ಮನೆಗೆಲಸದವರ ಹಕ್ಕುಗಳನ್ನು ರಕ್ಷಿಸಲು ಸಮಗ್ರ ಕಾಯಿದೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ [ಅಜಯ್ ಮಲಿಕ್ ಮತ್ತು ಉತ್ತರಾಖಂಡ ಸರ್ಕಾರ ಮತ್ತಿತರರ ನಡುವಣ ಪ್ರಕರಣ].
ಮನೆಗೆಲಸದವರ ಹಕ್ಕುಗಳ ರಕ್ಷಣೆಗಾಗಿ ಸಮಗ್ರ ಕಾನೂನು ರೂಪಿಸುವ ಸಾಧ್ಯತೆ ಪರಿಶೀಲಿಸುವ ಸಂಬಂಧ ಸಮಿತಿ ರಚಿಸುವಂತೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ಸಂಬಂಧಪಟ್ಟ ಸಚಿವಾಲಯಗಳಿಗೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಆದೇಶಿಸಿದೆ.
ಮನೆ ಮಾಲೀಕನೊಬ್ಬ ಮನೆಗೆಲಸದಾಕೆಗೆ ಕೆಲಸ ತೊರೆಯದಂತೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಮನೆ ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 370 (ಮಾನವ ಕಳ್ಳಸಾಗಣೆ), 343 (ಅಕ್ರಮ ಬಂಧನ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿ ಪ್ರಕರಣ ದಾಖಲಿಸಲಾಗಿತ್ತು.
ಮನೆಗೆಲಸದಾಕೆ ಮತ್ತು ಆಕೆಯನ್ನು ಕೆಲಸಕ್ಕೆ ನಿಯೋಜಿಸಿದ್ದ ಏಜೆನ್ಸಿಯಲ್ಲಿ ಕೆಲಸ ಮಾಡುವ ವ್ಯಕ್ತಿಗಳ ನಡುವೆ ಜಗಳ ಉಂಟಾದ ಬಳಿಕ ಪೊಲೀಸರು ತನ್ನನ್ನು ಸುಳ್ಳೇ ಬಂಧಿಸಿದ್ದಾರೆ ಎಂದು ಆತ ದೂರಿದ್ದರು. ಏಜೆನ್ಸಿಯಲ್ಲಿ ಕೆಲಸ ಮಾಡುವವರ ಮೇಲೂ ಅತ್ಯಾಚಾರದ ಆರೋಪವನ್ನು ಮನೆಗೆಲಸದಾಕೆ ಹೊರಿಸಿದ್ದಳು.
ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸುವಂತೆ 2018 ರಲ್ಲಿ ಮನೆ ಮಾಲೀಕ ಉತ್ತರಾಖಂಡ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣ ಈಗಾಗಲೇ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದೆ ಎಂದು ಆತ ತಿಳಿಸಿದ್ದರು. ಆತನ ಮನವಿಗೆ ಮನೆಗೆಲಸದಾಕೆಯೂ ಬೆಂಬಲಿಸಿದ್ದರು.
ಮತ್ತೊಬ್ಬ ಕೆಲಸದಾಕೆಯನ್ನು ಹುಡುಕಿಕೊಡುವವರೆಗೂ ಕೆಲಸ ಬಿಡುವಂತಿಲ್ಲ ಎಂದು ಮಾಲೀಕ ಆದರೆ 2016ರಿಂದಲೂ ತನ್ನನ್ನು ಕೆಲಸ ತೊರೆಯದಂತೆ ನಿರ್ಬಂಧಿಸಿದ್ದರು ಎಂಬುದಾಗಿ ಮನೆಗೆಲಸದ ಮಹಿಳೆ ಪೊಲೀಸರಿಗೆ ನೀಡಿದ ಹೇಳಿಕೆಯನ್ನು ಆಧರಿಸಿ ಹೈಕೋರ್ಟ್ ಆರೋಪಿಯ ಮನವಿಯನ್ನು ವಜಾಗೊಳಿಸಿತ್ತು.
ಅಂತಹ ಕೃತ್ಯಗಳು ಐಪಿಸಿ ಸೆಕ್ಷನ್ 370ರ ಅಡಿಯಲ್ಲಿ ಬರಲಿದ್ದು ಇದು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತಹ ಪ್ರಕರಣವಲ್ಲ ಎಂದಿತ್ತು. ಹೀಗಾಗಿ ಮನೆ ಮಾಲೀಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಆತನ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.