
ಹದಿಹರೆಯದ ವ್ಯಕ್ತಿಯ ಅಪಹರಣ ಪ್ರಕರಣದಲ್ಲಿ ತಮಿಳುನಾಡು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಚ್.ಎಂ. ಜಯರಾಮ್ ಮತ್ತು ಪುರಚ್ಚಿ ಭಾರತಂ ಪಕ್ಷದ ಸಂಸ್ಥಾಪಕ ಹಾಗೂ ಶಾಸಕ ಪೂವೈ ಎಂ. ಜಗನ್ ಮೂರ್ತಿ ಅವರನ್ನು ಮದ್ರಾಸ್ ಹೈಕೋರ್ಟ್ ತೀವ್ರಾಗಿ ತರಾಟೆಗೆ ತೆಗೆದುಕೊಂಡ ಬೆನ್ನಿಗೇ ಎಡಿಜಿಪಿ ಅವರನ್ನು ಸೋಮವಾರ ಬಂಧಿಸಲಾಗಿದ್ದು ಹಲವು ನಾಟಕೀಯ ತಿರುವುಗಳಿಗೆ ಪ್ರಕರಣ ಸಾಕ್ಷಿಯಾಗಿದೆ [ಎಂ ಜಗನ್ಮೂರ್ತಿ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ನಡುವಣ ಪ್ರಕರಣ].
ಶಾಸಕ ಮೂರ್ತಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಪಿ ವೇಲ್ಮುರುಗನ್ ಅವರು ವಿಚಾರಣೆ ನಡೆಸುತ್ತಿದ್ದರು. ಆಗ ʼಶಾಸಕರು ಪರಾರಿಯಾಗಿದ್ದು ಕಾನೂನು ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆʼ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಈ ಹಂತದಲ್ಲಿ ನ್ಯಾಯಾಲಯ ಶಾಸಕ ಮೂರ್ತಿ ಹಾಗೂ ಎಡಿಜಿಪಿ ಇಬ್ಬರೂ ಮಧ್ಯಾಹ್ನ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಆದೇಶಿಸಿತು. ಅಂತೆಯೇ ಶಾಸಕ ಮೂರ್ತಿ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾದರು. ಆಗ ಅವರ ಬಂಧನಕ್ಕೆ ಆದೇಶಿಸದ ಪೀಠ ತನಿಖೆಗೆ ಸಹರಿಸುವಂತೆ ನಿರ್ದೇಶಿಸಿತು. ಇದೇ ವೇಳೆ ಪೊಲೀಸರು ಎಡಿಜಿಪಿ ಜಯರಾಮ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ತಾಕೀತು ಮಾಡಿತು. ಅದರ ಬೆನ್ನಿಗೇ ಎಡಿಜಿಪಿ ಅವರ ಬಂಧನ ನಡೆಯಿತು ಎಂದು ವರದಿಯಾಗಿದೆ.
23 ವರ್ಷದ ಯುವಕನೊಬ್ಬ 21 ವರ್ಷದ ಯುವತಿಯನ್ನು ಆಕೆಯ ಕುಟುಂಬದ ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಕಿರಿಯ ಸಹೋದರನನ್ನು ತನಿಖೆ ನಡೆಸಿದ ಪೊಲೀಸರು ಹಲವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಎಡಿಜಿಪಿ ಹಾಗೂ ಶಾಸಕ ಮೂರ್ತಿ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿತ್ತು.
ವರದಿಗಳ ಪ್ರಕಾರ ಯುವತಿಯ ತಂದೆ ವನರಾಜ, ಸೇವೆಯಿಂದ ವಜಾಗೊಂಡಿದ್ದ ಮಾಜಿ ಮಹಿಳಾ ಪೊಲೀಸ್ ಪೇದೆ ಸೈಬಲ್ ಮಹೇಶ್ವರಿ ಸಹಾಯ ಪಡೆದು ಮದುವೆ ರದ್ದುಗೊಳಿಸಿ ಮಗಳನ್ನು ವಾಪಸ್ ಕರೆತರುವ ಸನ್ನಾಹದಲ್ಲಿದ್ದರು. ಅಂತೆಯೇ ಮಹೇಶ್ವರಿ ಅವರು ಎಡಿಜಿಪಿ ಅವರನ್ನು ಸಂಪರ್ಕಿಸಿದ್ದರು. ಅವರು ಪ್ರಕರಣವನ್ನು ಶಾಸಕರ ಬಳಿ ಕೊಂಡೊಯ್ದಿದ್ದರು.
ಶಾಸಕರ ಸಹಚರರು ಅಣ್ಣನನ್ನು ಅಪಹರಿಸುವ ಸಲುವಾಗಿ ಅವರ ನಿವಾಸಕ್ಕೆ ತೆರಳಿದ್ದರು. ಆದರೆ ಆತ ಮನೆಯಲ್ಲಿ ಇಲ್ಲದ ಕಾರಣ ಟೆರೇಸ್ ಮೇಲೆ ಮಲಗಿದ್ದ ಕಿರಿಯ ಮಗನನ್ನು ಅಪಹರಿಸಿದ್ದರು. ಯುವಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಂತೆಯೇ ಎಡಿಜಿಪಿ ವಾಹನದಲ್ಲಿಯೇ ಹುಡುಗನನ್ನು ಕರೆತಂದು ಬಸ್ಸ್ಟಾಂಡ್ ಒಂದರ ಬಳಿ ಇಳಿಸಿ ಹೋಗಲಾಗಿತ್ತು. ಎಡಿಜಿಪಿ ವಾಹನವನ್ನು ಕಾನ್ಸ್ಟೇಬಲ್ ಒಬ್ಬರು ಓಡಿಸುತ್ತಿದ್ದರು. ಮಹೇಶ್ವರಿ ಮತ್ತು ವನರಾಜ ಇಬ್ಬರೂ ಎಡಿಜಿಪಿ ಅವರ ಅಧಿಕೃತ ವಾಹನದಲ್ಲಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ಮಹೇಶ್ವರಿ, ವನರಾಜ, ಶಾಸಕರ ಪುರಚ್ಚಿ ಭಾರತಂ ಪಕ್ಷದೊಂದಿಗೆ ಸಂಬಂಧ ಹೊಂದಿರುವ ವಕೀಲ ಶರತ್ಕುಮಾರ್ ಸೇರಿದಂತೆ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿತ್ತು. ʼವಕೀಲ ಮತ್ತು ಮಾಜಿ ಪೊಲೀಸ್ ಕಾನ್ಸ್ಟೆಬಲ್ ಮಹೇಶ್ವರಿ ಇಬ್ಬರೂ ತಾವು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದು ಅವರ ಹೇಳಿಕೆಗಳಿಂದಾಗಿ ಶಾಸಕರು ನೇರವಾಗಿ ಪ್ರಕರಣದಲ್ಲಿ ಶಾಮೀಲಾಗಿರುವುದು ಕಂಡುಬಂದಿದೆ. ಆರೋಪಿಗಳಿಂದ ₹7.5 ಲಕ್ಷ ವಶಪಡಿಸಿಕೊಳ್ಳಲಾಗಿದ್ದು ಕಸ್ಟಡಿ ವಿಚಾರಣೆಯಿಂದ ಮಾತ್ರ ಹೆಚ್ಚಿನ ವಿವರ ಬೆಳಕಿಗೆ ಬರಲಿವೆʼ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದರು. ಪ್ರಕರಣದ ಮುಂದಿನ ವಿಚಾರಣೆ ಜೂನ್ 26ರಂದು ನಡೆಯಲಿದೆ.