ಮನೆಗೆ ಹಣದ ಪೊಟ್ಟಣ ಕಳುಹಿಸಿದ್ದ ಪ್ರಕರಣ: ನ್ಯಾ. ನಿರ್ಮಲ್ ಯಾದವ್ ಅವರನ್ನು ದೋಷಮುಕ್ತಗೊಳಿಸಿದ ಚಂಡೀಗಢ ನ್ಯಾಯಾಲಯ

ಮತ್ತೊಬ್ಬ ನ್ಯಾಯಮೂರ್ತಿ ನಿರ್ಮಲ್‌ಜಿತ್‌ ಕೌರ್ ಅವರ ನಿವಾಸಕ್ಕೆ ₹15 ಲಕ್ಷ ಇದ್ದ ಚೀಲವನ್ನು ತಪ್ಪಾಗಿ ತಲುಪಿಸಲಾಗಿತ್ತು.
Justice Nirmal Yadav
Justice Nirmal Yadav
Published on

ಹದಿನೇಳು ವರ್ಷಗಳ ಹಿಂದೆ ಅಂದರೆ 2008ರಲ್ಲಿ ನ್ಯಾಯಮೂರ್ತಿಗಳೊಬ್ಬರ ಮನೆ ಬಾಗಿಲಲ್ಲಿ ಹಣದ ಪೊಟ್ಟಣ ದೊರೆತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಿರ್ಮಲ್ ಯಾದವ್ ಅವರ ವಿರುದ್ಧ ಸಿಬಿಐ ಹೂಡಿದ್ದ ಪ್ರಕರಣದಲ್ಲಿ ನ್ಯಾ. ನಿರ್ಮಲ್‌ ಯಾದವ್‌ ಅವರನ್ನು ಚಂಡೀಗಢ ನ್ಯಾಯಾಲಯ ಇಂದು (ಶನಿವಾರ) ಖುಲಾಸೆಗೊಳಿಸಿದೆ.

ತೀರ್ಪು ಪ್ರಕಟಿಸಿದ ಹೆಚ್ಚುವರಿ ಸೆಷನ್ಸ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಅಲ್ಕಾ ಮಲಿಕ್ ಅವರು ಪ್ರಕರಣದ ಉಳಿದ ಆರೋಪಿಗಳಾದ ಆರೋಪಿಗಳಾದ ರವೀಂದರ್ ಸಿಂಗ್ ಭಾಸಿನ್, ರಾಜೀವ್ ಗುಪ್ತಾ ಮತ್ತು ನಿರ್ಮಲ್ ಸಿಂಗ್ ಅವರನ್ನು ಸಹ ಖುಲಾಸೆಗೊಳಿಸಲಾಯಿತು.

Also Read
ನ್ಯಾ. ನಿರ್ಮಲ್ ಯಾದವ್ ಮನೆಗೆ ಹಣದ ಪೊಟ್ಟಣ: 17 ವರ್ಷಗಳ ನಂತರ ತೀರ್ಪು ನೀಡಲಿದೆ ಚಂಡೀಗಢ ನ್ಯಾಯಾಲಯ

"ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ " ಎಂದು ವಕೀಲ ಹಿತೇಶ್ ಪುರಿ ಬಾರ್ ಅಂಡ್‌ ಬೆಂಚ್‌ಗೆ ತಿಳಿಸಿದರು. ಪ್ರಕರಣದಲ್ಲಿ ಆರೋಪಿ ನಿರ್ಮಲ್ ಸಿಂಗ್ ಪರ ಅವರು ವಕಾಲತ್ತು ವಹಿಸಿದ್ದರು.

ಹೈಕೋರ್ಟ್‌ ಆಗಿನ ನ್ಯಾಯಮೂರ್ತಿಯಾಗಿದ್ದ ನಿರ್ಮಲ್‌ಜಿತ್‌ ಕೌರ್‌ ಅವರ ನಿವಾಸಕ್ಕೆ ₹15 ಲಕ್ಷ ಮೌಲ್ಯದ ಪೊಟ್ಟಣವನ್ನು ತಲುಪಿಸಲಾಗಿತ್ತು. ಈ ವಿಷಯವನ್ನು ನ್ಯಾಯಮೂರ್ತಿ ಕೌರ್ ಅವರ ಪೇದೆ ಚಂಡೀಗಢ ಪೊಲೀಸರಿಗೆ ವರದಿ ಮಾಡಿದ್ದರು. ಎಫ್‌ಐಆರ್‌ ದಾಖಲಾಗಿತ್ತು.

ನಂತರ ಪಂಜಾಬ್‌ನ ಗವರ್ನರ್ ಮತ್ತು ಕೇಂದ್ರಾಡಳಿತ ಪ್ರದೇಶದ ಚಂಡೀಗಢದ ಆಡಳಿತಾಧಿಕಾರಿಯಾಗಿದ್ದ ಜನರಲ್ (ನಿವೃತ್ತ) ಎಸ್‌ ಎಫ್ ರೊಡ್ರಿಗ್ಸ್‌ ಅವರ ಆದೇಶದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.

