Justice Ranjana Prakash Desai
Justice Ranjana Prakash Desai  
ಸುದ್ದಿಗಳು

ಏಕರೂಪ ನಾಗರಿಕ ಸಂಹಿತೆ ಜಾರಿ: ನ್ಯಾ. ರಂಜನಾ ಪ್ರಕಾಶ್ ನೇತೃತ್ವದ ಸಮಿತಿ ರಚಿಸಿದ ಉತ್ತರಾಖಂಡ ಸರ್ಕಾರ

Bar & Bench

ಆಯಾ ಸಮುದಾಯಗಳ ವೈಯಕ್ತಿಕ ಕಾನೂನುಗಳನ್ನು ಪರಿಶೀಲಿಸಲು ಮತ್ತು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ ನೇತೃತ್ವದ ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ನ್ಯಾ. ರಂಜನಾ ಅವರಲ್ಲದೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪರ್ಮೋದ್ ಕೊಹ್ಲಿ, ಸಾಮಾಜಿಕ ಕಾರ್ಯಕರ್ತ ಮನು ಗೌರ್, ನಿವೃತ್ತ ಐಎಎಸ್ ಅಧಿಕಾರಿ ಶತ್ರುಘ್ನ ಸಿಂಗ್ ಹಾಗೂ ಡೂನ್ ವಿಶ್ವವಿದ್ಯಾಲಯದ ಉಪಕುಲಪತಿ ಸುರೇಖಾ ದಂಗ್ವಾಲ್ ಅವರನ್ನು ಸಮಿತಿ ಒಳಗೊಂಡಿದೆ.

ವಿವಿಧ ಸಮುದಾಯಗಳನ್ನು ನಿಯಂತ್ರಿಸುವ ಬೇರೆ ಬೇರೆ ವೈಯಕ್ತಿಕ ಕಾನೂನುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ ನಂತರವಷ್ಟೇ ಯುಸಿಸಿ ಜಾರಿಗೆ ತರಬಹುದು ಎಂದು ಈ ವರ್ಷದ ಜನವರಿಯಲ್ಲಿ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು.ಹಾಗಾಗಿ 3 ತಿಂಗಳೊಳಗೆ ಯುಸಿಸಿ ಕರಡು ರಚನೆ ಕೋರಿ ಬಿಜೆಪಿ ವಕ್ತಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊ:ಳಿಸುವಂತೆ ಕೇಂದ್ರ ಕೋರಿತ್ತು.

ಕಳೆದ ವರ್ಷ ನವೆಂಬರ್‌ನಲ್ಲಿ, ಅಲಾಹಾಬಾದ್ ಹೈಕೋರ್ಟ್ ಸಂವಿಧಾನದ 44ನೇ ವಿಧಿಯನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಕರೆ ನೀಡಿತ್ತು. ಏಕರೂಪ ನಾಗರಿಕ ಸಂಹಿತೆ ಅಗತ್ಯವಾಗಿದ್ದು 75 ವರ್ಷಗಳ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಅವರು ತಿಳಿಸಿದಂತೆ ಅದನ್ನು ʼಸ್ವಯಂಪ್ರೇರಿತʼ ನೆಲೆಯಲ್ಲಿ ಪರಿಗಣಿಸಲಾಗದು ಎಂದಿತ್ತು.

ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್‌, ಭಾರತೀಯ ಸಮಾಜದಲ್ಲಾಗುತ್ತಿರುವ ತ್ವರಿತ ಪರಿವರ್ತನೆಯ ದೃಷ್ಟಿಯಿಂದ ಧರ್ಮ, ಸಮುದಾಯ ಮತ್ತು ಜಾತಿಯ ಸಾಂಪ್ರದಾಯಿಕ ಅಡೆತಡೆಗಳನ್ನು ಕ್ರಮೇಣ ತೆಗೆದುಹಾಕುವುದರೊಂದಿಗೆ ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರುವ ಅಗತ್ಯವಿದೆ ಎಂಬುದನನ್ನು ಒತ್ತಿ ಹೇಳಿತ್ತು.