ಸುದ್ದಿಗಳು

ಸಾಹಸ ಕಲಾವಿದ ಸಾವಿನ ಪ್ರಕರಣ: ನಟ ಅಜಯ್‌ ರಾವ್‌ ಒಳಗೊಂಡು ಆರು ಮಂದಿಗೆ ರಾಮನಗರ ನ್ಯಾಯಾಲಯದಿಂದ ಜಾಮೀನು

Bar & Bench

'ಲವ್‌ ಯು ರಚ್ಚು' ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಸಾಹಸ ಕಲಾವಿದ ವಿವೇಕ್‌ ಸಾವಿನ ದುರ್ಘಟನೆಗೆ ಸಂಬಂಧಿಸಿದಂತೆ ನಟ ಅಜಯ್‌ ರಾವ್‌, ನಿರ್ಮಾಪಕ ಗುರುದೇಶಪಾಂಡೆ, ಪ್ರೊಡಕ್ಷನ್‌ ಮ್ಯಾನೇಜರ್‌ ಫರ್ನಾಂಡೀಸ್‌ ಅವರಿಗೆ ನಿರೀಕ್ಷಣಾ ಜಾಮೀನು ದೊರೆತಿದ್ದು, ನಿರ್ದೇಶಕ ಶಂಕರಯ್ಯ ಎಡಿಗಾರ್‌, ಸಾಹಸ ಸಂಯೋಜಕ ವಿನೋದ್‌ ಕುಮಾರ್‌ ಮತ್ತು ಕ್ರೇನ್‌ ಚಾಲಕ ಮಹದೇವಯ್ಯ ಎಸ್‌ ಅಲಿಯಾಸ್‌ ಮಹದೇವ ಅವರಿಗೆ ರಾಮನಗರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸಿದ್ದಲಿಂಗಪ್ಪ ಪ್ರಭು ಅವರು ಗುರುವಾರ ಜಾಮೀನು ಮಂಜೂರು ಮಾಡಿದರು.

ಇದೇ ತಿಂಗಳ 9ರಂದು ಬಿಡದಿಯ ಜೋಗರಪಾಳ್ಯ ಸಮೀಪ ‘ಲವ್‌ ಯೂ ರಚ್ಚು’ ಚಿತ್ರೀಕರಣದ ಸಂದರ್ಭ ವಿದ್ಯುತ್‌ ಸ್ಪರ್ಶದಿಂದಾಗಿ ಚಿತ್ರದ ಸಾಹಸ ಕಲಾವಿದ ವಿವೇಕ್ ಮೃತಪಟ್ಟಿದ್ದರು. ಈ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಬಿಡದಿ ಪೊಲೀಸರು ಶಂಕರಯ್ಯ, ವಿನೋದ್ ಹಾಗೂ ಮಹದೇವ ಅವರನ್ನು ಬಂಧಿಸಿದ್ದರು. ನ್ಯಾಯಾಲಯವು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆ.7ರವರೆಗೆ ವಿಸ್ತರಿಸಿತ್ತು. ಈ ಮಧ್ಯೆ, ಜಾಮೀನು ನೀಡುವಂತೆ ಬಂಧಿತರು ಸೆಷನ್ಸ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪ್ರಕರಣದ ಇನ್ನಿತರ ಆರೋಪಿಗಳಾದ ಗುರು ದೇಶಪಾಂಡೆ ಹಾಗೂ ಫರ್ನಾಂಡೀಸ್ ತಲೆಮರೆಸಿಕೊಂಡಿದ್ದು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಎಫ್‌ಐಆರ್‌ನಲ್ಲಿ ನಟ ಅಜಯ್‌ ರಾವ್‌ ಅವರ ಹೆಸರನ್ನು ಸೇರಿಸದಿದ್ದರೂ ಬಂಧನ ಭೀತಿಯಿಂದ ಅವರು ನಿರೀಕ್ಷಣಾ ಜಾಮೀನು ಕೋರಿದ್ದರು.

ಶಂಕರಯ್ಯ, ವಿನೋದ್ ಹಾಗೂ ಮಹದೇವ ಅವರ ಪರವಾಗಿ ವಕೀಲ ಟಿ ಎಂ ಸೋಮಶೇಖರ್‌, ನಟ ಅಜಯ್‌ ರಾವ್‌ ಪರವಾಗಿ ವಕೀಲ ಬಿ ಸಿ ವೆಂಕಟೇಶ್‌ ಹಾಜರಾಗಿದ್ದರು. ಬಿಡದಿ ಪೊಲೀಸರ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ರಘು, ಹೆಚ್ಚುವರಿ ಸರ್ಕಾರಿ ಅಭಿಯೋಜಕ ಶ್ರೀರಾಮ್‌ ವೆಂಕಟೇಶ್‌ ಹಾಜರಿದ್ದರು.