ಪ್ರಾಸಿಕ್ಯೂಷನ್ ಪ್ರಕಾರ, ಹರಿಯಾಣದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಂಜೀವ್ ಬನ್ಸಾಲ್ ಅವರ ಗುಮಾಸ್ತರೊಬ್ಬರು ನ್ಯಾಯಮೂರ್ತಿ ಯಾದವ್‌ ಅವರ ಮನೆಗೆ ಹಣ ನೀಡಲು ಮುಂದಾಗಿದ್ದರು. ಹೆಸರುಗಳಲ್ಲಿನ ಗೊಂದಲದಿಂದಾಗಿ ಅದು ನ್ಯಾ. ಕೌರ ಅವರ ನಿವಾಸ ತಲುಪಿತ್ತು.

2010 ರಲ್ಲಿ, ನ್ಯಾಯಮೂರ್ತಿ ಯಾದವ್ ಅವರನ್ನು ಉತ್ತರಾಖಂಡ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು, ಒಂದು ವರ್ಷದ ನಂತರ ಅವರು ನಿವೃತ್ತರಾದರು. ಅದೇ ವರ್ಷ ಅವರು ಸೇರಿದಂತೆ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. 2014ರಲ್ಲಿ, ವಿಶೇಷ ನ್ಯಾಯಾಲಯ ಐದು ಆರೋಪಿಗಳ ವಿರುದ್ಧ ಆರೋಪ ನಿಗದಿಪಡಿಸಿತು.

ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಬನ್ಸಾಲ್ ಡಿಸೆಂಬರ್ 2016 ರಲ್ಲಿ ನಿಧನರಾದರು. ಪರಿಣಾಮವಾಗಿ, ಅವರ ವಿರುದ್ಧದ ವಿಚಾರಣೆಯನ್ನು ಜನವರಿ 2017ರಲ್ಲಿ ಕೈಬಿಡಲಾಯಿತು.

Also Read
ನ್ಯಾ. ವರ್ಮಾ ವರ್ಗಾವಣೆಗೆ ಕೇಂದ್ರ ಅಧಿಸೂಚನೆ: ಕೆಲಸ ವಹಿಸದಂತೆ ಅಲಾಹಾಬಾದ್ ಹೈಕೋರ್ಟ್‌ಗೆ ಸುಪ್ರೀಂ ನಿರ್ದೇಶನ

2016ರಲ್ಲಿ ನ್ಯಾಯಮೂರ್ತಿ ಕೌರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣಾ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ಪ್ರಕರಣವನ್ನು ಹೀಗೆ ವಿವರಿಸಿದ್ದರು: "ನಾನು ಹೈಕೋರ್ಟ್‌ಗೆ ಪದೋನ್ನತಿ ಪಡೆದು ಕೇವಲ 33 ದಿನಗಳಾಗಿತ್ತು.  ಮನೆಯಲ್ಲಿದ್ದ ನನಗೆ ಜವಾನ ಬಂದು ದೆಹಲಿಯಿಂದ ಪತ್ರ ಬಂದಿದೆ ಎಂದರು. ಒಡೆದು ನೋಡಿ ಎಂದೆ. ಆಗ ಅವರು ಅದನ್ನು ತೆರೆಯಲು ತಿಣುಕಾಡುತ್ತಿದ್ದರು. ಆಗ ಅದು ಪತ್ರವಲ್ಲ ಎಂದು ನನಗೆ ಅನ್ನಿಸಿತು. ಬೇಗನೆ ಒಡೆಯಿರಿ ಎಂದೆ. ಆಗ ಅವರು ಅದನ್ನು ಹರಿದಾಗ ಅದರಲ್ಲಿ ಕರೆನ್ಸಿ ನೋಟುಗಳಿದ್ದವು. ಒಂದು ಕ್ಷಣವೂ ತಡ ಮಾಡಿದೆ ಅದನ್ನು ಕೊಟ್ಟವರನ್ನು ಹಿಡಿಯಿರಿ ಎಂದು ಹೇಳಿದೆ" ಎಂದು ವಿವರಿಸಿದ್ದರು. 

ಕೆಲವೇ ನಿಮಿಷಗಳಲ್ಲಿ ಬನ್ಸಾಲ್ ಅವರು ತಮಗೆ ಕರೆ ಮಾಡಿ ಹಣ ತಪ್ಪಾಗಿ ನಿಮ್ಮ ಮನೆ ಬಾಲಿಗೆ ಬಂದಿದೆ ಎಂದರು. ಅದು ವಾಸ್ತವವಾಗಿ ನಿರ್ಮಲ್‌ ಸಿಂಗ್‌ ಎಂಬುವವರಿಗೆ ಸೇರಬೇಕಿತ್ತು ಎಂದರು. ಆದರೆ ನಾನು ಅಷ್ಟರಲ್ಲಾಗಲೇ ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದು ತಿಳಿಸಿದ್ದರು.

Kannada Bar & Bench
kannada.barandbench.com