ಮಣಿಪುರದ ಮೈತೇಯಿ ಮತ್ತು ಕುಕಿ ಸಮುದಾಯಗಳ ಪರಿಹಾರ ಶಿಬಿರಗಳಿಗೆ ಈಚೆಗೆ ಭೇಟಿ ನೀಡಿದ್ದನ್ನು ನೆನೆದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ಸಂಘರ್ಷ ಪೀಡಿತ ಮತ್ತು ದೂರದ ಪ್ರದೇಶಗಳಲ್ಲಿ ನ್ಯಾಯ ಅರ್ಥಪೂರ್ಣವಾಗಿ ದೊರೆಯುವಂತಾಗಲು ನ್ಯಾಯಾಂಗ ಬದ್ಧತೆ ತೋರಬೇಕಿರುವುದನ್ನು ಈ ಭೇಟಿ ಹೇಳಿದೆ ಎಂದಿದ್ದಾರೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾಲ್ಸಾ) ಆಯೋಜಿಸಿದ್ದ ಕಾನೂನು ನೆರವು ವಿತರಣಾ ಕಾರ್ಯವಿಧಾನಗಳ ಸಬಲೀಕರಣ ಕುರಿತ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾಲ್ಸಾ ಕಾರ್ಯನಿರ್ವಾಹಕ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ವಿಶ್ವನಾಥನ್, ಎಂ ಎಂ ಸುಂದರೇಶ್ ಅವರೊಂದಿಗೆ ಮಣಿಪುರಕ್ಕೆ ತೆರಳಿದ್ದೆವು. ಈ ವೇಲೆ ಮೈತೇಯಿ ಮತ್ತು ಕುಕಿ ನಿರಾಶ್ರಿತ ಶಿಬಿರಗಳಲ್ಲಿದ್ದವರ ಮೊಗದಲ್ಲಿ ನಗು ಕಂಡು ಸಂತಸವಾಯಿತು ಎಂದರು.
ಕಾರ್ಯಕ್ರಮದಲ್ಲಿ ನಿಯೋಜಿತ ಸಿಜೆಐ ಸೂರ್ಯ ಕಾಂತ್ , ನ್ಯಾಯಮೂರ್ತಿ ವಿಕ್ರಮ್ ನಾಥ್ , ಹಿರಿಯ ನ್ಯಾಯಾಧೀಶರು ಅರೆ ಕಾನೂನು ಸ್ವಯಂ ಸೇವಕರು ಮತ್ತಿತರರು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದಲ್ಲಿ, ಸಿಜೆಐ ಗವಾಯಿ ಅವರು ನಾಲ್ಸಾದ ಕಾನೂನು ನೆರವು ರಕ್ಷಣಾ ಸಲಹೆಗಾರ ವ್ಯವಸ್ಥೆ (ಎಲ್ಎಡಿಸಿ) ಡಿಜಿಟಲ್ ಡ್ಯಾಶ್ಬೋರ್ಡ್ ಅನ್ನು ಔಪಚಾರಿಕವಾಗಿ ಬಿಡುಗಡೆ ಮಾಡಿದರು. ಈ ಡ್ಯಾಶ್ಬೋರ್ಡ್ ಜಿಲ್ಲಾ ಮತ್ತು ರಾಜ್ಯ ಕಾನೂನು ಸೇವೆಗಳ ಅಧಿಕಾರಿಗಳಿಂದ ನೈಜ-ಸಮಯದ ಮೇಲ್ವಿಚಾರಣೆ, ದತ್ತಾಂಶ-ಚಾಲಿತ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡುತ್ತದೆ.
ಕಾನೂನು ನೆರವು ಪಡೆಯುವುದು ಸಾಂಕೇತಿಕ ಕ್ರಿಯೆಯಾಗಬಾರದು. ನಿರಾಶ್ರಿತ ವಲಸಿಗರು ಮತ್ತು ಆಘಾತಕ್ಕೀಡಾದವರನ್ನು ಅದು ಸಕ್ರಿಯವಾಗಿ ತಲುಪಬೇಕು ಎಂದರು.
ಸಂವಿಧಾನದ ಅಡಿಯಲ್ಲಿ ನ್ಯಾಯವನ್ನು ಪಡೆಯಲು ಕಾರ್ಯವಿಧಾನದ ಶಿಸ್ತಿನಷ್ಟೇ ಸಹಾನುಭೂತಿಯೂ ಅಗತ್ಯ ಎಂದ ಅವರು " ಕಾನೂನು ನೆರವು ಕೇವಲ ದಾನದ ಕಾರ್ಯವಲ್ಲ , ಬದಲಾಗಿ ನೈತಿಕ ಕರ್ತವ್ಯ" ಎಂಬುದಾಗಿ ತಿಳಿಸಿದರು.
ಕಾನೂನು ಸೇವೆ ನೀಡುವ ವಕೀಲರು, ಅರೆ ಕಾನೂನು ಸ್ವಯಂಸೇವಕರಿಗೆ ವೇತನ ಇಲ್ಲವೇ ಗೌರವ ಧನ ಪಾವತಿ ವಿಳಂಬವಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಅಂತಹ ವಿಳಂಬವು ಕಾನೂನು ನೆರವು ಆಂದೋಲನವನ್ನು ದುರ್ಬಲಗೊಳಿಸುತ್ತವೆ ಎಂದು ಆತಂಕವ್ಯಕ್ತಪಡಿಸಿದರು.
ಸ್ವಯಂಸೇವಕರು ಮತ್ತು ವಕೀಲರನ್ನು ಗೌರವದಿಂದ ನಡೆಸಿಕೊಳ್ಳಬೇಕು ಮತ್ತು ನ್ಯಾಯ ವ್ಯವಸ್ಥೆಯು ಇತರರಿಗೆ ನೀಡುವಂತೆ ಇವರಿಗೂ ಸಮಯಕ್ಕೆ ಸರಿಯಾಗಿ ವೇತನ ನೀಡಬೇಕು ಎಂದು ಅವರು ಹೇಳಿದರು. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ವಿಕ್ರಮ್ ನಾಥ್ ಇದೇ ವೇಳೆ ಮಾತನಾಡಿದರು.