₹900 ಕೋಟಿಗೂ ಹೆಚ್ಚಿನ ಕಸ್ಟಮ್ಸ್ ಸುಂಕ ಮರುಪಾವತಿಗಾಗಿ ದೆಹಲಿ ಹೈಕೋರ್ಟ್‌ಗೆ ಇಂಡಿಗೋ ಮೊರೆ

ತಮ್ಮ ಮಗ ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿರುವುದರಿಂದ ನ್ಯಾಯಮೂರ್ತಿ ಶೈಲ್ ಜೈನ್ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದರು.
Indigo
Indigo
Published on

ವಿದೇಶದಲ್ಲಿ ದುರಸ್ತಿ ಮಾಡಿ ಪುನಃ ಭಾರತಕ್ಕೆ ತರಲಾದ ವಿಮಾನ ಎಂಜಿನ್‌ಗಳು ಮತ್ತು ಬಿಡಿಭಾಗಗಳ ಮೇಲೆ ಮರು ವಿಧಿಸಲಾದ ₹900 ಕೋಟಿಗೂ ಹೆಚ್ಚಿನ ಮೊತ್ತದ ಕಸ್ಟಮ್ಸ್ ಸುಂಕ ಮರುಪಾವತಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ದೇಶದ ಅತಿದೊಡ್ಡ ಏರ್‌ಲೈನ್ಸ್‌ ಇಂಡಿಗೋವನ್ನು ನಿರ್ವಹಿಸುವ ಇಂಟರ್‌ ಗ್ಲೋಬ್‌ ಏವಿಯೇಷನ್‌ ಲಿಮಿಟೆಡ್‌ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ [ಇಂಟರ್‌ ಗ್ಲೋಬ್‌ ಏವಿಯೇಷನ್ ಮತ್ತು ಕಸ್ಟಮ್ಸ್‌ ಇಲಾಖೆ ಮರುಪಾವತಿ ವಿಭಾಗದ ಉಪ ಆಯುಕ್ತರ ನಡುವಣ ಪ್ರಕರಣ].

ಮರು-ಆಮದಿನ ಮೇಲೆ ಕಸ್ಟಮ್ಸ್ ಸುಂಕ ವಿಧಿಸುವುದು ಅಸಾಂವಿಧಾನಿಕ ಮತ್ತು ಒಂದೇ ವಹಿವಾಟಿನ ಮೇಲೆ ಎರಡು ಬಾರಿ ತೆರಿಗೆ ವಿಧಿಸುವುದಕ್ಕೆ ಅದು ಸಮ ಎಂದು ದೂರಿ ಇಂಡಿಗೋ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ಶೈಲ್ ಜೈನ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಇದೇ ವೇಳೆ ತಮ್ಮ ಮಗ ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿರುವುದರಿಂದ  ನ್ಯಾ. ಶೈಲ್ ಜೈನ್ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮತ್ತೊಂದು ಪೀಠಕ್ಕೆ ಮುಖ್ಯ ನ್ಯಾಯಮೂರ್ತಿಗಳು ವಹಿಸಲಿದ್ದಾರೆ.

Also Read
ಇಂಡಿಗೋ ವಿಮಾನ ಬಿಕ್ಕಟ್ಟು: ಸುಪ್ರೀಂ, ದೆಹಲಿ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಕೆ

ಇಂಡಿಗೋ ಪರ ವಾದ ಮಂಡಿಸಿದ ವಕೀಲ ವಿ. ಲಕ್ಷ್ಮಿಕುಮಾರನ್ ರಿಪೇರಿಯ ನಂತರ ಭಾರತಕ್ಕೆ ತರಲಾದ ಭಾಗಗಳ ಮೇಲೆ ಈಗಾಗಲೇ ಮೂಲ ಕಸ್ಟಮ್ಸ್ ಡ್ಯೂಟಿ ಪಾವತಿಸಲಾಗಿದೆ. ರಿಪೇರಿ “ಸೇವೆಗೆ” ಸೇರುವುದರಿಂದ, ಅದಕ್ಕೆ ಪ್ರತ್ಯೇಕವಾಗಿ ಮರು ಶುಲ್ಕದ ಮುಖಾಂತರ ಜಿಎಸ್‌ಟಿ ಕೂಡ ಪಾವತಿಸಲಾಗಿದೆ. ಆದರೆ ಕಸ್ಟಮ್ಸ್ ಇಲಾಖೆ ಅದೇ ವಹಿವಾಟನ್ನು “ಸರಕುಗಳ ಆಮದು ಎಂದು ಪರಿಗಣಿಸಿ ಮತ್ತೆ ಸುಂಕ ವಿಧಿಸಿದ್ದು ಇದು ಅಸಾಂವಿಧಾನಿಕ ಹಾಗೂ ಎರಡು ಬಾರಿ ವಿಧಿಸಲಾದ ತೆರಿಗೆ ಎಂದರು.

Also Read
ಅಹಮದಾಬಾದ್‌ ವಿಮಾನ ದುರಂತ: ನ್ಯಾಯಾಂಗ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಪೈಲಟ್ ತಂದೆಯ ಅರ್ಜಿ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ  ಕಸ್ಟಮ್ಸ್‌ ನ್ಯಾಯಮಂಡಳಿ ಇಂಡಿಗೋ ಪರ ತೀರ್ಪು ನೀಡಿದ್ದರೂ, ಇಲಾಖೆ ಈಗಲೂ ಸುಂಕ ವಸೂಲಿ ಮಾಡುತ್ತಿದೆ. ಜೊತೆಗೆ ಎಲ್ಲಾ ಬಿಲ್‌ಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪಾವತಿ ಮಾಡಲಾಗಿದೆ. ಸಂಬಂಧಪಟ್ಟ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್‌ ಐಟಿಸಿ ಲಿಮಿಟೆಡ್‌ ಪ್ರಕರಣದಲ್ಲಿ ನೀಡಿದ ತೀರ್ಪು ಇಲ್ಲಿ ಅನ್ವಯವಾಗುವುದಿಲ್ಲ. ಅದು ಸ್ವಯಂ ಪಾವತಿಸಿದ ಸುಂಕಕ್ಕೆ ಸಂಬಂಧಿಸಿದ ತೀರ್ಪು ಎಂದು ಇಂಡಿಗೋ ವಾದಿಸಿತು.

ಮಾರ್ಚ್ 2024ರಲ್ಲಿ ದೆಹಲಿ ಹೈಕೋರ್ಟ್ ಇನ್ನೊಂದು ಪ್ರಕರಣದಲ್ಲಿ ವಿದೇಶದಲ್ಲಿ ರಿಪೇರಿ ಕಾರ್ಯ ನಡೆದ ಬಳಿಕ ಅದನ್ನು ಮರು ಆಮದು ಮಾಡಿಕೊಂಡಾಗ ಅದನ್ನು ಸೇವಾ ಆಮದು ಎಂದು ಪರಿಗಣಿಸಬೇಕು ಎಂಬುದಾಗಿ ತೀರ್ಪು ನೀಡಿತ್ತು. ಜಿಎಸ್‌ಟಿ ವಿಧಿಸಿದ ನಂತರ ಕಸ್ಟಮ್ಸ್‌ ತೆರಿಗೆ ಕಾಯಿದೆಯಡಿ ಮತ್ತೆ ತೆರಿಗೆ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನೂ ಅಸಾಂವಿಧಾನಿಕ ಎಂದು ತಿಳಿಸಿ ರದ್ದುಪಡಿಸಿತ್ತು. ಈ ಪ್ರಕರಣ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

Kannada Bar & Bench
kannada.barandbench.com