ಕೇರಳ ರಾಜ್ಯದ ಹೆಸರನ್ನು “ಕೇರಳಂ” ಎಂದು ಬದಲಾಯಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದ್ದು ರಾಜ್ಯದ ಹೆಸರು ಬದಲಾವಣೆಗಾಗಿ ಸಂವಿಧಾನದ ಮೊದಲನೇ ಅನುಚ್ಛೇದಕ್ಕೆ ತಿದ್ದುಪಡಿ ಮಾಡಲು ಅಗತ್ಯ ಸಾಂವಿಧಾನಿಕ ಪ್ರಕ್ರಿಯೆ ಆರಂಭಿಸಿದೆ.
ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಚಿವ ಸಂಪುಟ ಸಭೆ ಕೈಗೊಂಡಿದೆ ಎಂದು ಪತ್ರಿಕಾ ಮಾಹಿತಿ ಬ್ಯೂರೊ ಪ್ರಕಟಣೆಯಲ್ಲಿ ತಿಳಿಸಿದೆ.
ಅನುಮೋದನೆಯ ನಂತರ, ಭಾರತ ರಾಷ್ಟ್ರಪತಿಗಳು ಕೇರಳ (ಹೆಸರು ಬದಲಾವಣೆ) ಮಸೂದೆ, 2026ಅನ್ನು ಸಂವಿಧಾನದ ವಿಧಿ 3ರ ಅಡಿಯಲ್ಲಿ ಅಭಿಪ್ರಾಯ ಪಡೆಯಲು ಕೇರಳ ವಿಧಾನಸಭೆಗೆ ಕಳುಹಿಸಿಕೊಡಲಿದ್ದಾರೆ.
ಸಂವಿಧಾನದ 3ನೇ ವಿಧಿ ಪ್ರಕಾರ, ಸಂಸತ್ತಿಗೆ ಕಾಯಿದೆ ಮೂಲಕ ರಾಜ್ಯವೊಂದರ ಹಾಲಿ ಹೆಸರನ್ನು ಬದಲಾಯಿಸುವ ಅಧಿಕಾರವಿದೆ. ಆದರೆ, ಇಂತಹ ಮಸೂದೆ ಸಂಸತ್ತಿನಲ್ಲಿ ಜಾರಿಗೆ ಬರುವ ಮುನ್ನ ರಾಷ್ಟ್ರಪತಿಗಳು ಅದನ್ನು ಸಂಬಂಧಿತ ರಾಜ್ಯ ವಿಧಾನಸಭೆಗೆ ಅಭಿಪ್ರಾಯಕ್ಕಾಗಿ ಕಳುಹಿಸಬೇಕು. ವಿಧಾನಸಭೆಯ ಅಭಿಪ್ರಾಯ ಬಂದ ನಂತರ, ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಶಿಫಾರಸ್ಸು ಪಡೆದು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬಹುದು. ಸಚಿವ ಸಂಪುಟದ ಅನುಮೋದನೆ ಪ್ರಸ್ತಾವಿತ ಸಂವಿಧಾನ ತಿದ್ದುಪಡಿಯ ದಿಕ್ಕಿನಲ್ಲಿ ಮೊದಲ ಅಧಿಕೃತ ಹೆಜ್ಜೆಯಾಗಿದೆ.
ಈ ಬದಲಾವಣೆಯ ಮೂಲ 2024ರ ಜೂನ್ 24ರಂದು ಕೇರಳ ವಿಧಾನಸಭೆ ಅಂಗೀಕರಿಸಿದ ನಿರ್ಣಯ. ಆ ಮೂಲಕ ರಾಜ್ಯದ ಹೆಸರನ್ನು ಬದಲಿಸಲು ಕೇಂದ್ರಕ್ಕೆ ಆಗ್ರಹಿಸಲಾಗಿತ್ತು. ಮಲಯಾಳಂನಲ್ಲಿ ಬಳಸುವ “ಕೇರಳಂ” ಹೆಸರನ್ನು ಅಧಿಕೃತವಾಗಿ ಅಂಗೀಕರಿಸಲು ಸರ್ವಾನುಮತದಿಂದ ಕೋರಲಾಗಿತ್ತು.
ಸಂಸತ್ತು ಮಸೂದೆಯನ್ನು ಅಂಗೀಕರಿಸಿದರೆ, ಸಂವಿಧಾನದ ಪ್ರಥಮ ಅನುಬಂಧದಲ್ಲಿ “ಕೇರಳ” ಎಂಬ ಹೆಸರನ್ನು “ಕೇರಳಂ” ಎಂದು ಬದಲಾಯಿಸಲಾಗುತ್ತದೆ