<div class="paragraphs"><p>Lawyers</p></div>

Lawyers

 

Image for representative purpose

ಸುದ್ದಿಗಳು

ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ: ಇಬ್ಬರ ಸಾವು

Bar & Bench

ಪಂಜಾಬ್‌ನ ಲುಧಿಯಾನ ನ್ಯಾಯಾಲಯ ಸಂಕೀರ್ಣದಲ್ಲಿ ಸಂಭವಿಸಿರುವ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸುಧಾರಿತ ಸ್ಫೋಟಕಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿದ್ದು ನ್ಯಾಯಾಲಯ ಮತ್ತು ಪೊಲೀಸ್‌ ಕಚೇರಿಗಳು ಸನಿಹದಲ್ಲಿಯೇ ಇರುವ ಭದ್ರತೆಯ ಪ್ರದೇಶದಲ್ಲಿಯೇ ಘಟನೆ ಸಂಭವಿಸಿದೆ.

ಸಂಕೀರ್ಣದ ಒಳಗಿನ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ದಿನಗಳಲ್ಲಿಯೇ ಈ ಸ್ಫೋಟ ಸಂಭವಿಸಿದೆ.

ಕೆಲ ದಿನಗಳ ಹಿಂದೆ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಈ ಸಂಬಂಧ ಡಿಆರ್‌ಡಿಒ ವಿಜ್ಞಾನಿಯೊಬ್ಬರನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಮತ್ತು ವಕೀಲರ ನಡುವಿನ ವೈಯಕ್ತಿಕ ದ್ವೇಷ ಸ್ಫೋಟಕ್ಕೆ ಕಾರಣ ಎಂದು ತಿಳಿದುಬಂದಿತ್ತು.

ಇದಕ್ಕೂ ಮೊದಲು ಅದೇ ನ್ಯಾಯಾಲಯದಲ್ಲಿ ದರೋಡೆಕೋರ ಜಿತೇಂದರ್ ಗೋಗಿ ಸೇರಿದಂತೆ ಮೂವರನ್ನು ಹತ್ಯೆ ಮಾಡಲಾಗಿತ್ತು. ಜಿಲ್ಲಾ ನ್ಯಾಯಾಲಯಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.

ಜಾರ್ಖಂಡ್ ನ್ಯಾಯಾಧೀಶ ಉತ್ತಮ್ ಆನಂದ್ ಅವರು ವಾಯುವಿಹಾರದಲ್ಲಿ ತೊಡಗಿದ್ದಾಗ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ್ದರು. ಈ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸುತ್ತಿದೆ.