ಐಟಿಗೆ ಅದು ಸೂಚಿಸಿದ್ದು ಒಂದು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ಗಡುವು ವಿಧಿಸಿದೆ.

ದ್ವಾರಪಾಲಕ ವಿಗ್ರಹಗಳನ್ನು ಹಳೆಯ ಛಾಯಾಚಿತ್ರಗಳೊಂದಿಗೆ ತುಲನೆ ಮಾಡುವುದಕ್ಕಾಗಿ ಶಬರಿಮಲೆಯ ಅಮೂಲ್ಯ ವಸ್ತುಗಳನ್ನಿರಿಸುವ ಭದ್ರತಾ ಕೊಠಡಿಯನ್ನು ತೆರೆಯಲು ವಿಚಕ್ಷಣಾ ದಳದ ಅಧಿಕಾರಿಗೆ ಅದು ನಿರ್ದೇಶನ ನೀಡಿದೆ.

ಅಲ್ಲದೆ ಟಿಡಿಬಿಯ ಲೆಕ್ಕಪತ್ರಗಳು, ತೂಕದ ದಾಖಲೆ ಹಾಗೂ ಅಮೂಲ್ಯ ವಸ್ತುಗಳ ಹಸ್ತಾಂತರ ಪ್ರಕ್ರಿಯೆ ಎಲ್ಲವನ್ನೂ ತನಿಖೆ ನಡೆಸುವಂತೆ ಅದು ಸೂಚಿಸಿದೆ.

ಹಿನ್ನೆಲೆ

ಶಬರಿಮಲೆ ದೇವಸ್ಥಾನದಲ್ಲಿ 'ದ್ವಾರಪಾಲಕ ಮೂರ್ತಿಗಳಿಗೆ ಹೊದಿಸಲಾದ ಚಿನ್ನ ಲೇಪಿತ ತಾಮ್ರದ ತಗಡುಗಳಿಂದ ಚಿನ್ನದ ಅಂಶ ಕಾಣೆಯಾಗಿರುವ ಬಗ್ಗೆ ವರದಿಯಾಗಿತ್ತು.

ಚಿನ್ನ ಲೇಪನ ಕೆಲಸ ವಹಿಸಿಕೊಂಡಿದ್ದ ವ್ಯಕ್ತಿಯೊಬ್ಬರು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧ್ಯಕ್ಷರಿಗೆ ಇಮೇಲ್ ಕಳುಹಿಸಿ ಉಳಿದ ಚಿನ್ನವನ್ನು ಮದುವೆಗೆ ಬಳಸಬಹುದೇ ಎಂದು ಕೇಳಿರುವುದು ಬಹಿರಂಗವಾಗಿತ್ತು. ಆ ಬಳಿಕ ನ್ಯಾಯಾಲಯ ಈ ಆದೇಶ ನೀಡಿದೆ. ಮುಖ್ಯ ವಿಚಕ್ಷಣಾ ಅಧಿಕಾರಿ ಪ್ರಕರಣದ ಸಂಬಂಧ ಶುಕ್ರವಾರ ವರದಿ ಸಲ್ಲಿಸಿದ್ದರು. ನಂತರ ಇಂದು ನ್ಯಾಯಾಲಯ ಎಸ್‌ಐಟಿ ತನಿಖೆಗೆ ಆದೇಶಿಸಿದೆ.

ದ್ವಾರಪಾಲಕ ವಿಗ್ರಹಗಳ  ಚಿನ್ನ ಲೇಪಿತ ತಾಮ್ರದ ತಗಡುಗಳನ್ನು ನ್ಯಾಯಾಲಯ ಅಥವಾ ಶಬರಿಮಲೆಯ ವಿಶೇಷ ಆಯುಕ್ತರಿಗೆ ತಿಳಿಸಿದೆಯೇ ದುರಸ್ತಿಗಾಗಿ ಕಳುಹಿಸಲಾಗಿತ್ತು. ಆಗ ಸ್ವಲ್ಪ ಪ್ರಮಾಣದ ಚಿನ್ನ ಕಳೆದುಹೋಗಿದೆ ಎಂಬ ಕಳವಳ ವ್ಯಕ್ತವಾಗಿತ್ತು. ಮೂರ್ತಿಯ ಹೊದಿಕೆಗಳನ್ನು ತೆಗೆದಿದಿದ್ದ ಟಿಡಿಬಿ, ಉನ್ನಿಕೃಷ್ಣನ್ ಪೊಟ್ಟಿ ಎಂಬ ಭಕ್ತರ ಪ್ರಾಯೋಜಕತ್ವದಡಿಯಲ್ಲಿ ದುರಸ್ತಿ ಕಾರ್ಯವನ್ನು ಚೆನ್ನೈ ಮೂಲದ 'ಸ್ಮಾರ್ಟ್ ಕ್ರಿಯೇಷನ್ಸ್' ಎಂಬ ಸಂಸ್ಥೆಗೆ ವಹಿಸಿತ್ತು.

ಸ್ಮಾರ್ಟ್ ಕ್ರಿಯೇಷನ್ಸ್‌ಗೆ 42.8 ಕೆಜಿ ತೂಕದ ವಸ್ತು ಹಸ್ತಾಂತರಿಸಲಾಗಿದ್ದರೂ ಕೇವಲ 38 ಕೆಜಿ ತೂಕದ ವಸ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದು ದಾಖಲಿಸಲಾಗಿತ್ತು. ಸುಮಾರು 4.54 ಕೆಜಿ ವ್ಯತ್ಯಾಸ ಇದ್ದುದನ್ನು ನ್ಯಾಯಾಲಯ ಕಳೆದ ವಿಚಾರಣೆ ವೇಳೆ ಗಂಭೀರವಾಗಿ ಪರಿಗಣಿಸಿತ್ತು. ಸೆಪ್ಟೆಂಬರ್ 17 ರಂದು ನ್ಯಾಯಾಲಯ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಮುಖ್ಯ  ವಿಚಕ್ಷಣಾ ಅಧಿಕಾರಿ ನಂತರ ನ್ಯಾಯಾಲಯಕ್ಕೆ ಸಮಗ್ರ ವರದಿ ಸಲ್ಲಿಸಿದ್ದರು.

ಉನ್ನಿಕೃಷ್ಣನ್ ಪೊಟ್ಟಿಯವರ ಸಹೋದರಿ ಮಿನಿಯವರ ಮನೆಯಲ್ಲಿ ಕೆಲವು ಚಿನ್ನ ಲೇಪಿತ ತಗಡುಗಳನ್ನು ಬಚ್ಚಿಟ್ಟಿರುವ ವಿಚಾರ ವರದಿಯಲ್ಲಿ ಇದ್ದು , ಶೋಧದ ಸಮಯದಲ್ಲಿ ಜಾಗೃತ ದಳ ಅವುಗಳನ್ನು ವಶಪಡಿಸಿಕೊಂಡಿರುವುದು ತಿಳಿದುಬಂದಿದೆ. ಪೊಟ್ಟಿ ಅವರಿಗೆ ಔಪಚಾರಿಕವಾಗಿ ಅಂತಹ ವಸ್ತುಗಳನ್ನು ನೀಡಲಾಗಿತ್ತು ಎಂಬ ದಾಖಲೆ ಟಿಡಿಬಿ ಬಳಿ ಇಲ್ಲದಿರಿವುದರಿಂದ ಈ ವಿಚಾರ ಕಳವಳಕಾರಿ ಎಂದು ನ್ಯಾಯಾಲಯ ಕಳೆದ ವಿಚಾರಣೆ ವೇಳೆ ಹೇಳಿತ್ತು.