ಗುಜರಾತ್‌ ಕೋಮು ಗಲಭೆ: ಪ್ರಧಾನಿ ಮೋದಿಯವರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್‌ ಚಿಟ್‌ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌, ದಿನೇಶ್‌ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್‌ ಅವರನ್ನುಳ್ಳ ತ್ರಿಸದಸ್ಯ ಪೀಠವು ತೀರ್ಪು ಪ್ರಕಟಿಸಿತು.
PM Narendra Modi, Supreme Court
PM Narendra Modi, Supreme Court

ಗುಜರಾತ್ ಕೊಮು ಗಲಭೆಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ವಿಶೇಷ ತನಿಖಾ ದಳವು (ಎಸ್‌ಐಟಿ) ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಲೀನ್‌ ಚಿಟ್‌ ನೀಡಿದ್ದನ್ನು ಆಕ್ಷೇಪಿಸಿ ಕಾಂಗ್ರೆಸ್‌ ಮಾಜಿ ಸಂಸದ ದಿವಂಗತ ಎಹ್ಸಾನ್‌ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಮನವಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಆ ಮೂಲಕ 2002ರ ಗುಜರಾತ್‌ ಕೋಮು ಗಲಭೆಗಳ ವೇಳೆ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್‌ ಚಿಟ್‌ ಅನ್ನು ಎತ್ತಿ ಹಿಡಿದಿದೆ [ಜಾಕಿಯಾ ಜಾಫ್ರಿ ವರ್ಸಸ್‌ ಗುಜರಾತ್‌ ಸರ್ಕಾರ].

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌, ದಿನೇಶ್‌ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್‌ ಅವರನ್ನುಳ್ಳ ತ್ರಿಸದಸ್ಯ ಪೀಠವು ತೀರ್ಪು ಪ್ರಕಟಿಸಿತು.

"ಎಸ್‌ಐಟಿ ತನಿಖೆಯ ವರದಿಯನ್ನು ಒಪ್ಪಿಕೊಂಡ ಹಾಗೂ ಮನವಿಯನ್ನು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಮ್ಯಾಜಿಸ್ಟ್ರೇಟ್ ನಿರ್ಧಾರವನ್ನು ನಾವು ಎತ್ತಿ ಹಿಡಿಯುತ್ತೇವೆ. ಈ ಮನವಿಯು ಅರ್ಹತೆಯನ್ನು ಹೊಂದಿಲ್ಲವಾಗಿದ್ದು ತಿರಸ್ಕರಿಸಲಾಗಿದೆ," ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ. ಡಿಸೆಂಬರ್‌ 8, 2021ರಂದು ನ್ಯಾಯಾಲಯವು ಪ್ರಕರಣದ ಕುರಿತಾದ ತೀರ್ಪನ್ನು ಕಾಯ್ದಿರಿಸಿತ್ತು.

ಗುಜರಾತ್‌ ಕೋಮು ಗಲಭೆ ವೇಳೆ ನಡೆದ ಕುಖ್ಯಾತ ಗುಲ್ಬರ್ಗ್‌ ಸೊಸೈಟಿ ಮಾರಣಹೋಮದ ವೇಳೆ ಕಾಂಗ್ರೆಸ್‌ ಸಂಸದ ಎಹ್ಸಾನ್‌ ಜಾಫ್ರಿ ಅವರನ್ನು ಹತ್ಯೆಗೈಯಲಾಗಿತ್ತು.

ಗುಜರಾತ್‌ ಗಲಭೆಗಳಿಗೆ ಸಂಬಂಧಿಸಿದಂತೆ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಕ್ಲೀನ್‌ ಚಿಟ್‌ ನೀಡಿದ್ದ ವಿಶೇಷ ತನಿಖಾ ದಳದ ವರದಿಯನ್ನು ಪ್ರಕರಣದ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಒಪ್ಪಿಕೊಂಡಿತ್ತು. ಇದನ್ನು ಆಕ್ಷೇಪಿಸಿದ್ದ ಜಾಕಿಯಾ ಅವರ ಮನವಿಯನ್ನು ತಿರಸ್ಕರಿಸಿತ್ತು.

ಈ ತೀರ್ಪಿನ ವಿರುದ್ಧ ಗುಜರಾತ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿತ್ತು. ಹೈಕೋರ್ಟ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ತೀರ್ಪನ್ನು 2017ರಲ್ಲಿ ಎತ್ತಿ ಹಿಡಿದಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿತ್ತು.

