

ಧರ್ಮಸ್ಥಳದಲ್ಲಿನ ಅಸಹಜ ಸಾವಿನ ತನಿಖೆಗೆ ಸಂಬಂಧಿಸಿದಂತೆ ಕಾಲ್ಪನಿಕ ವಿಚಾರಗಳನ್ನು ಆಧರಿಸಿ, ಕೃತಕ ಬುದ್ದಿಮತ್ತೆ ನೆರವಿನಿಂದ ವಿಡಿಯೊ ಮಾಡಿ ಹರಿಯಬಿಟ್ಟಿರುವ ಸಂಬಂಧ ಯೂಟ್ಯೂಬರ್ ಎಂ ಡಿ ಸಮೀರ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ.
ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಎಂ ಡಿ ಸಮೀರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಧರ್ಮಸ್ಥಳ ಠಾಣೆಯಲ್ಲಿ ಸಮೀರ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ತಡೆ ನೀಡಿತು. ಅಲ್ಲದೇ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಏಪ್ರಿಲ್ 22ಕ್ಕೆ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ, ಸಮೀರ್ ಪರ ವಕೀಲೆ ಕೆ ಅಕ್ಷತಾ ಶೆಟ್ಟಿ ಅವರು “ಯೂಟ್ಯೂಬ್ ಚಾನಲ್ ಓಪನ್ ಮಾಡಿದಾಗ, ಸಮೀರ್ ವಿಡಿಯೊ ಬಂದಿತ್ತು. ಸುಳ್ಳುಗಳನ್ನು ಬಿತ್ತರಿಸಿದ್ದಾರೆ ಎಂದು ಹೇಳಲಾಗಿದೆ. ಸಮೀರ್ ಸಾರ್ವಜನಿಕರ ನೆಮ್ಮದಿಗೆ ಹಾಳು ಮಾಡಿದ್ದಾನೆ ಎಂದು ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ” ಎಂದರು.
ಆಗ ಪೀಠವು “(ಸಮೀರ್ಗೆ) ಸುಮ್ಮನೆ ಇರಲು ಆಗುವುದಿಲ್ಲವೇ? ಸುಮ್ಮನೆ ಇರಲು ಏಕೆ ಆಗಲ್ಲ? ನೀವು ಯಾರ ನೆಮ್ಮದಿ ಹಾಳು ಮಾಡಿದ್ದೀರಿ ಎಂದು ಗೊತ್ತಿದೆ (ನಗು). ಸಾರ್ವಜನಿಕರ ನೆಮ್ಮದಿಯಂಥೂ ಅಲ್ಲ. ಅವರದು ಯಾಕೆ? ಅವರ ನೆಮ್ಮದಿ, ನೆಮ್ಮದಿಯಲ್ಲವೇ?” ಎಂದು ಮಾರ್ಮಿಕವಾಗಿ ನುಡಿಯಿತು.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕಿ ಅಸ್ಮಾ ಕೌಸರ್ “ಸಮೀರ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣವಲ್ಲ. ಧರ್ಮಸ್ಥಳ ಪ್ರಕರಣದ ತನಿಖೆಗೆ ಸಂಬಂಧಿಸಿದ್ದಾಗಿದೆ. ಸಾಕ್ಷಿ ದೂರುದಾರನನ್ನು ಸಂರಕ್ಷಿಸಿದ್ದ ಪ್ರಕರಣ ಇದಾಗಿದ್ದು, ಅದಾಗ್ಯೂ ಕೃತಕ ಬುದ್ದಿಮತ್ತೆ ನೆರವಿನಿಂದ ಸಮೀರ್ ವಿಡಿಯೊ ಮಾಡಿದ್ದಾರೆ. ಕೆಲವು ಶವಗಳನ್ನು ಅಲ್ಲಿ ಹೂಳಲಾಗಿದ್ದು, ಕೆಲವನ್ನು ಅಲ್ಲಿ ಸಂಸ್ಕಾರ ಮಾಡಲಾಗಿದೆ ಎಂದು ವಿಡಿಯೊದಲ್ಲಿ ತೋರಿಸಲಾಗಿದೆ” ಎಂದರು.
“ಸಮೀರ್ ವಿರುದ್ಧ ಐದು ಪ್ರಕರಣ ದಾಖಲಾಗಿವೆ. ತನಿಖೆ ನಡೆಯಲಿ, ಸತ್ಯ ಹೊರಬರಲಿದೆ. ಇದೇ ಮೊದಲ ಬಾರಿಗೆ ಸಮೀರ್ ಈ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರನ್ನು ದಾರಿ ತಪ್ಪಿಸಿ, ದ್ವೇಷದ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ್ದಾನೆ” ಎಂದರು.
ಪ್ರಕರಣದ ಹಿನ್ನೆಲೆ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ತನಿಖೆಗೆ ಸಂಬಂಧಿಸಿದ ಪ್ರಕರಣದ ಕುರಿತು ಕಾಲ್ಪನಿಕ ವಿಚಾರಗಳನ್ನು ಸೃಷ್ಟಿಸಿ, ಕೃತಕ ಬುದ್ದಿಮತ್ತೆಯ ನೆರವಿನಿಂದ ವಿಡಿಯೊ ಮಾಡಿ ಹರಿಯ ಬಿಡಲಾಗಿದೆ. ಸದರಿ ಪ್ರಕರಣದಲ್ಲಿ ಫಿರ್ಯಾದಿ ಸಾಕ್ಷಿಯಾಗಿದ್ದ ಚನ್ನಯ್ಯನಿಗೆ ಸಾಕ್ಷಿದಾರರ ಸಂರಕ್ಷಣೆ ಯೋಜನೆಯಡಿ ರಕ್ಷಣೆ ಒದಗಿಸಲಾಗಿತ್ತು. ಅವರ ಗುರುತು ಬಹಿರಂಗಪಡಿಸುವಂತಿರಲಿಲ್ಲ.
ಸಮೀರ್ ತನ್ನ ವಿಡಿಯೊದಲ್ಲಿ “ಸಾವಿರ ಜನರನ್ನು ರೇಪ್ ಮಾಡಿ ಕೊಲೆ ಮಾಡಿ ಮುಚ್ಚಿ ಹಾಕಿದ್ದಾರೆ. ಇದನ್ನು ಕೇಳಿದರೆ ನಿಮ್ಮ ರಕ್ತ ಕುದಿತ್ತಿಲ್ವಾ ಕರ್ನಾಟಕದ ಮೂಲೆ ಮೂಲೆಯಲ್ಲಿರುವವರು ಬೀದಿಗಿಳಿದು ಪ್ರತಿಭಟನೆ ಮಾಡಬೇಕು ಮತ್ತು ಅನ್ಯಾಯದ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತಬೇಕು” ಎಂಬ ಸಂದೇಶ ನೀಡಿದ್ದನು. ಈ ಮೂಲಕ ದೊಂಬಿ, ಸಾರ್ವಜನಿಕ ಶಾಂತಿಗೆ ಭಂಗ ತರುವ ಕೃತ್ಯ ಎಸಗಿದ್ದಾನೆ ಎಂದು ಧರ್ಮಸ್ಥಳದ ಪೊಲೀಸರು ಸ್ವಯಂಪ್ರೇರಿತವಾಗಿ 2025ರ ಜುಲೈ 12ರಂದು ಬಿಎನ್ಎಸ್ ಸೆಕ್ಷನ್ 240, 192, 353(1)(b) ಅಡಿ ಸಮೀರ್ ಮತ್ತು ದೂತ ಯೂಟ್ಯೂಬ್ ಚಾನಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.