ವೈಯಕ್ತಿಕ ಪ್ರದರ್ಶನಗಳ ಆಧಾರದ ಮೇಲೆ ಅಂಕಗಳನ್ನು ತುಲನೆ ಮಾಡಿದಷ್ಟು ಸರಳವಲ್ಲ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ದೇಶ ಪ್ರತಿನಿಧಿಸುವ ಕ್ರೀಡಾಪಟುಗಳನ್ನು ಆಯ್ಕೆ ಮಾಡುವುದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ಹೀಗೆ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸುವ ದಾವೆಯಿಂದ, ಆಟಗಾರರ ತಯಾರಿ ಮತ್ತು ಪ್ರದರ್ಶನಕ್ಕೆ ಅಡ್ಡಿಯಾಗಬಹುದು ಎಂದು ನ್ಯಾಯಾಲಯ ಹೇಳಿದೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದ ಆಟಗಾರರ ಪಟ್ಟಿಯಿಂದ ತಮ್ಮ ಹೆಸರನ್ನು ಹೊರಗಿಡುವುದನ್ನು ಪ್ರಶ್ನಿಸಿ ಟೇಬಲ್ ಟೆನಿಸ್ ಆಟಗಾರರಾದ ಸ್ವಸ್ತಿಕಾ ಘೋಷ್ ಮತ್ತು ಮನುಷ್ ಶಾ ಅವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ವಜಾಗೊಳಿಸಿದ್ದಾರೆ.
ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್ಐ) ಆಯ್ಕೆ ಮಾಡಿದವರನ್ನು ಹೈಕೋರ್ಟ್ ನೇಮಿಸಿದ ಆಡಳಿತಗಾರರ ಸಮಿತಿ ಅಂತಿಮಗೊಳಿಸುತ್ತದೆ. ಈ ಸಮಿತಿ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ನಿರ್ಧಾರಕ್ಕೆ ಬಂದಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಹಿಂದಿನ ನಿರ್ಧಾರಕ್ಕೆ ತಲೆದೂಗಿದ ನ್ಯಾಯಮೂರ್ತಿ ಶರ್ಮಾ ಅವರು 'ಸೂಪರ್ ಅಂಪೈರ್', 'ಸೂಪರ್ ರೆಫರಿ' ಅಥವಾ 'ಸೂಪರ್ ಆಯ್ಕೆದಾರ'ನ ಸ್ಥಾನದಲ್ಲಿ ನ್ಯಾಯಾಲಯ ನಿಲ್ಲುವುದು ಸೂಕ್ತವಾಗುವುದಿಲ್ಲ ಎಂದರು.
ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಟಗಾರರ ಆಯ್ಕೆ ಮತ್ತು ಅಂತಿಮಗೊಳಿಸುವಿಕೆಯಲ್ಲಿ ಮಧ್ಯ ಪ್ರವೇಶಿಸಲು ನ್ಯಾಯಾಲಯಗಳಿಗೆ ಪರಿಣತಿ ಇರುವುದಿಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ವಿರೋಧಾಭಾಸ ಅಥವಾ ಅನಿಯಂತ್ರತೆ ಇದ್ದಾಗ ಮಾತ್ರ ಅವು ಮಧ್ಯಪ್ರವೇಶಿಸಬಹುದು ಎಂದು ಅವರು ಹೇಳಿದರು.