Also Read
[ಗುಜರಾತ್ ಗಲಭೆ] ಮೋದಿಗೆ ಕ್ಲೀನ್ ಚಿಟ್ ಪ್ರಶ್ನಿಸಿ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿ: ಆದೇಶ ಕಾಯ್ದಿರಿಸಿದ ಸುಪ್ರೀಂ

ಸುಪ್ರೀಂ ಕೋರ್ಟ್‌ನಲ್ಲಿ ಜಾಕಿಯಾ ಪರ ವಾದಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಪ್ರಮುಖವಾಗಿ ಈ ಕೆಳಗಿನ ಅಂಶಗಳನ್ನು ಮುಂದಿಟ್ಟಿದ್ದರು:

  • ಎಸ್‌ಐಟಿ ಲಭ್ಯವಿರುವ ಎಲ್ಲ ಅಂಶಗಳನ್ನು ಪರಿಶೀಲಿಸಿಲ್ಲ. ಅದರ ತನಿಖೆ ಪಕ್ಷಪಾತವನ್ನು ತೋರಿಸುತ್ತದೆ. ದ್ವೇಷವನ್ನು ಪ್ರಚಾರ ಮಾಡಲು ಸರ್ಕಾರ ಸಹಾಯ ಮಾಡಿದೆ. ಕೋಮುಸೌಹಾರ್ದ ಕದಡುವಂತಹ ಕರಪತ್ರಗಳ ಬಗ್ಗೆ ಎಸ್‌ಐಟಿ ಗಮನಿಸಲಿಲ್ಲ.

  • ಆರೋಪಿ ಪೊಲೀಸರು, ಅಧಿಕಾರಿಗಳು, ರಾಜಕಾರಣಿಗಳು ಮೊಬೈಲ್‌ ಸಂದೇಶ ಹಂಚಿಕೊಂಡಿದ್ದು ಅವನ್ನು ವಶಪಡಿಸಿಕೊಂಡಿಲ್ಲ. ಆ ಕುರಿತು ತನಿಖೆ ನಡೆಸಿಲ್ಲ.

  • ಕೆಲವು ಗುಜರಾತಿ ಪತ್ರಿಕೆಗಳು ಕೋಮುದ್ವೇಷವನ್ನು ಹರಡಿವೆ. ಭಾವನಗರದ ಪತ್ರಿಕೆಯೊಂದು ಪ್ರತೀಕಾರ ತೀರಿಸಿಕೊಳ್ಳಲು ಹಿಂದೂಗಳು ಮತ್ತು ಹಿಂದೂ ಸಂಘಟನೆಗಳಿಗೆ ಕರೆ ನೀಡಿತು, ಆದರೆ ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

  • ಉನ್ನತ ಪೊಲೀಸ್‌ ಅಧಿಕಾರಿಗಳು ಸಲ್ಲಿಸಿದ ವರದಿಗೆ ಗೃಹ ಸಚಿವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

  • ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೃಷ್ಣ ಐಯ್ಯರ್‌ ಅವರ ನೇತೃತ್ವದ ಕಳಕಳಿಯುಳ್ಳ ನಾಗರಿಕರ ನ್ಯಾಯಮಂಡಳಿ ಸಲ್ಲಿಸಿದ್ದ ಗಲಭೆಯ ಕುರಿತಾದ ವರದಿಗಳ ಪ್ರಮುಖ ಭಾಗಗಳನ್ನು ಸಿಬಲ್‌ ತಮ್ಮ ವಾದಕ್ಕೆ ಪೂರಕವಾಗಿ ಉಲ್ಲೇಖಿಸಿದರು.

Also Read
ಗುಜರಾತ್ ಗಲಭೆ: ಖುದ್ದು ಎಸ್ಐಟಿಯನ್ನೇ ತನಿಖೆಗೊಳಪಡಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ ಜಾಕಿಯಾ ಜಾಫ್ರಿ

ಎಸ್‌ಐಟಿ ಪರ ವಾದ ಮಂಡಿಸಿದ್ದ ಮುಕುಲ್‌ ರೋಹಟ್ಗಿ ಅವರು ಈ ಕೆಳಗಿನ ಅಂಶಗಳ ಮೂಲಕ ಎಸ್‌ಐಟಿ ನಡೆಯನ್ನು ಸಮರ್ಥಿಸಿದ್ದರು:

