ಯಮುನಾ ದಂಡೆಯ ಅತಿಕ್ರಮಣ ತೆರವುಗೊಳಿಸಲು ಡಿಡಿಎಗೆ ದೆಹಲಿ ಹೈಕೋರ್ಟ್ ಆದೇಶ

ವಿವಿಧ ಸರ್ಕಾರಿ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಯಮುನಾ ನದಿ ದಂಡೆಯಲ್ಲಿನ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲು ಡಿಡಿಎ ಉಪಾಧ್ಯಕ್ಷರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ ನ್ಯಾಯಾಲಯ.
Yamuna river
Yamuna river
Published on

ಯಮುನಾ ನದಿ ದಂಡೆ, ನದಿಪಾತ್ರ ಮತ್ತು ನದಿಗೆ ಹರಿಯುವ ಕಾಲುವೆಗಳ ಮೇಲಿನ ಎಲ್ಲಾ ಅತಿಕ್ರಮಣಗಳನ್ನು ಮತ್ತು ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್‌ ಈಚೆಗೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಡಿಡಿಎ) ಆದೇಶಿಸಿದೆ [ಶಬ್‌ನಮ್‌ ಬರ್ನಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]

ಯಮುನೆಯ ತೀರದಿಂದ ಅಕ್ರಮ ನಿರ್ಮಿತಿಗಳನ್ನು ತೆರವುಗೊಳಿಸಲು ದೆಹಲಿ ಮಹಾನಗರ ಪಾಲಿಕೆ (MCD),  ಪೊಲೀಸ್ ಇಲಾಖೆ, ಮೆಟ್ರೋ ಮತ್ತಿತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಡಿಡಿಎ ಉಪಾಧ್ಯಕ್ಷರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.

Also Read
ಎಫ್ಐಆರ್ ರದ್ದತಿ ವೇಳೆ 45 ದಿನ ಯಮುನಾ ನದಿ ಸ್ವಚ್ಛಗೊಳಿಸುವ ಷರತ್ತು ವಿಧಿಸಿದ ದೆಹಲಿ ಹೈಕೋರ್ಟ್

ನ್ಯಾಯಾಲಯದ ಆದೇಶ  ಅನುಪಾಲನೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಸೆಪ್ಟೆಂಬರ್ 9ರಂದು ವಿಚಾರಣೆ ನಡೆಯಲಿದೆ.

ಯಮುನಾ ನದಿ ದಂಡೆಯಲ್ಲಿನ ಅಕ್ರಮ ನಿರ್ಮಾಣವನ್ನು ಕೆಡವಲು ನಿರ್ದೇಶನ ನೀಡುವಂತೆ ಕೋರಿ ಶಬ್‌ನಮ್‌ ಬರ್ನಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ. ಇನ್ನು ಮುಂದೆ ನದಿ ದಡ ಮತ್ತು ಜಲಾನಯನ ಪ್ರದೇಶಗಳನ್ನು ಒತ್ತುವರಿ ಮಾಡದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

Also Read
ಗಂಗಾ-ಯಮುನಾ ನಡುವಿನ ಭೂಮಿ ಒಡೆತನ ತನ್ನದು ಎಂದ ವ್ಯಕ್ತಿಗೆ ₹10,000 ದಂಡ ವಿಧಿಸಿದ ದೆಹಲಿ ಹೈಕೋರ್ಟ್

ನದಿಯ ಪ್ರವಾಹ ಪ್ರದೇಶ ವಲಯವು ನಿರ್ಮಾಣ ಚಟುವಟಿಕೆ ನಿಷಿದ್ದ ವಲಯವಾಗಿದ್ದು ನದಿ ಪರಿಸರದ ಬಹುಮುಖ್ಯ ಭಾಗವಾಗಿದೆ ಎಂದು ಸರ್ಕಾರದ ಅಧಿಕಾರಿಗಳ ಪರ ವಕೀಲರು ಪೀಠದ ಗಮನಕ್ಕೆ ತಂದರು. ಈ ಪ್ರದೇಶದಲ್ಲಿನ ಅತಿಕ್ರಮಣದಿಂದಾಗಿ ನೀರು ಪಕ್ಕದ ಪ್ರದೇಶಗಳಿಗೆ ನುಗ್ಗುತ್ತದೆ ಎಂಬುದನ್ನು ಅಧಿಕಾರಿಗಳು ಒಪ್ಪಿಕೊಂಡರು.

ವಾದ ಆಲಿಸಿದ ಹೈಕೋರ್ಟ್‌ ಯಮುನಾ ನದಿ ಮತ್ತು ಅದರ ಸಮೀಪದ ಪ್ರದೇಶಗಳಲ್ಲಿನ ಎಲ್ಲಾ ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ಆದೇಶಿಸಿತು.

Kannada Bar & Bench
kannada.barandbench.com