ಕೆಂಪು ಕೋಟೆ ಸ್ವಾಧೀನ ಕೋರಿ ಬಹದ್ದೂರ್ ಷಾ ಜಫರ್ ಉತ್ತರಾಧಿಕಾರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಸುಲ್ತಾನಾ ಬೇಗಂ ಅವರು ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್‌ ಏಕಸದಸ್ಯ ಪೀಠ ವಜಾಗೊಳಿಸಿದ ಬಳಿಕ ಪ್ರಸ್ತುತ ಅರ್ಜಿ ಸಲ್ಲಿಸಲು ಎರಡೂವರೆ ವರ್ಷ ವಿಳಂಬವಾಗಿರುವುದರಿಂದ ಕಾಲಮಿತಿಯ ಕಾರಣಕ್ಕೆ ನಿರ್ಬಂಧಿಸಲಾಗಿದೆ ಎಂದ ಪೀಠ.
Bahadur Shah Zafar, Red Fort
Bahadur Shah Zafar, Red Fort
Published on

ದೆಹಲಿಯ ಐತಿಹಾಸಿಕ ಕೆಂಪುಕೋಟೆಯನ್ನು ತಮ್ಮ ಸ್ವಾಧೀನಕ್ಕೆ ನೀಡುವಂತೆ ಕೊನೆಯ ಮೊಘಲ್‌ ಸಾಮ್ರಾಟ ಬಹದ್ದೂರ್ ಷಾ ಜಫರ್ ಅವರ ಉತ್ತರಾಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಈಚೆಗೆ ತಿರಸ್ಕರಿಸಿದೆ.

ಸುಲ್ತಾನಾ ಬೇಗಂ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ವಜಾಗೊಳಿಸಿದ ಬಳಿಕ ಪ್ರಸ್ತುತ ಅರ್ಜಿ ಸಲ್ಲಿಸಲು ಎರಡೂವರೆ ವರ್ಷ ವಿಳಂಬವಾಗಿರುವುದರಿಂದ ಕಾಲಮಿತಿಯ ಕಾರಣಕ್ಕೆ ನಿರ್ಬಂಧಿಸಲಾಗಿದೆ ಎಂದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಅರ್ಜಿ ವಜಾಗೊಳಿಸಿತು.

Also Read
ತಾನು ಮೊಘಲರ ಉತ್ತರಾಧಿಕಾರಿ, ಕೆಂಪುಕೋಟೆ ತನಗೆ ಸೇರಬೇಕೆಂದು ಕೋರಿದ್ದ ಮಹಿಳೆಯ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ವಿಳಂಬ ಮನ್ನಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಏಕಸದಸ್ಯ ಪೀಠದ ಆದೇಶ ಪ್ರಕಟವಾಗಿ 900 ದಿನಗಳ ಬಳಿಕ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ತನ್ನ ಅನಾರೋಗ್ಯ ಮತ್ತು ಮಗಳ ನಿಧನದಿಂದಾಗಿ ವಿಳಂಬ ಉಂಟಾಯಿತು ಎಂಬ ಬೇಗಂ ಅವರ ಮನವಿಯನ್ನು ಪೀಠ ತಿರಸ್ಕರಿಸಿದೆ.

ತಾನು ಬಹದ್ದೂರ್ ಷಾ ಜಫರ್ II ಅವರ ಮರಿ ಮೊಮ್ಮಗನ ವಿಧವೆ ಪತ್ನಿ ಎಂದು ಉಲ್ಲೇಖಿಸಿ ಬೇಗಂ ಅವರು 2021ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

1857ರಲ್ಲಿ ನಡೆದ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ತನ್ನ ಕುಟುಂಬದ ಆಸ್ತಿಯನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ವಂಚನೆಯಿಂದ ಸ್ವಾಧೀನಪಡಿಸಿಕೊಂಡಿತು. ಬಹದ್ದೂರ್ ಷಾ ಜಫರ್ ಅವರನ್ನು ಗಡಿಪಾರು ಮಾಡಿ ಕೆಂಪುಕೋಟೆಯನ್ನು ಮೊಘಲರಿಂದ ಕಸಿದುಕೊಳ್ಳಲಾಯಿತು. ಈಗ ಭಾರತ ಸರ್ಕಾರ ಕೂಡ ಅದೇ ಕುಕೃತ್ಯದಲ್ಲಿ ತೊಡಗಿದೆ. ಹೀಗಾಗಿ ಭಾರತ ಸರ್ಕಾರದಿಂದ ತನಗೆ ಆಸ್ತಿ ದೊರೆಯುವಂತೆ ಮಾಡಬೇಕು ಮತ್ತು ಪರಿಹಾರ ಒದಗಿಸಬೇಕು ಎಂದು ಬೇಗಂ ಕೋರಿದ್ದರು.

Also Read
ಕೆಂಪುಕೋಟೆ ಮೇಲಿನ ದಾಳಿ: ಮರಣ ದಂಡನೆ ಪ್ರಶ್ನಿಸಿದ್ದ ಎಲ್‌ಇಟಿ ಉಗ್ರನ ಮರುಪರಿಶೀಲನಾ ಅರ್ಜಿ ವಜಾ ಮಾಡಿದ ಸುಪ್ರೀಂ

ಆದರೆ ನ್ಯಾಯಾಲಯದ ಮೆಟ್ಟಿಲೇರಲು ಕುಟುಂಬ  164 ವರ್ಷಗಳಷ್ಟು ವಿಳಂಬ ಮಾಡಿದ್ದೇಕೆ ಎಂದು ಈ ಹಿಂದೆ ಪ್ರಶ್ನಿಸಿದ್ದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿತ್ತು. ದಿವಂಗತ ಬಹದ್ದೂರ್ ಷಾ ಜಫರ್ II ಅವರ ಆಸ್ತಿಯನ್ನು ಈಸ್ಟ್ ಇಂಡಿಯಾ ಕಂಪನಿ ವಂಚನೆ ಮೂಲಕ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದೆ ಎಂಬ ಅರ್ಜಿದಾರರ ವಾದವನ್ನು ಮನ್ನಿಸಬಹುದಾದರೂ ಅರ್ಜಿದಾರರ ಪೂರ್ವಿಕರಿಗೆ ಈ ಸ್ವಾಧೀನದ ಬಗ್ಗೆ ಅರಿವಿತ್ತು ಎಂದು ತಿಳಿದೂ ಅರ್ಜಿ ಸಲ್ಲಿಸಲು  164 ವರ್ಷಗಳಷ್ಟು ವಿಳಂಬ ಉಂಟಾಗಿದೆ. ಈಗ ಹೇಗೆ ಅರ್ಜಿ ನಿರ್ವಹಿಸಬಹುದು ಎಂದು ನ್ಯಾಯಾಲಯ ಪ್ರಶ್ನಿಸಿತ್ತು.

ನಂತರ ಆಕೆ ಪ್ರಸ್ತುತ ಮೇಲ್ಮನವಿ ಸಲ್ಲಿಸಿದ್ದರು. ಇದೀಗ  ವಿಳಂಬದ ಹಿನ್ನೆಲೆಯಲ್ಲಿ ಈ ಅರ್ಜಿ ಕೂಡ ವಜಾಗೊಂಡಿದೆ.  

Kannada Bar & Bench
kannada.barandbench.com