  • ಮೃತ ದೇಹಗಳನ್ನು ಮೆರವಣಿಗೆ ಮಾಡಲಾಯಿತು ಎಂಬ ಸಿಬಲ್ ಅವರ ವಾದ ಒಪ್ಪುವಂತಹುದ್ದಲ್ಲ. ಸರಿಯೋ ತಪ್ಪೋ, ತಮ್ಮ ಬೆಂಬಲಿಗರನ್ನು ಕೊಂದಿದ್ದರಿಂದ ವಿಎಚ್‌ಪಿ ಕಳವಳಗೊಂಡಿತ್ತು. ರಾತ್ರಿ 12ರಿಂದ 3ಗಂಟೆಯವರೆಗೆ ಮೆರವಣಿಗೆ ನಡೆಸಲು ಸಾಧ್ಯವೇ? ? ಸತ್ತ 58 ಜನರಲ್ಲಿ 33 ಅಹಮದಾಬಾದ್‌ಗೆ ಸೇರಿದವರಾಗಿದ್ದರಿಂದ ಅವರ ಸಂಬಂಧಿಕರಿಗೆ ಮೃತದೇಹಗಳನ್ನು ಹಸ್ತಾಂತರಿಸಲು ಸುಲಭವಾಗಲಿ ಎಂದು ಅವುಗಳನ್ನು ಅಲ್ಲಿಗೆ ಕರೆತರಲಾಗುತ್ತಿತ್ತು.

  • ಗೃಹ ಸಚಿವಾಲಯ ಶ್ರೀಕುಮಾರ್‌ ಅವರ ವರದಿಗೆ ಪ್ರತಿಕ್ರಿಯಿಸಲಿಲ್ಲ ಎಂಬ ವಾದದಲ್ಲಿ ಹುರುಳಿಲ್ಲ. ಮಧ್ಯಾಹ್ನ 2:30 ಕ್ಕೆ ಗೃಹ ಸಚಿವಾಲಯಕ್ಕೆ ಫ್ಯಾಕ್ಸ್ ಕಳುಹಿಸಲಾಗಿದೆ ... ಸೇನೆ ರಾತ್ರಿ 11:30 ರ ಹೊತ್ತಿಗೆ ಬರಲು ಆರಂಭಿಸಿತು. ಸೇನೆಯನ್ನು ಗಡಿಯಿಂದ ಏರ್ ಲಿಫ್ಟ್ ಮಾಡಲಾಯಿತು. ಸಂಸತ್‌ ದಾಳಿ ನಡೆದು ಒಂದೆರಡು ತಿಂಗಳು ಕಳೆದಿತ್ತು.

  • 2009ರಲ್ಲಿ ಎಸ್‌ಐಟಿ ರಚಿಸಲಾಗಿದ್ದು, 2002ರ ಮೊಬೈಲ್‌ಗಳನ್ನು ಆಗಲೂ ವಶದಲ್ಲಿಟ್ಟುಕೊಳ್ಳಬೇಕು ಎಂದು ನಿರೀಕ್ಷಿಸುವುದು ಸಮಂಜಸವಲ್ಲ. ಹಾಗೊಂದು ವೇಳೆ ಏನನ್ನಾದರೂ ಮರೆಮಾಚಬೇಕೆಂದಿದ್ದರೆ ಎಸ್‌ಐಟಿ ಕ್ಯಾಬಿನೆಟ್‌ ಸಚಿವೆ ಮಾಯಾಬೆನ್‌ ಹಾಗೂ ಪೊಲೀಸ್‌ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸುವ ಧೈರ್ಯ ಮಾಡುತ್ತಿರಲಿಲ್ಲ. ಪ್ರಕರಣದಲ್ಲಿ ಮಾಯಾಬೆನ್‌ ಕೊಡ್ನಾನಿ ಅವರು ದೋಷಿಯೆಂದು ತೀರ್ಮಾನವಾಗಿದ್ದಲ್ಲದೆ ಶಿಕ್ಷೆಯೂ ಅನುಭವಿಸುವಂತಾಯಿತು.

  • ತೆಹಲ್ಕಾ ಟೇಪ್‌ಗಳ ಅಸಲಿತನವನ್ನು ಪ್ರಶ್ನಿಸಲಾಗಿಲ್ಲ ಎಂಬುದು ನಿಜವಾದರೂ, ಕುಟುಕು ಕಾರ್ಯಾಚರಣೆಯ ವಿಷಯವನ್ನು ನ್ಯಾಯಾಲಯವು ತಿರಸ್ಕರಿಸಿದೆ. ಅದರ ಹೊರತಾಗಿಯೂ, ಕುಟುಕು ಕಾರ್ಯಾಚರಣೆ ನಡೆಸಿದ ಪತ್ರಕರ್ತ ಆಶಿಶ್ ಖೇತನ್ ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನೂ ಎಸ್‌ಐಟಿ ಪರಿಶೀಲಿಸಿತು.

  • ದೂರಿನ ಉದ್ದಕ್ಕೂ ಹಿಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಉಲ್ಲೇಖಿಸಲಾಗಿದೆ. ಆದರೆ, ಅವರನ್ನು ಒಳಗೊಂಡ ಯಾವುದೇ ಭಾಗವನ್ನು ಸಿಬಲ್‌ ಅವರು ಓದಲಿಲ್ಲ.

Related Stories

No stories found.
Kannada Bar & Bench
kannada.barandbench.com