Justice S Ravindra Bhat, Justice UU Lalit, and Justice Bela Trivedi
Justice S Ravindra Bhat, Justice UU Lalit, and Justice Bela Trivedi  
ಸುದ್ದಿಗಳು

ʼಪ್ರತಿ ಪಾಪಿಗೂ ಭವಿಷ್ಯವಿದೆʼ ತೀರ್ಪು ಪ್ರಶ್ನಿಸಿದ್ದ ಅರ್ಜಿ ವಜಾ: ಗಲ್ಲುಶಿಕ್ಷೆ ವಿನಾಯಿತಿ ಸಮರ್ಥಿಸಿಕೊಂಡ ಸುಪ್ರೀಂ

Bar & Bench

ಮಧ್ಯಪ್ರದೇಶದ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಕೊಂದಿದ್ದ ವ್ಯಕ್ತಿಯೊಬ್ಬನಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ತಗ್ಗಿಸಿ ಪರಿವರ್ತಿಸಿ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮೃತ ಬಾಲಕಿಯ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ [ಮೊಹಮ್ಮದ್‌ ಫಿರೋಜ್‌ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಎಲ್ಲಾ ಸೂಕ್ತ ಅಂಶಗಳನ್ನು ಪರಿಗಣಿಸಿದ ಬಳಿಕವೇ ಅಪರಾಧಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷಗೆ ಪರಿವರ್ತಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಭಿನ್ನ ದೃಷ್ಟಿಕೋನದಿಂದ ಪ್ರಕರಣವನ್ನು ಪರಿಗಣಿಸುವ ರೀತಿಯಲ್ಲಿ ಯಾವುದೇ ವಾದ ಮಂಡನೆಯಾಗಿಲ್ಲ. ಹೀಗಾಗಿ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ತಿಳಿಸಿತು.

ಅಪರಾಧಿ ಮೊಹಮ್ಮದ್‌ಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದ್ದ ಸುಪ್ರೀಂ ಕೋರ್ಟ್‌ ತೀರ್ಪನ್ನು ಪರಿಶೀಲಿಸುವಂತೆ ಮೃತ ಬಾಲಕಿಯ ತಾಯಿ ಅರ್ಜಿ ಸಲ್ಲಿಸಿದ್ದರು.

ಏಪ್ರಿಲ್ 19, 2021ರಂದು ನೀಡಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಇದು ಮರಣ ದಂಡನೆ ನೀಡುವಂತಹ ಅಪರೂಪದಲ್ಲೇ ಅಪರೂಪದ ಪ್ರಕರಣವಲ್ಲ ಎಂದು ಹೇಳಿತ್ತು. ಆದರೆ ಇದರ ಹೊರತಾಗಿ ನ್ಯಾಯಾಲಯದ ಕೆಲ ಅವಲೋಕನಗಳಿಗೆ ಟೀಕೆ ವ್ಯಕ್ತವಾಗಿತ್ತು.

ಲೇಖಕ ಆಸ್ಕರ್‌ ವೈಲ್ಡ್‌ನ ಕೆಲ ಸಾಲುಗಳನ್ನು ಉದ್ಗರಿಸಿದ್ದ ಸರ್ವೋಚ್ಚ ನ್ಯಾಯಾಲಯ “ಸಂತನಿಗೂ ಪಾಪಿಗೂ ಇರುವ ವ್ಯತ್ಯಾಸವೆಂದರೆ ಪ್ರತಿಯೊಬ್ಬ ಸಂತನಿಗೆ ಭೂತಕಾಲವಿದೆ ಮತ್ತು ಪ್ರತಿ ಪಾಪಿಗೂ ಭವಿಷ್ಯವಿದೆ. ಹಲವು ವರ್ಷಗಳಿಂದ ರೂಪುಗೊಂಡ ಈ ನ್ಯಾಯಾಲಯದ ಪುನಶ್ಚೇತನದಾಯಿ ನ್ಯಾಯದ ಮೂಲ ತತ್ವಗಳಲ್ಲಿ ಅಪರಾಧಿ ಜೈಲಿನಿಂದ ಬಿಡುಗಡೆಯಾಗಿ ತನ್ನಿಂದಾದ ತಪ್ಪನ್ನು ಸರಿಪಡಿಸಲು ಪ್ರಯತ್ನಿಸುವುದು ಮತ್ತು ಸಮಾಜಕ್ಕೆ ಉಪಯೋಗವಾಗುವಂತಹ ಮನುಷ್ಯನಾಗಲು ಒಂದು ಅವಕಾಶ ನೀಡುವುದು ಸಹ ಸೇರಿದೆ” ಎಂದಿತ್ತು.

ಆರೋಪಿ ಮೊಹಮ್ಮದ್‌ ಫಿರೋಜ್‌ಗೆ ಸಿಯೋನಿಯಲ್ಲಿನ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಸಂತ್ರಸ್ತ ಬಾಲಕಿಯನ್ನು ಅಪಹರಿಸಿದ್ದ ಸಹ ಆರೋಪಿಗೆ ಜೈಲು ಶಿಕ್ಷೆ ನೀಡಿತ್ತು. ಮಧ್ಯಪ್ರದೇಶ ಹೈಕೋರ್ಟ್‌ ಗಲ್ಲುಶಿಕ್ಷೆ ದೃಢಪಡಿಸಿತ್ತು. ಇದನ್ನು ಆರೋಪಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿಯಿತಾದರೂ ಮರಣದಂಡನೆಯನ್ನು ರದ್ದುಗೊಳಿಸಿತ್ತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Mohd_Firoz_Vs_State_of_MP.pdf
Preview