ತಮ್ಮ ರೆಜಿಮೆಂಟ್ನ ದೇವಸ್ಥಾನ ಮತ್ತು ಗುರುದ್ವಾರದ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ನಿರಾಕರಿಸಿದ್ದ ಕ್ರೈಸ್ತ ಧರ್ಮಕ್ಕೆ ಸೇರಿದ್ದ ಸೇನಾಧಿಕಾರಿಯನ್ನು ಭಾರತೀಯ ಸೇನೆಯಿಂದ ವಜಾಗೊಳಿಸಿದ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ [ಸ್ಯಾಮ್ಯುಯೆಲ್ ಕಮಲೇಶನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಧಾರ್ಮಿಕ ಆಚರಣೆಯಲ್ಲಿ ಸೇನಾಧಿಕಾರಿ ಭಾಗಿಯಾಗಲು ನಿರಾಕರಿಸಿದರೆ ಅದು ಅವರ ಅಧೀನದಲ್ಲಿರುವ ಸೈನಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದಿಲ್ಲವೇ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಪ್ರಶ್ನಿಸಿತು.
"ಸೇನಾಧಿಕಾರಿಯ ವರ್ತನೆ ಹೀಗಿದ್ದರೆ ಏನು ಹೇಳುವುದು!" ಎಂದು ಸಿಜೆಐ ಸೂರ್ಯ ಕಾಂತ್ ಅಸಮಾಧಾನ ವ್ಯಕ್ತಪಡಿಸಿದರು.
2017ರಲ್ಲಿ ಸಿಖ್ ಸ್ಕ್ವಾಡ್ರನ್ಗೆ ನಿಯೋಜಿತರಾದ ಲೆಫ್ಟಿನೆಂಟ್ ಕಮಲೇಶನ್, ಕಡ್ಡಾಯ ರೆಜಿಮೆಂಟಲ್ ಪೆರೇಡ್ಗಳ ಸಮಯದಲ್ಲಿ ಧಾರ್ಮಿಕ ಕಟ್ಟಡಗಳ ಗರ್ಭಗುಡಿ ಪ್ರವೇಶಿಸಲು ನಿರಾಕರಿಸಿದ್ದರಿಂದ ಶಿಸ್ತುಕ್ರಮ ಎದುರಿಸಿದ್ದರು. ತಾನು ಪಾಲಿಸುವ ಕ್ರೈಸ್ತ ಧರ್ಮಕ್ಕೆ ಗೌರವ ಸಲ್ಲಿಸುವ ಸಲುವಾಗಿ ಮಾತ್ರವಲ್ಲದೆ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸುವ ಮೂಲಕ ಉಳಿದ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದೆ ಇರಲು ಕೂಡ ಹೀಗೆ ಮಾಡಿರುವೆ. ಇದರಿಂದ ತನ್ನ ಸೇನಾದಳದ ಭಾವನೆಗಳಿಗೆ ಧಕ್ಕೆ ತಂದಿಲ್ಲ ಎಂದು ವಾದಿಸಿದ್ದರು.
ಆದರೆ ಕಮಾಂಡರ್ ಅಧಿಕಾರಿಗಳು ಭರವಸೆ ನೀಡಿದರೂ ಕ್ರೈಸ್ತ ಧರ್ಮದ ಭಾವನೆಗಳಿಗೆ ಧಕ್ಕೆ ತರುವುದಿಲ್ಲ ಎಂದು ಪಾದ್ರಿಗಳೊಂದಿಗೆ ನಡೆಸಿದ ಸಮಾಲೋಚನೆಗಳು ಹೇಳಿದ್ದರೂ ಕಮಲೇಶನ್ ತಮ್ಮ ನಿಲುವು ಬದಲಿಸಲಿಲ್ಲ. ಹೀಗಾಗಿ ಅವರನ್ನು 2021ರಲ್ಲಿ ವಜಾಗೊಳಿಸಲಾಗಿತ್ತು. ಕಮಲೇಶನ್ ನಿರಾಕರಣೆಯಿಂದಾಗಿ ಪಡೆಯ ಒಗ್ಗಟ್ಟು ಮತ್ತು ಅದರ ನೈತಿಕತೆ ದುರ್ಬಲಗೊಂಡಿತು ಸೇನೆ ಹೇಳಿತ್ತು.
ಕಳೆದ ಮೇನಲ್ಲಿ ದೆಹಲಿ ಹೈಕೋರ್ಟ್ ಕೂಡ ಅವರ ವಜಾ ಆದೇಶ ಎತ್ತಿ ಹಿಡಿದಿತ್ತು. ತನ್ನ ಧಾರ್ಮಿಕ ನಂಬಿಕೆಗಳನ್ನು ಆಚರಿಸುವ ಹಕ್ಕು ಅಧಿಕಾರಿಗೆ ಇದ್ದರೂ ಆತ ತನ್ನ ಪಡೆಗಳ ಕಮಾಂಡರ್ ಅಧಿಕಾರಿಯಾಗಿ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಪ್ರಸ್ತುತ ಪ್ರಕರಣದಲ್ಲಿನ ಪ್ರಶ್ನೆ ಧಾರ್ಮಿಕ ಸ್ವಾತಂತ್ರ್ಯದ್ದಲ್ಲ, ಬದಲಾಗಿ ಉನ್ನತ ಅಧಿಕಾರಿಯ ಕಾನೂನುಬದ್ಧ ಜವಾಬ್ದಾರಿಯನ್ನು ಪಾಲಿಸಿದ್ದಾರೆಯೇ ಎಂಬುದಾಗಿದೆ ಎಂದು ತೀರ್ಪು ನೀಡಿತ್ತು. ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
ಇಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಸಿಜೆಐ ಕಾಂತ್ ಅವರು, ಆ ಅಧಿಕಾರಿ ಸೇನೆಗೆ ಸಂಪೂರ್ಣ ಅನರ್ಹ ಎಂದರು. ರೆಜಿಮೆಂಟ್ನಲ್ಲಿ ಎಲ್ಲಾ ಧರ್ಮಗಳ ಆಚರಣೆಗೂ ಅವಕಾಶ ಇರುವಾಗ ಸೇನಾಧಿಕಾರಿ ಮೇಲೆ ಹೇರಿಕೆ ಹೇಗಾಗುತ್ತದೆ ಎಂದು ಪೀಠ ಪ್ರಶ್ನಿಸಿತು. ಕಮಲೇಶನ್ ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರ್ನಾರಾಯಣನ್ ವಾದ ಮಂಡಿಸಿದರು.